ಮಡಿಕೇರಿ, ಮಾ. 30: ಸೋಮವಾರಪೇಟೆಯಲ್ಲಿನ ಅಪೂರ್ಣ ಸಿಂಥೆಟಿಕ್ ಹಾಕಿ ಮೈದಾನಕ್ಕೆ ಎಫ್.ಐ.ಎಚ್ ಯೋಗ್ಯತಾ ಪತ್ರ ನೀಡಿರುವುದನ್ನು ತಡೆ ಹಿಡಿಯುವಂತೆ ಕೋರಿ ಡಿ.ವೈ.ಎಸ್.ಎಸ್. (ಡೈರೆಕ್ಟರ್ ಆಫ್ ಯೂತ್ ಸರ್ವಿಸಸ್ ಆ್ಯಂಡ್ ಸ್ಪೋರ್ಟ್ಸ್) ನ ಆಯುಕ್ತರ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದಾಗಿ 'ಹಾಕಿ ಕರ್ನಾಟಕ'ದ ಕಾರ್ಯದರ್ಶಿ ಎ.ಬಿ ಸುಬ್ಬಯ್ಯ ಅವರು ತಿಳಿಸಿದ್ದಾರೆ.
ಸೋಮವಾರಪೇಟೆಯಲ್ಲಿ 7 ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭಗೊಂಡು ಇನ್ನೂ ನಿರ್ಮಾಣದ ಹಂತದಲ್ಲಿರುವ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನಕ್ಕೆ ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಹಾಕಿ ಸಂಸ್ಥೆಯಿಂದ ಗುಣಮಟ್ಟದ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರವನ್ನು ತಾ.24 ರಂದು ನೀಡಲಾಯಿತು. ಅಪೂರ್ಣ ಕಾಮಗಾರಿಗೆ ಯೋಗ್ಯತಾ ಪತ್ರ ನೀಡಿರುವುದರ ಹಿಂದೆ ತರಾತುರಿಯಲ್ಲಿ ಬಿಲ್ ಮಾಡಿಸಿಕೊಳ್ಳುವ ಹುನ್ನಾರ ಅಡಗಿದೆ ಎಂದು ಕ್ರೀಡಾಭಿಮಾನಿಗಳು ಆರೋಪಿಸಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.
ಕಾಮಗಾರಿ ಪೂರ್ಣಗೊಳ್ಳದೇ ಹಾಕಿ ಟರ್ಫ್ ಮೈದಾನಕ್ಕೆ ಸಿಕ್ಕಿತು ಗುಣಮಟ್ಟ ಪ್ರಮಾಣ ಪತ್ರ !
ವರದಿ ಗಮನಿಸಿದ ಸುಬ್ಬಯ್ಯ ಅವರು, ಯಾವುದೇ ಪರಿಶೀಲನೆ, ಪಂದ್ಯಾವಳಿ ನಡೆಯದೆಯೇ ಅಪೂರ್ಣ ಮೈದಾನಕ್ಕೆ ದೃಢೀಕರಣ ಪತ್ರ ನೀಡಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರಲ್ಲದೆ 'ಎಫ್.ಐ.ಎಚ್' ನಿಂದ ದೃಢೀಕರಣ ಪತ್ರ ನೀಡಬೇಕಾದರೆ, ಟರ್ಫ್ ಮೈದಾನದ ನಿರ್ವಹಣೆಗೆ ಸಮರ್ಪಕ ನೀರಿನ ವ್ಯವಸ್ಥೆ ಇರಬೇಕು, ಮೈದಾನವು ಸಮತಟ್ಟಾಗಿರಬೇಕು ಎಂದಿದ್ದಾರೆ.
ಇವೆರಡು ಮಾನದಂಡಗಳನ್ನೂ ಈ ಮೈದಾನವು ಸದ್ಯದ ಮಟ್ಟಿಗೆ ಪೂರೈಸಿರುವುದಿಲ್ಲ. ಇದಲ್ಲದೆ ದೃಢೀಕರಣ ಪತ್ರ ಮಾನ್ಯತಾ ಪಂದ್ಯಾಟವು ನಡೆಸಿಲ್ಲ. ಡಿ.ವೈ.ಎಸ್.ಎಸ್ ನ ಆಯುಕ್ತರಿಗೆ ಈ ಸಂಬಂಧ ಗಮನಕ್ಕೆ ತಂದು ದೃಢೀಕರಣ ಪತ್ರ ತಡೆಹಿಡಿಯಲು ಪ್ರಯತ್ನಿಸುವುದಾಗಿ ಸುಬ್ಬಯ್ಯ ಅವರು ಹೇಳಿದ್ದಾರೆ.