ಭೋಪಾಲ್, ಅಕ್ಟೋಬರ್ 14: ಧ್ಯಾನ್ ಚಂದ್ ಟ್ರೋಫಿ ಪಂದ್ಯವಾಡಲು ತೆರಳುತ್ತಿದದ್ ನಾಲ್ವರು ಹಾಕಿ ಆಟಗಾರರು ಅಪಘಾತದಲ್ಲಿ ದುರಂತ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಹೊಷಂಗಾ ಬಾದ್ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ರೈಸಲ್ ಪುರ್ ಗ್ರಾಮದ ಬಳಿ ಆಟಗಾರರರಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಹೊಷಂಗಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವುದನ್ನು ದೆಹಾತ್ ಪೊಲೀಸ್ ಠಾಣಾಧಿಕಾರಿ ಆಶೀಶ್ ಪವಾರ್ ಖಚಿತಪಡಿಸಿದ್ದಾರೆ.
ಎದುರು ಗಡೆಯಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದು ಜಖಂ ಆಗಿದೆ ಎಂದು ತಿಳಿದು ಬಂದಿದೆ.
ನಾಲ್ವರು ಆಟಗಾರರ ಪೈಕಿ ಒಬ್ಬರ ಹುಟ್ಟುಹಬ್ಬ ಸಂಭ್ರಮಾಚರಣೆ ನಂತರ ಎಲ್ಲರೂ ಒಟ್ಟಿಗೆ ಹೊಷಂಗಾ ಬಾದ್ ಕಡೆಗೆ ತೆರಳುತ್ತಿದ್ದರು. ಸೋಮವಾರದಂದು ಧ್ಯಾನ್ ಚಂದ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಆಡಲು ಎಲ್ಲರೂ ಆಯ್ಕೆಯಾಗಿದ್ದರು.
ಮೃತರೆಲ್ಲರೂ 18 ರಿಂದ 22 ವರ್ಷ ವಯಸ್ಸಿನವರಾಗಿದ್ದು, ಷಹನವಾಜ್ ಹುಸೇನ್(ಇಂದೋರ್), ಆದರ್ಶ್ ಹರ್ದುವಾ(ಇತ್ರಾಸಿ), ಆಶೀಶ್ ಲಾ (ಜಬಲ್ ಪುರ್), ಅನಿಕೇತ್ ವರುಣ್ (ಗ್ವಾಲಿಯರ್) ಮೃತಪಟ್ಟವರು. ಶಾನ್ ಗ್ಲಾಡ್ವ್ವಿನ್ (ಇತ್ರಾಸಿ), ಸಾಹಿಲ್ ಚೌರೆ(ಇತ್ರಾಸಿ), ಅಕ್ಷಯ್ ಅವಸ್ಥಿ(ಗ್ವಾಲಿಯರ್) ಗಾಯಗೊಂಡಿದ್ದು, ನರ್ಮದಾ ಆಪ್ನಾ ಆಸ್ಪತ್ರೆ, ಹೊಷಂಗಾಬಾದ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಈ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಗಾಯಗೊಂಡವರಿಗೆ ಸರ್ಕಾರದ ವತಿಯಿಂದ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.