ಗೋಪಾಲಪ್ಪ ಸಾಧನೆಗಳು
ಬೆಂಗಳೂರಿನ ಕಲಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಆರಂಭಿಸಿದ ಗೋಪಾಲಪ್ಪ, ಅರ್ಜುನ ಪ್ರಶಸ್ತಿ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಪಟು ಬಿ.ಸಿ.ರಮೇಶ್ ಬಳಿ ತರಬೇತಿ ಪಡೆದರು. ನಂತರ 2007ರಲ್ಲಿ ತಮಿಳುನಾಡಿನ ಸೇಲಂನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದರು. ಬಳಿಕ ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ತಂಡವು ದ್ವಿತೀಯ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
2001ರಲ್ಲಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದ ರಾಷ್ಟ್ರೀಯ ಹಿರಿಯರ 54ನೇ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, 2010ರಲ್ಲಿ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹಿರಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಮತ್ತು ಅದೇ ವರ್ಷ ತಮಿಳುನಾಡಿನಲ್ಲಿ ಆಯೋಜನೆಯಾಗಿದ್ದ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದರು.
ಬೆಸ್ಟ್ ರೈಡರ್ ಆಗಿ ಖ್ಯಾತಿ
2012ರಲ್ಲಿ ಚೀನಾದಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಆಟಗಾರ ಗೋಪಾಲಪ್ಪ ಎಂಬುದು ವಿಶೇಷ. ಆಗ ಪಾಕಿಸ್ತಾನ, ಕೊರಿಯಾ ಮತ್ತು ಇರಾನ್ ದೇಶದ ತಂಡಗಳೊಂದಿಗೆ ಸೆಣಸಾಡಿ ಭಾರತ ತಂಡ ತೃತೀಯ ಸ್ಥಾನ ಗಳಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು.
ಶ್ರೇಷ್ಠ ರೈಡರ್: ಕಬಡ್ಡಿಯಲ್ಲಿ ಸೆಂಟರ್ ಲೈನ್ನಿಂದ ಬ್ಲಾಕ್ ಲೈನ್ ಕ್ರಾಸ್ ಮಾಡಿ ಎದುರಾಳಿಗಳನ್ನು ದಾಟಿ ಹೊರಬರುವುದು ಮತ್ತು ರೈಡ್ ಮಾಡಿ ಬೋನಸ್ ಅಂಕ ಪಡೆದು ವಾಪಸ್ ಆಗುವುದು ಹಾಗೂ ಅಂಕಣದಲ್ಲಿ ಮುನ್ನುಗ್ಗಿ ರೈಡ್ ಮಾಡಿ ಎದುರಾಳಿ ಕ್ಯಾಚರ್ ಅನ್ನು ಅಂಕಣದೊಳಗೆ ಎತ್ತಿಕೊಂಡು ಹೋಗುವುದು ಇವರಿಗೆ ಕರಗತವಾದ ಕೌಶಲ. ಈ ವಿಶಿಷ್ಟ ಕೌಶಲವೇ ಗೋಪಾಲಪ್ಪ ಅವರಿಗೆ ಚೀನಾದ ಪಂದ್ಯಾವಳಿಯಲ್ಲಿ ಶ್ರೇಷ್ಠ ರೈಡರ್ ಪುರಸ್ಕಾರ ದೊರಕಿಸಿಕೊಟ್ಟಿತು.
ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ
ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಬೆಂಗಳೂರಿನ ಶಾಖೆಯೊಂದರಲ್ಲಿ ಉದ್ಯೋಗಿಯಾಗಿದ್ದ ಗೋಪಾಲಪ್ಪ ಎರಡು ವರ್ಷಗಳಿಂದ ಸ್ವಗ್ರಾಮ ಕುಪ್ಪೂರಿನಲ್ಲಿ ಗ್ರಾಮೀಣ ಭಾಗದ ಯುವಕರಲ್ಲಿ ಕಬಡ್ಡಿ ಬಗ್ಗೆ ಅರಿವು ಮೂಡಿಸುತ್ತಿದ್ದರು. ಪ್ರತಿನಿತ್ಯ ತರಬೇತಿ ನೀಡುವ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆ, ಕೊರೊನಾ ಪಾಸಿಟಿವ್ ಬಂದ ಕಾರಣ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಯಾಗದೆ ಇಂದು ಬೆಳಗ್ಗೆ ಮೃತ ಪಟ್ಟಿದ್ದಾರೆ. ಮೃತರಿಗೆ ಒಂದು ಗಂಡು ಒಂದು ಹೆಣ್ಣು ಮಗು ಇದೆ.