ವಾಲಿಬಾಲ್ನಿಂದ ಕಬಡ್ಡಿಯತ್ತ ಹೊರಳಿದ ಮಮತಾ
ಮಮತಾ ಅವರು ಆರಂಭದಿಂದಲೇ ಕಬಡ್ಡಿ ಆಡಿಕೊಂಡು ಬಂದವರಲ್ಲ. ಕ್ರೀಡೆಯಲ್ಲಿ ಆಸಕ್ತಿ ಹೊಮದಿದ್ದ ಅವರು ಆರಂಭದಲ್ಲಿ ವಾಲಿಬಾಲ್ನಲ್ಲಿ ಆಸಕ್ತಿ ಹೊಂದಿದ್ದರು. ಕಾಲೇಜು ದಿನಗಳಲ್ಲಿ ಕಬಡ್ಡಿ ಆಡಲು ಆರಂಭಿಸಿದ್ದರು. ಮಮತಾ ಎತ್ತರವಿದ್ದ ಕಾರಣ ಅದರ ಲಾಭವನ್ನು ಪಡೆದುಕೊಂಡು ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸುವ ಕಲೆ ಕರಗತ ಮಾಡಿಕೊಂಡರು. ಹೀಗಾಗಿ ಒಂದೊಂದೇ ಹೆಜ್ಜೆ ಮೇಲೆರಲು ಆರಂಬಿಸಿದ್ದರು. ರಾಜ್ಯಮಟ್ಟದಲ್ಲಿ ಆಡುವ ಅವಕಾಶವೂ ಅವರಿಗೆ ದೊರೆಯಿತು.
ಎಲ್ಲಾ ಕ್ರೀಡೆಗಳಲ್ಲಿಯೂ ಭಾಗಿಯಾಗುತ್ತಿದ್ದರು ಮಮತಾ
ಕಾಲೇಜು ದಿನಗಳಲ್ಲಿ ಬಹುತೇಕ ಕ್ರೀಡೆಗಳಲ್ಲಿ ಭಾಗಿಯಾಗುತ್ತಿದ್ದ ಮಮತಾ ಅವರಿಗೆ ಕಬಡ್ಡಿಯಲ್ಲಿನ ಕೌಶಲ್ಯತೆಯನ್ನು ನೋಡಿ ಅದರ ಮೇಲೆ ಹೆಚ್ಚಿನ ಗಮನಹರಿಸುವಂತೆ ಸಲಹೆ ನೀಡಿದರು. ಮನೆಯವರನ್ನು ಕೂಡ ಒಪ್ಪಿಸಿದ್ದರು ಕೋಚ್ ಒಪ್ಪಿಸಿದ್ದರು. ಈ ಸಂದರ್ಭದಲ್ಲಿ ಕೋಚ್ ಮಾತುಗಳು ಮಮತಾ ಅವರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ಹೆಚ್ಚಿಸಿತ್ತು. ಹೀಗಾಗಿ ಬಳಿಕ ಕಬಡ್ಡಿ ಮೇಲೆಯೇ ಸಂಪೂರ್ಣವಾಗಿ ಗಮನಹರಿಸಲು ಆರಂಭಿಸಿದ್ದರು ಮಮತಾ ಪುಜಾರಿ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ತುಳುನಾಡ ಬೆಡಗಿ
ಉಡುಪಿ ಜಿಲ್ಲೆಯ ಕಾರ್ಕಳದ ಹೆರ್ಮುಂಡೆ ಗ್ರಾಮದ ಮಮತಾ 2002ರಲ್ಲಿ ಕಬಡ್ಡಿ ಆಡಲು ಆರಂಭಿಸಿದರು. 2003ರಲ್ಲಿ ರಾಜ್ಯಮಟ್ಟದಲ್ಲಿ ಆಡಿದ ಮಮತಾ 2004-05ರಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದರು. ಬಳಿಕ 2006ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡರು. ನಂತರ ಭಾರತ ತಂಡದ ನಾಯಕಿಯಾಗಿಯೂ ಮಿಂಚಿದ ಅವರು ಪಾಟ್ನಾದಲ್ಲಿ ನಡೆದ ಚೊಚ್ಚಲ ಮಹಿಳಾ ಕಬಡ್ಡಿ ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕಿಯಾಗಿ ಮುನ್ನಡೆಸಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. 2010ರಲ್ಲಿ ಚೀನಾದಲ್ಲಿ ನಡೆದ 1ನೇ ಏಷ್ಯನ್ ಗೇಮ್ಸ್ನಲ್ಲಿಯೂ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಮಮತಾ ಪೂಜಾರಿ ಪಾತ್ರ ಪ್ರಮುಖವಾಗಿತ್ತು. ಬಳಿಕ 2014ರಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಮಡದ ಭಾಗವಾಗಿದ್ದ ಮಮತಾ ಪೂಜಾರಿ ಮತ್ತೊಮ್ಮೆ ಭಾರತ ಪದಕ ಗೆಲ್ಲುವಲ್ಲಿ ಕೊಡುಗೆ ನೀಡಿದ್ದಾರೆ.
ಅರ್ಜುನ ಪ್ರಶಸ್ತಿ ವಿಜೇತೆ ಮಮತಾ
ಮಮತಾ ಪೂಜಾರಿ ಕಬಡ್ಡಿ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕರ್ನಾಟಕ ರಾಜ್ಯ ಸರ್ಕಾರ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯನ್ನು ಮಮತಾ ಪೂಜಾರಿ ಪಡೆದುಕೊಂಡಿದ್ದಾರೆ. ನಂತರ 2014ರಲ್ಲಿ ಭಾರತ ಸರ್ಕಾರ ನೀಡುವ ಅರ್ಜುನ ಪ್ರಶಸ್ತಿಗೂ ಮಮತಾ ಪೂಜಾರಿ ಭಾಜನವಾಗಿದ್ದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.