ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಎಂದೇ ಹಲವಾರು ವರ್ಷಗಳಿಂದ ಅನೇಕ ಭಾರತೀಯರು ತಿಳಿದುಕೊಂಡಿದ್ದಾರೆ. ಇನ್ನು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಸಹ ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆ ಎಂದೇ ಕಲಿಸಲಾಗುತ್ತಿದೆ. ನೀವು ಕೂಡ ನಿಮ್ಮ ಪ್ರಾಥಮಿಕ ಶಾಲಾ ಶಿಕ್ಷಣದ ಸಮಯದಲ್ಲಿ ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಓದಿಕೊಂಡು ಮುಂದೆ ಬಂದಿರುತ್ತೀರಿ. ಆದರೆ ಹಾಕಿ ರಾಷ್ಟ್ರೀಯ ಕ್ರೀಡೆ ಅಲ್ಲ, ಅದು ದೇಶದ ಇತರ ಕ್ರೀಡೆಗಳಲ್ಲಿ ಒಂದು ಎಂಬ ಉತ್ತರವನ್ನು ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾ ಸಚಿವಾಲಯ ತಿಳಿಸಿತ್ತು.
ಹೌದು ಉತ್ತರ ಪ್ರದೇಶ ಮೂಲದ ಶಿವಮ್ ಕುಮಾರ್ ಗುಪ್ತಾ ಎಂಬ ಕಾನೂನು ವಿದ್ಯಾರ್ಥಿಯೊಬ್ಬ ಮಾಹಿತಿ ಹಕ್ಕಿನ ಅಡಿಯಲ್ಲಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು ಎಂದು ಕ್ರೀಡಾ ಸಚಿವಾಲಯಕ್ಕೆ ಪ್ರಶ್ನೆಯನ್ನು ಹಾಕಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕ್ರೀಡಾ ಸಚಿವಾಲಯ ಭಾರತಕ್ಕೆ ಯಾವುದೇ ನಿರ್ದಿಷ್ಟವಾದ ರಾಷ್ಟ್ರೀಯ ಕ್ರೀಡೆ ಇಲ್ಲ, ಕೇಂದ್ರ ಕ್ರೀಡಾ ಸಚಿವಾಲಯವು ದೇಶದ ಪ್ರತಿಯೊಂದು ಕ್ರೀಡೆಯನ್ನು ಸಹ ಸಮನಾಗಿ ಪ್ರೋತ್ಸಾಹಿಸುತ್ತದೆ, ಅದುವೇ ನಮ್ಮ ಗುರಿ ಎಂದು ಉತ್ತರವನ್ನು ನೀಡಿತ್ತು.
ಇನ್ನು ಕೇಂದ್ರ ಕ್ರೀಡಾ ಸಚಿವಾಲಯ ನೀಡಿದ ಈ ಉತ್ತರಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವಿರೋಧಗಳು ವ್ಯಕ್ತವಾದವು. ಹಾಕಿಯನ್ನು ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಪರಿಗಣಿಸಬೇಕು ಎಂಬ ಕೂಗುಗಳು ದೊಡ್ಡಮಟ್ಟದಲ್ಲಿಯೇ ಕೇಳಿಬಂದವು. ಅದರಲ್ಲಿಯೂ ಇತ್ತೀಚೆಗೆ ನಡೆದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ಆಟಗಾರರು ನೀಡಿದ ಉತ್ತಮ ಪ್ರದರ್ಶನದ ನಂತರ ಹಾಕಿ ಆಟವನ್ನು ರಾಷ್ಟ್ರೀಯ ಕ್ರೀಡೆ ಎಂದು ಘೋಷಣೆ ಮಾಡಬೇಕೆಂಬ ಕೂಗು ಇನ್ನಷ್ಟು ಹೆಚ್ಚಾಯಿತು.
ಹೌದು ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಇತಿಹಾಸವನ್ನು ಮರುಕಳಿಸಿತು. ಭಾರತದ ಮಹಿಳೆಯರ ಹಾಕಿ ತಂಡ ಕೂಡ ಉತ್ತಮ ಪ್ರದರ್ಶನವನ್ನು ನೀಡಿತು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಬೇಕೆಂಬ ಕೂಗು ಹೆಚ್ಚಾಗತೊಡಗಿತು.
ಓವಲ್ ಟೆಸ್ಟ್: ಪಂದ್ಯಶ್ರೇಷ್ಠ ಪ್ರಶಸ್ತಿಗೆ ನನಗಿಂತ ಈ ಆಟಗಾರ ಅರ್ಹ ಎಂದ ರೋಹಿತ್ ಶರ್ಮಾ!
ಟೋಕಿಯೊ ಒಲಿಂಪಿಕ್ಸ್ ಮುಗಿಯುತ್ತಿದ್ದಂತೆ ವಿಶಾಲ್ ತಿವಾರಿ ಎಂಬ ವಕೀಲರೊಬ್ಬರು ಹಾಕಿಯನ್ನು ಭಾರತದ ರಾಷ್ಟ್ರೀಯ ಕ್ರೀಡೆಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಹಾಕಿ ನಮ್ಮ ರಾಷ್ಟ್ರದ ರಾಷ್ಟ್ರೀಯ ಕ್ರೀಡೆಯಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಹಾಕಿ ಆಟಕ್ಕೆ ಸಿಗಬೇಕಾದ ಬೆಂಬಲ ಸರ್ಕಾರದಿಂದ ಸಿಕ್ಕಿಲ್ಲ ಮತ್ತು ಹಾಕಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ ಹೀಗಾಗಿ ಹಾಕಿ ಆಟವನ್ನು ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಬೇಕೆಂದು ವಕೀಲ ವಿಶಾಲ್ ತಿವಾರಿ ಪತ್ರದಲ್ಲಿ ಉಲ್ಲೇಖಿಸಿದ್ದರು.
ಆದರೆ, ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಹಾಕಿ ಕ್ರೀಡೆಯನ್ನು ಗುರುತಿಸಲು ಭಾರತೀಯ ಒಕ್ಕೂಟ ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರ ಅಧ್ಯಕ್ಷತೆಯಲ್ಲಿ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ನ್ಯಾಯಪೀಠವು ಈ ನಿರ್ಧಾರವನ್ನು ಕೈಗೊಂಡಿದೆ.
'ವಿಶ್ವ ಕ್ರಿಕೆಟ್ನಲ್ಲಿ ಭಾರತ ಪವರ್ಹೌಸ್, ಕೊಹ್ಲಿ ಸೂಪರ್ಸ್ಟಾರ್' ಎಂದು ಕೊಂಡಾಡಿದ ದಿಗ್ಗಜ ಕ್ರಿಕೆಟಿಗ
ಸದ್ಯ ಸುಪ್ರೀಂಕೋರ್ಟ್ ನ್ಯಾಯಪೀಠವು ಕೈಗೊಂಡಿರುವ ಈ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು ಭಾರತದ ಕ್ರೀಡಾಭಿಮಾನಿಗಳು ಸುಪ್ರೀಂಕೋರ್ಟ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.