ಮಡಿಕೇರಿ ಮಾ.29: ಮಡಿಕೇರಿಯ ತಾಲ್ಲೂಕು ಕೇಂದ್ರವಾಗಿರುವ ಸೋಮವಾರಪೇಟೆ ಜನತೆ , ಕ್ರೀಡಾ ಪಟುಗಳ ಮತ್ತು ಕ್ರೀಡಾ ಪ್ರೇಮಿಗಳ ಬಹಳ ವರ್ಷದ ಕನಸಾಗಿದ್ದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನವನ್ನು ಸರ್ಕಾರ ಮಂಜೂರು ಮಾಡಿ ಬರೋಬ್ಬರಿ 7 ವರ್ಷಗಳ ನಂತರವೂ ಇನ್ನೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯವೇ ಇದಕ್ಕೆ ಕಾರಣ.
ಅಂತೂ ಇಂತೂ ಕುಂಟುತ್ತಲೇ ಸಾಗಿ ಬಂದ ಕಾಮಗಾರಿಯು ಮುಕ್ತಾಯದ ಹಂತಕ್ಕೂ ಬಂದಿಲ್ಲದಿರುವುದು ಶೋಚನೀಯ ಸಂಗತಿ. ಆದರೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕ್ರೀಡಾ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರನ ಅತೀವ ಆಸಕ್ತಿಯಿಂದಾಗಿ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಯಿಂದ ಈಗಲೇ ಗುಣಮಟ್ಟ ಯೋಗ್ಯತಾ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವುದು ಜನತೆಯ ಹುಬ್ಬೇರುವಂತೆ ಮಾಡಿದೆ.
ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಹಾಕಿ ಸಂಸ್ಥೆಯಿಂದ ಗುಣಮಟ್ಟದ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರ ನೀಡಿ ಕಾಮಗಾರಿ ತೃಪ್ತಿದಾಯಕ ವಾಗಿದೆ ಎಂದು ದೃಢೀಕರಣ ನೀಡಲಾಗಿದೆ. ಅಸಲಿಗೆ ಮೈದಾನದಲ್ಲಿ ಟರ್ಫ್ ಅಳವಡಿಸಿರುವುದನ್ನು ಹೊರತು ಪಡಿಸಿದರೆ ಇನ್ನಿತರ ಕಾಮಗಾರಿಗಳನ್ನು ನಡೆಸಿಲ್ಲ. ಟರ್ಫ್ ನಿರ್ವಹಣೆಗೆ ಮೂಲಭೂತವಾಗಿ ಬೇಕಾದ ನೀರಿನ ವ್ಯವಸ್ಥೆಯನ್ನೇ ಮಾಡದಿದ್ದರೂ ಫೆಡರೇಷನ್ನಿಂದ ದೃಢೀಕರಣ ಪತ್ರ ಸಿಕ್ಕಿದ್ದಾದರೂ ಹೇಗೆ? ಎಂಬ ಪ್ರಶ್ನೆ ಇದೀಗ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ.
ನೀರಿಗಾಗಿ ಮೈದಾನದ ಮೂಲೆಯಲ್ಲಿ ಬೋರ್ವೆಲ್ ಕೊರೆಯಲಾಗಿದ್ದರೂ ಅದಕ್ಕೆ ಮೋಟಾರ್ ಅಳವಡಿಸಿಲ್ಲ, ಪೈಪ್ಲೈನ್ ಮಾಡಿಲ್ಲ. ನೀರು ಸಂಗ್ರಹಕ್ಕೆ ಬೃಹತ್ ಟ್ಯಾಂಕ್ ಕೂಡ ನಿರ್ಮಾಣವಾಗಿಲ್ಲ. ಟ್ಯಾಂಕ್ ನಿರ್ಮಿಸಲು ಗುಂಡಿ ತೋಡಿದ್ದನ್ನು ಹೊರತುಪಡಿಸಿದರೆ ಕಾಮಗಾರಿ ಪ್ರಾರಂಭಿಸಿಲ್ಲ. ಮೈದಾನದ ಸುತ್ತಲೂ ಚರಂಡಿ, ಮೆಸ್, ಕ್ರೀಡಾಪಟುಗಳಿಗೆ ಬೇಕಾಗಿರುವ ಕೊಠಡಿ, ಮೋಟಾರ್ ಕೊಠಡಿ, ಸಂಪ್, ಇಂಟರ್ಲಾಕ್ ಅಳವಡಿಸುವುದು ಸೇರಿದಂತೆ ಇನ್ನೂ ಶೇ.40ರಷ್ಟು ಕಾಮಗಾರಿಗಳು ಬಾಕಿ ಉಳಿದಿದೆ. ಆದರೂ ಎಫ್ಐಹೆಚ್ನಿಂದ ದೃಢೀಕರಣ ಪತ್ರ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.
2013ರಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. 3.40 ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಬರೋಬ್ಬರಿ ಆರು ವರ್ಷ ಕಳೆದರೂ ಇಲ್ಲಿ ಟರ್ಫ್ ಕಾಮಗಾರಿ ನಡೆಯಲಿಲ್ಲ. ಸ್ಥಳೀಯ ಹಾಕಿ ಪ್ರೇಮಿಗಳು ಶಾಸಕ ಅಪ್ಪಚ್ಚುರಂಜನ್ ಅವರ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮ ಈ ಹಿಂದಿನ ಎಸ್ಟಿಮೇಟ್ಗಿಂತಲೂ 75 ಲಕ್ಷ ಹೆಚ್ಚು ಅನುದಾನ ಒದಗಿಸಿ ಒಟ್ಟು 4.15 ಕೋಟಿ ವೆಚ್ಚದಲ್ಲಿ ಟರ್ಫ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದುದು ಇದೀಗ ಸ್ಥಗಿತಗೊಂಡಿದೆ.
ಹೈದರಾಬಾದ್ ಮೂಲದ ಗ್ರೇಟ್ ಸ್ಪೋರ್ಟ್ಸ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಾಮಗಾರಿಯ ಹೊಣೆ ಹೊತ್ತಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಮೈದಾನ ನಿರ್ಮಾಣವಾಗುವ ಆಶಾಭಾವನೆ ಎಲ್ಲರಲ್ಲೂ ಮೂಡಿತ್ತು. ಕ್ರೀಡಾಪ್ರೇಮಿಗಳ ನಿರೀಕ್ಷೆಯಂತೆ ಕಾಮಗಾರಿಯೂ ಪ್ರಾರಂಭಗೊಂಡಿತು. ಈ ನಡುವೆ ಮೈದಾನದ ಮೇಲುಸ್ತುವಾರಿಯಾಗಿ ಶಾಸಕರ ಸಲಹೆಯಂತೆ ಸಮಿತಿ ರಚಿಸಲಾಗಿದ್ದು, ಸಮಿತಿಯ ಪ್ರಮುಖರು ಕಾಮಗಾರಿಯ ಬಗ್ಗೆ ಆಗಾಗ್ಗೆ ಗಮನ ಹರಿಸುತ್ತಿದ್ದರು.
ಮೈದಾನಕ್ಕೆ ಡಾಂಬರು ಹಾಕುವ ಸಂದರ್ಭ ಕಳಪೆ ಕಂಡುಬಂದ ಹಿನ್ನೆಲೆ ಸಮಿತಿಯ ಪದಾಧಿಕಾರಿಗಳೇ ತಡೆದು ಮರು ಡಾಂಬರೀಕರಣವನ್ನೂ ಮಾಡಿಸಿದ್ದರು. ಅದಾದ ನಂತರ ಸಿಂಥೆಟಿಕ್ ಮ್ಯಾಟ್ ಅಳವಡಿಸಲಾಯಿತು. ಇದೀಗ ಓವರ್ ಹೆಡ್ ಟ್ಯಾಂಕ್, ಮೈದಾನದ ಸುತ್ತಲೂ ಫೆನ್ಸಿಂಗ್, ತಡೆಗೋಡೆ ನಿರ್ಮಾಣ, ನೀರಿನ ಸೌಲಭ್ಯ ಸೇರಿದಂತೆ ಇತರ ಕಾಮಗಾರಿ ಬಾಕಿ ಇರುವಂತೆಯೇ ಸಮಿತಿಯ ಗಮನಕ್ಕೆ ಬಾರದಂತೆ ಎಫ್ಐಹೆಚ್ನಿಂದ ದೃಢೀಕರಣ ಪತ್ರ ನೀಡಲಾಗಿದೆ.
ಇದರಿಂದಾಗಿ ಎಫ್ಐಹೆಚ್ ಮತ್ತು ಗುತ್ತಿಗೆದಾರ ಕಂಪೆನಿಯ ಮೇಲೆ ಅನುಮಾನ ಮೂಡುತ್ತಿದ್ದು, ಕಾಮಗಾರಿ ಪೂರ್ಣಗೊಳಿಸದೇ ಬಿಲ್ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಸಮಿತಿಯ ಪದಾಧಿಕಾರಿಗಳು ಮತ್ತು ಕ್ರೀಡಾಭಿಮಾನಿಗಳು ಆರೋಪಿಸುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳ್ಳದೇ ಯೋಗ್ಯತಾ ಪ್ರಮಾಣ ಪತ್ರ ಪಡೆದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ.