ನವದೆಹಲಿ, ಆಗಸ್ಟ್ 11: ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಹಾಕಿ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುವ ಮೂಲಕ ಕ್ರೀಡಾಪ್ರೇಮಿಗಳಿಗೆ ಭಾರೀ ಉಡುಗೊರೆ ನೀಡಿದೆ. ಸುದೀರ್ಘ 41 ವರ್ಷಗಳ ಬಳಿಕ ಭಾರತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕವನ್ನು ಗಳಿಸುವಂತಾಯಿತು. ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿದೆ. ಹೀಗಾಗಿ ಭಾರತೀಯ ಹಾಕಿ ತಂಡದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಹಾಕಿ ತಂಡವು ಕೂಡ ಮುಂದಿನ ದಿನಗಳಲ್ಲಿ ತನ್ನ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಗಮನ ಹರಿಸಲು ಮುಂದಾಗಿದೆ. ಈ ಬಗ್ಗೆ ಭಾರತೀಯ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಎರಡು ಪಂದ್ಯಗಳಲ್ಲಿ ಮಾತ್ರ ಭಾರತ ಸೋಲು: ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಸೋಲು ಕಂಡಿತ್ತು. ಮೊದಲನೇಯದಾಗಿ ಪೂಲ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 1-7 ಅಂತರದಿಂದ ಭಾರೀ ಸೋಲು ಕಂಡಿತ್ತು. ಆದರೆ ಬಳಿಕ ತನ್ನ ಪ್ರದರ್ಶನವನ್ನು ಮತ್ತಷ್ಟು ಉತ್ತಮಪಡಿಸಿಕೊಂಡ ಭಾರತೀಯ ಆಟಗಾರರ ತಂಡ ಸೆಮಿಫೈನಲ್ವರೆಗೂ ತಲುಪಿತ್ತು. ಸೆಮಿಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ ಆರಂಭದಲ್ಲಿ ಮುನ್ನಡೆ ಸಾಧಿಸಿದ ಹೊರತಾಗಿಯೂ ಅಂತಿಮವಾಗಿ 2-5 ಗೋಲುಗಳ ಅಂತರದಿಂದ ಸೋಲು ಕಂಡಿತ್ತು. ಈ ಮೂಲಕ ಕಂಚಿನ ಪದಕ್ಕಾಗಿ ಪ್ಲೇಆಫ್ ಪಂದ್ಯದಲ್ಲಿ ಆಡಿ ಗೆದ್ದು ಬೀಗಿತ್ತು.
ಎನ್ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆ
ಹೊಸ ಪೀಳಿಗೆಗೆ ತಂಡದ ಸಾಧನೆ ಸ್ಪೂರ್ತಿ: ಈ ಅದ್ಭುತ ಪ್ರದರ್ಶನದ ಬಳಿಕ ಭಾರತೀಯ ಹಾಕಿ ತಂಡ ಇದೀಗ ತವರಿಗೆ ಮರಳಿದೆ. ಈ ಸಂದರ್ಭದಲ್ಲಿ ನಾಯಕ ಮನ್ಪ್ರೀತ್ ಸಿಂಗ್ ಮಾಧ್ಯಮದ ಜೊತೆಗೆ ಸಂವಾದವನ್ನು ನಡೆಸಿದ್ದಾರೆ.ಈ ಸಂದರ್ಭದಲ್ಲಿ ಮನ್ಪ್ರೀತ್ ಸಿಂಗ್ ಭಾರತ ಒಲಿಂಪಿಕ್ಸ್ನಲ್ಲಿ ಇದಕ್ಕಿಂತ ಮೊದಲು 1980ರಲ್ಲಿ ಪದಕವನ್ನು ಗೆದ್ದಾಗ ನಮ್ಮ ತಂಡದ ಯಾರು ಕೂಡ ಹುಟ್ಟಿರಲಿಲ್ಲ. ಹೀಗಾಗಿ ತಮ್ಮ ತಂಡದ ಸಾಧನೆಯಿಂದ ಈಗಿನ ಪೀಳಿಗೆ ಸ್ಪೂರ್ತಿಯನ್ನು ಪಡೆದುಕೊಳ್ಳಲಿದೆ. ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮುಂದಿನ ಒಲಿಂಪಿಕ್ಸ್ ನ ಗುರಿ: ಈ ಸಂದರ್ಭದಲ್ಲಿ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಬಳಿ 2024ರ ಪ್ಯಾರೀಸ್ ಒಲಿಂಪಿಕ್ಸ್ನ ಗುರಿಯ ಬಗ್ಗೆ ಪ್ರಶ್ನೆಯನ್ನು ಮಾಡಲಾಯಿತು. ಇದಕ್ಕೆ ಉತ್ತರಿಸಿದ ನಾಯಕ ಮನ್ಪ್ರೀತ್ ಭಾರತ ಹಾಕಿ ತಂಡ ಪ್ಯಾರೀಸ್ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದೆ ಎಂದಿದ್ದಾರೆ. ಆದರೆ ಅದಕ್ಕೂ ಮುನ್ನ ಭಾರತೀಯ ಹಾಕಿ ತಂಡ ಈ ಬಾರಿಯ ಕಂಚಿನ ಪದಕದ ಗೆಲುವನ್ನು ಸಂಭ್ರಮಿಸಬೇಕಿದೆ ಎಂದು ಹೇಳಿದ್ದಾರೆ.
ಮುಂದಿನ ಹಾದಿಯ ಬಗ್ಗೆ ವಿವರಿಸಿದ ಮನ್ಪ್ರೀತ್: ಇನ್ನು ಇದೇ ಸಂದರ್ಭದಲ್ಲಿ ಹಾಕಿ ತಂಡದ ನಾಯಕ ಮನ್ಪ್ರೀತ್ ಭಾರತೀಯ ಹಾಕಿ ತಂಡದ ಮುಂದಿನ ಹಾದಿಯ ಬಗ್ಗೆಯೂ ವಿವರಿಸಿದ್ದಾರೆ. "ನಮ್ಮ ಶಿಬಿರ ಮತ್ತೆ ಆರಂಭವಾದ ತಕ್ಷಣವೇ ನಮ್ಮ ಮುಂದಿನ ಸಿದ್ಧತೆ ಆರಂಭವಾಗುತ್ತದೆ. ನಾವು ಯಾವೆಲ್ಲಾ ಕಡೆಗಳಲ್ಲಿ ನಮ್ಮ ಪ್ರದರ್ಶನಗಳನ್ನು ಉತ್ತಮಪಡಿಸಿಕೊಳ್ಳಬಹುದು ಎಂಬುದರ ಕಡೆಗೆ ಗಮನಹರಿಸಲಿದ್ದೇವೆ. ಯಾಕೆಂದರೆ ಮುಂದಿನ ದಿನಗಳಲ್ಲಿ ಕೆಲ ಪ್ರಮುಖ ಟೂರ್ನಮೆಂಟ್ಗಳು ನಮ್ಮ ಮುಂದಿದೆ. ಉದಾಹರಣೆಗೆ ಒಲಿಂಪಿಕ್ಸ್ಗೆ ಅರ್ಹತಾ ಸುತ್ತಿನಂತೆ ಕಾರ್ಯನಿರ್ವಹಿಸುವ ಏಷ್ಯಾಕಪ್ ಟೂರ್ನಮೆಂ್ ಬರಲಿದೆ. ಬಳಿಕ ನಾವು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಆಡಲಿದ್ದೇವೆ. ಅದಾದ ಬಳಿಕ 2023ರಲ್ಲಿ ಹಾಕಿ ವಿಶ್ವಕಪ್ ನಡೆಯಲಿದ್ದು ಭಾರತವೇ ಅದನ್ನು ಆಯೋಜನೆ ಮಾಡಲಿದೆ. ಈ ಎಲ್ಲಾ ಟೂರ್ನಿಗಳಲ್ಲಿಯೂ ನಾವು ಉತ್ತಮ ಪ್ರದರ್ಶನವನ್ನು ನೀಡಬೇಕಿದೆ" ಎಂದಿದ್ದಾರೆ ಮನ್ಪ್ರೀತ್ ಸಿಂಗ್.