ವಿಶ್ವಕಪ್ ವಿಜೇತ ಭಾರತ ಕಬಡ್ಡಿ ತಂಡದ ಆಟಗಾರನಾಗಿದ್ದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಬಂಟ್ವಾಳದ ಮಾಣಿಯ ಉದಯ್ ಚೌಟ ಅವರು ಇಹಲೋಕ ತ್ಯಜಿಸಿದ್ದಾರೆ.
ಉದಯ್ ಚೌಟ ಅವರು 2007ರಲ್ಲಿ ನಡೆದಿದ್ದ ದ್ವಿತೀಯ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಜಯ ಸಾಧಿಸಿದ್ದ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಎಂಬ ಪ್ರಶಸ್ತಿಗೆ ಭಾಜನರಾಗಿದ್ದರು. ಸದ್ಯ ಬ್ಯಾಂಕ್ ಆಫ್ ಬರೋಡಾದ ಸೂರತ್ಕಲ್ ಕಚೇರಿಯಲ್ಲಿ ಉಪ ಪ್ರಬಂಧಕರಾಗಿ ಕೆಲಸ ನಿರ್ವಹಿಸುತ್ತಿದ್ದ ಉದಯ್ ಚೌಟ 48ನೇ ವಯಸ್ಸಿಗೆ ಅಸುನೀಗಿದ್ದಾರೆ.
ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆಯ ವೆಂಕಪ್ಪ ಚೌಟ ಹಾಗೂ ಬೇಬಿ ದಂಪತಿಗಳ ಪುತ್ರನಾದ ಉದಯ್ ಚೌಟ ಅವರು ಬ್ಯಾಂಕ್ ಆಫ್ ಬರೋಡಾಗೆ ಸೇರುವ ಮುನ್ನ ಏರ್ ಇಂಡಿಯಾ ಹಾಗೂ ಕೆಪಿಟಿಸಿಎಲ್ ಉದ್ಯೋಗವನ್ನು ಸಹ ನಿರ್ವಹಿಸಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೆದುಳು ರಕ್ತಸ್ರಾವದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಇನ್ನು ಉದಯ್ ಚೌಟ ಅವರು ತಾಯಿ, ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಇನ್ನು 2007ರಲ್ಲಿ ನಡೆದಿದ್ದ ಕಬಡ್ಡಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ಭಾರತ 29-19 ಅಂತರದಲ್ಲಿ ಗೆಲುವು ಸಾಧಿಸಿತ್ತು ಹಾಗೂ ಇದೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದಿಟ್ಟಿದ್ದ ಉದಯ್ ಚೌಟ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ರಾಜ್ಯಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದ ಇವರು ಜ್ಯೂನಿಯರ್ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು ಹಾಗೂ 2000ದಿಂದ 2008ರವರೆಗೆ ಭಾರತ ಕಬಡ್ಡಿ ತಂಡದಲ್ಲಿದ್ದರು.
ಇದೀಗ ಅಕಾಲಿಕ ಮರಣ ಹೊಂದಿರುವ ಉದಯ್ ಚೌಟ ಅವರಿಗೆ ಅಪಾರ ಅಭಿಮಾನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.