ಪ್ರೊ ಕಬಡ್ಡಿ ಲೀಗ್ ಎಂಟನೇ ಆವೃತ್ತಿ ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಇಂದು ( ಜನವರಿ 14 ) ನಡೆದ 2 ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ಜಯ ಸಾಧಿಸಿದ್ದು, ದ್ವಿತೀಯ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತಂಡಕ್ಕೆ ಸೋಲುಣಿಸಿರುವ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಹೆಸರಿಗೆ ತಕ್ಕಂತೆ ಬಸವನಂತೆ ಮುನ್ನುಗ್ಗುತ್ತಿರುವ ಬೆಂಗಳೂರು ಬುಲ್ಸ್ ತಂಡ ಟೂರ್ನಿಯಲ್ಲಿನ ತನ್ನ ಏಳನೇ ಜಯವನ್ನು ದಾಖಲಿಸಿದೆ. ಇಂದು ಗುಜರಾತ್ ಜಯಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 46 - 37 ಅಂಕಗಳ ಅಂತರದ ಭರ್ಜರಿ ಜಯವನ್ನು ಸಾಧಿಸಿದೆ. ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 54ನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧ ಸವಾರಿಯನ್ನು ಮಾಡಿರುವ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ 19 ಅಂಕಗಳನ್ನು ಕಲೆಹಾಕಿದ್ದರೆ, ಭರತ್ 2 ಟ್ಯಾಕಲ್ ಅಂಕ ಸೇರಿದಂತೆ ಒಟ್ಟು 9 ಅಂಕಗಳನ್ನು ಗಳಿಸಿದರು. ಪಂದ್ಯದುದ್ದಕ್ಕೂ ಬೆಂಗಳೂರು ಬುಲ್ಸ್ ತಂಡಕ್ಕೆ ಪೈಪೋಟಿ ನೀಡುವ ಪ್ರಯತ್ನವನ್ನು ಮಾಡಿದ ಗುಜರಾತ್ ಜಯಂಟ್ಸ್ ಪಂದ್ಯದಲ್ಲಿ ಒಟ್ಟು 3 ಬಾರಿ ಆಲ್ ಔಟ್ ಆಗುವ ಮೂಲಕ ಪಂದ್ಯದ ಅಂತಿಮದಲ್ಲಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿತು.
ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತು ಕೆಟ್ಟ ದಾಖಲೆ ಮುಂದುವರೆಸಿದ ಭಾರತ!
ಗುಜರಾತ್ ಜಯಂಟ್ಸ್ ತಂಡದ ಯುವ ರೈಡರ್ ರಾಕೇಶ್ 14 ಅಂಕಗಳನ್ನು ಗಳಿಸಿದ್ದು, ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಮೂಡಿಸಿದ್ದಾರೆ. ಪಂದ್ಯದ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಅಬ್ಬರಿಸಿದರೆ ಮತ್ತೊಂದೆಡೆ ಗುಜರಾತ್ ಜಯಂಟ್ಸ್ ತಂಡದ ಯುವ ರೈಡರ್ ರಾಕೇಶ್ ಉತ್ತಮ ಪ್ರದರ್ಶನವನ್ನು ನೀಡಿದರು. ರಾಕೇಶ್ ಗುಜರಾತ್ ಜಯಂಟ್ಸ್ ಪರ ಎಂಟನೇ ನಿಮಿಷದಲ್ಲಿ ಸೂಪರ್ ರೈಡ್ ಮಾಡಿದರೆ, ಹತ್ತನೇ ನಿಮಿಷಕ್ಕೆ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ 3 ಅಂಕಗಳ ರೈಡ್ ಮಾಡುವ ಮೂಲಕ ಅಂಕಗಳನ್ನು ಸರಿದೂಗಿಸಿಕೊಂಡು. ಪರ್ವೆಶ್ ಬೈನ್ಸ್ವಾಲ್ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಅವರನ್ನು ಆಕರ್ಷಕ ಟ್ಯಾಕಲ್ ಮೂಲಕ ಕಟ್ಟಿಹಾಕಿದರೂ ಸಹ ಮಧ್ಯಂತರಕ್ಕೆ ಇನ್ನೂ 7 ನಿಮಿಷಗಳು ಬಾಕಿ ಇರುವಾಗ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಜಿಯಂಟ್ಸ್ ತಂಡವನ್ನು ಆಲ್ ಔಟ್ ಮಾಡಿತು. ಪಂದ್ಯದ ಮಧ್ಯಂತರದ ವೇಳೆಗೆ ಬೆಂಗಳೂರು ಬುಲ್ಸ್ ಗುಜರಾತ್ ಜಯಂಟ್ಸ್ ವಿರುದ್ಧ 22-17 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು.
ದ್ವಿತೀಯಾರ್ಧದಲ್ಲಿ ಪವನ್ ಶೆರಾವತ್ ಮಾಡಿದ 2 ಅಂಕಗಳ ರೈಡಿಂಗ್ ಗುಜರಾತ್ ಜಯಂಟ್ಸ್ ತಂಡದ ಸುಮಿತ್ ಅವರಿಗೆ ಭುಜದ ಗಾಯದ ಸಮಸ್ಯೆಯನ್ನು ತಂದೊಡ್ಡಿತು. ಸುಮಿತ್ ಬದಲಾಗಿ ಕಣಕ್ಕಿಳಿದ ಪ್ರದೀಪ್ ಕುಮಾರ್ ಗುಜರಾತ್ ಜಯಂಟ್ಸ್ ತಂಡದ ಪರ ಮಿಂಚಿದರು. ಹೀಗೆ ಪ್ರದೀಪ್ ಕುಮಾರ್ ಮತ್ತು ಸನಿಲ್ ಅವರ ಉತ್ತಮ ಆಟದ ನಡುವೆಯೂ ಬೆಂಗಳೂರು ಬುಲ್ಸ್ 11 ನಿಮಿಷಗಳು ಬಾಕಿಯಿರುವಾಗ ಗುಜರಾತ್ ಜಯಂಟ್ಸ್ ತಂಡವನ್ನು ಎರಡನೇ ಬಾರಿಗೆ ಆಲ್ ಔಟ್ ಮಾಡಿ 4 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ನಂತರ ವಿರಾಮದ ವೇಳೆ ಗುಜರಾತ್ ಜಯಂಟ್ಸ್ ತಂಡದ ಕೋಚ್ ಮನ್ ಪ್ರೀತ್ ಸಿಂಗ್ ಬೆಂಗಳೂರು ಬುಲ್ಸ್ ತಂಡದ ರೈಡರ್ಗಳಿಗೆ ಅಂಕ ಗಳಿಸುವ ಅವಕಾಶಗಳನ್ನು ನೀಡಲೇಬೇಡಿ ಎಂಬ ಸಂದೇಶವನ್ನು ನೀಡಿದರು. ಅದರಂತೆ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಮತ್ತು ಭರತ್ ಅವರನ್ನು ಗುಜರಾತ್ ಜಯಂಟ್ಸ್ ಆಟಗಾರರು ಟ್ಯಾಕಲ್ ಮಾಡಿದರು.
ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ: ಟೀಮ್ ಇಂಡಿಯಾ ಕಾಲೆಳೆದು ಕೆಂಗಣ್ಣಿಗೆ ಗುರಿಯಾದ ಎಬಿಡಿ!
ಆದರೆ ಬೆಂಗಳೂರು ಬುಲ್ಸ್ ತಂಡದ ಡಿಫೆಂಡರ್ಸ್ ಅದರಲ್ಲಿಯೂ, ಸೌರಭ್ ನಡಾಲ್ ಗುಜರಾತ್ ಜಯಂಟ್ಸ್ ತಂಡದ ರೈಡರ್ಗಳಿಗೆ ಉತ್ತಮ ಆಟವನ್ನು ಆಡುವ ಅವಕಾಶವನ್ನು ನೀಡಲೇ ಇಲ್ಲ. ಈ ಮೂಲಕ ಬೆಂಗಳೂರು ಬುಲ್ಸ್ ಪಂದ್ಯದ ಮುಕ್ತಾಯಕ್ಕೆ 2 ನಿಮಿಷಗಳು ಬಾಕಿ ಇರುವಾಗ ಗುಜರಾತ್ ಜಯಂಟ್ಸ್ ತಂಡವನ್ನು ಮೂರನೇ ಬಾರಿಗೆ ಆಲ್ ಔಟ್ ಮಾಡಿ 9 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು ಗೆಲುವನ್ನು ದಾಖಲಿಸಿತು. ಈ ಗೆಲುವಿನ ಮೂಲಕ ಬೆಂಗಳೂರು ಬುಲ್ಸ್ 38 ಅಂಕಗಳನ್ನು ಮುಟ್ಟಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.