2016ರ ಪ್ರೋ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ಪರ ಕಣಕ್ಕಿಳಿದಿದ್ದ ಆಟಗಾರನೆಂದರೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಹರೀಶ್. ತವರಿನ ತಂಡ ಬುಲ್ಸ್ನಲ್ಲಿ ಸ್ಥಾನ ಗಿಟ್ಟಿಸಿದ್ದಕ್ಕೆ ಅವರಿಗೆ ತುಂಬಾ ಹೆಮ್ಮೆಯಾಗಿತ್ತು.
ಬೆಂಗಳೂರು ಬುಲ್ಸ್ ತಂಡದಲ್ಲಿ ರಾಜ್ಯದ ಏಕೈಕ ಆಟಗಾರನಾಗಿ ಸ್ಥಾನ ಗಿಟ್ಟಿಸಿದ್ದರು. ಆದರೆ ಆರಂಭಿಕ ಪಂದ್ಯಗಳಲ್ಲಿ ನನಗೆ ಅವಕಾಶ ಸಿಗುವ ಸಾಧ್ಯತೆ ತೀರಾ ಕಡಿಮೆಯಿತ್ತು. ಮೂರು ನಾಲ್ಕು ಪಂದ್ಯಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದರು. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಆಯ್ಕೆಗಾರರ ಗಮನ ಸೆಳೆದಿದ್ದರು.
ಭಟ್ಕಳದ ಬಹುತೇಕ ಹುಡುಗರು ಉದ್ಯೋಗ ಅರಸಿ ಗೋವಾ, ಮುಂಬೈ ಮತ್ತು ವಿದೇಶಗಳತ್ತ ಮುಖ ಮಾಡುತ್ತಾರೆ. ಆದರೆ ಹರೀಶ್ ಮಾತ್ರ ಅಪ್ಪಟ ದೇಶೀಯ ಕ್ರೀಡೆ "ಕಬಡ್ಡಿ' ಆಟದ ಪ್ರೀತಿಗೆ ಮನಸೋತಿದ್ದಾರೆ. ಚಿಕ್ಕಂದಿನಿಂದ ಕಬಡ್ಡಿ ಬಗ್ಗೆ ಆಸಕ್ತಿ ಹೊಂದಿದ್ದ ಹರೀಶ್, ಎಸ್ಎಸ್ಎಲ್ಸಿ ಬಳಿಕ ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ಗೆ ಸೇರಿ ಸುಮಾರು 4 ವರ್ಷ ಅಭ್ಯಾಸ ನಡೆಸಿದ್ದಾರೆ. ಇಂದು ಕ್ರಿಕೆಟ್, ಫುಟ್ಬಾಲ್, ಹಾಕಿ ನಂತರ ದೇಶದ ದೊಡ್ಡ ಕ್ರೀಡೆಯಾಗಿ ಪ್ರಜ್ವಲಿಸುತ್ತಿರುವ ಪ್ರೊ ಕಬಡ್ಡಿ ಲೀಗ್ನ 4ನೇ ಆವೃತ್ತಿಯಲ್ಲಿ ಬುಲ್ಸ್ ಪರ ಕಣಕ್ಕಿಳಿದಿದ್ದರು.
ನಮ್ಮೂರ ಪ್ರತಿಭೆ: 'ವಿಶೇಷ ಒಲಿಂಪಿಕ್ಸ್'ನ ಟೇಬಲ್ ಟೆನ್ನಿಸ್ಗೆ ಪ್ರವೇಶ ಪಡೆದಿದ್ದ ಕುಮಟಾದ ಸಂದೇಶ್ ಹರಿಕಂತ್ರ
ಹರೀಶ್ ನಾಯಕ್ ಅವರೇ ಹೇಳವಂತೆ, "ಥಾಣೆಯಲ್ಲಿ ನಡೆದ ಇಲಾಖಾ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತಂಡದ ಅತಿಥಿ ಆಟಗಾರನಾಗಿ ಕಣಕ್ಕಿಳಿದೆ. ಅಲ್ಲಿ ತೋರಿದ ಪ್ರದರ್ಶನವನ್ನು ವೀಕ್ಷಿಸಿದ ಮಾಜಿ ಅಂತಾರಾಷ್ಟ್ರೀಯ ಆಟಗಾರ ಬಿ.ಸಿ. ರಮೇಶ್ ಸೇರಿದಂತೆ ಹಲವರು ಬೆಂಗಳೂರು ಬುಲ್ಸ್ ತಂಡದ ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಅದರಂತೆ ಆಯ್ಕೆ ಟ್ರಯಲ್ಸ್ನಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ನೀಡಿದೆ. ನಂತರ 10 ಲಕ್ಷ ರೂ.ಗೆ ಬುಲ್ಸ್ ತಂಡ ನನಗೆ ಆಹ್ವಾನ ನೀಡಿತು,'' ಎಂದು ತಮ್ಮ ಆಯ್ಕೆಯನ್ನು ವಿವರಿಸಿದ್ದರು.
ಅಭ್ಯಾಸಕ್ಕೆಂದು ಭಟ್ಕಳದಿಂದ ಧಾರವಾಡಕ್ಕೆ ಬಂದಿದ್ದರು
ಬಡತನದ ಹಿನ್ನೆಲೆ ಹೊಂದಿದ್ದರೂ ಜೀವನದಲ್ಲಿ ಏನಾನ್ನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದ 6 ಅಡಿ, 1 ಇಂಚು ಎತ್ತರದ ಹರೀಶ್, ಭಟ್ಕಳದಿಂದ ಧಾರವಾಡಕ್ಕೆ ಬಂದಿದ್ದರು. ಕಳೆದ ಹಲವು ವರ್ಷಗಳಿಂದ ಕಬಡ್ಡಿಯನ್ನು ವೃತ್ತಿಪರವಾಗಿ ಸ್ವೀಕರಿಸಿದ್ದಾರೆ.
ಭಟ್ಕಳದ ಸ್ಥಳೀಯ ಕ್ಲಬ್ವೊಂದರಲ್ಲಿ ಕಬಡ್ಡಿ ಆಡುತ್ತಿದ್ದ ಹುಡುಗನನ್ನು ವಾಸು ನಾಯಕ್ ಎಂಬುವವರು ಧಾರವಾಡದ ಸಾಯ್ ಕೇಂದ್ರಕ್ಕೆ ಕರೆ ತಂದು ತರಬೇತಿ ನೀಡುವಂತೆ ಮನವಿ ಮಾಡಿದರು. ಅಷ್ಟರಲ್ಲಾಗಲೇ ಎಸ್ಎಸ್ಎಲ್ಸಿ ಮುಗಿಸಿದ್ದ ಹರೀಶ್ ಮುಖದಲ್ಲಿ ದೊಡ್ಡ ಕಬಡ್ಡಿ ಆಟಗಾರನಾಗುವ ಆದಮ್ಯ ಆಸೆ ಚಿಗುರಿತ್ತು.
ಕಬಡ್ಡಿ ಆಟ, ನೀತಿ ನಿಯಮಗಳ ಕುರಿತ ಎಲ್ಲವನ್ನೂ ಆತನಿಗೆ ಪಾಠ ಮಾಡಿದೆ. ಪ್ರತಿಯೊಂದನ್ನು ಚಾಚು ತಪ್ಪದೆ ಶ್ರದ್ಧೆಯಿಂದ ಕಲಿಯತೊಡಗಿದ. ನಂತರ ಪಂಜಾಬ್ನಲ್ಲಿ ನಡೆದ 19ರ ವಯೋಮಿತಿಯೊಳಗಿನ ಸ್ಕೂಲ್ ಗೇಮ್ ನ್ಯಾಷನಲ್ಸ್ ಚಾಂಪಿಯನ್ಸ್ಷಿಪ್ ಸೇರಿ ಹಲವು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಹರೀಶ್ ಉತ್ತಮ ಪ್ರದರ್ಶನ ತೋರಿದ.
ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯ ಹಿರಿಯರ ಕಬಡ್ಡಿ ಆಟಗಾರರ ಶಿಬಿರಕ್ಕೂ ಆಯ್ಕೆಯಾಗಿದ್ದ. ದುರಾದೃಷ್ಟವಶಾತ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ನಂತರ ಇಲಾಖಾ ಮಟ್ಟದ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ನೀಡಿದ ಪ್ರದರ್ಶನ ಬುಲ್ಸ್ ತಂಡ ಸೇರಲು ನೆರವಾಯಿತು. ಹರೀಶ್ ಧಾರವಾಡದ ಬಸವರೆಡ್ಡಿ ಕಾಲೇಜಿನಲ್ಲಿ ಬಿ.ಎ ಪದವಿ ಮುಗಿಸಿದ್ದಾರೆ.
"ಹರೀಶ್ ಪ್ರತಿಭಾವಂತ ಹಾಗೂ ಉದಯೋನ್ಮುಖ ಆಟಗಾರ. ಖಂಡಿತವಾಗಿಯೂ ಭವಿಷ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರಕ್ಕೆ ವರವಾಗಬಲ್ಲ ಲಕ್ಷಣಗಳನ್ನು ಆತ ಹೊಂದಿದ್ದಾನೆ," ಎಂದು ಧಾರವಾಡ ಸಾಯ್ ಕೇಂದ್ರದ ಕಬಡ್ಡಿ ಕೋಚ್ ಈಶ್ವರ್ ಅಂಗಡಿ ಹೇಳಿದ್ದಾರೆ.