ನವದೆಹಲಿ, ಆಗಸ್ಟ್ 15: ಭಾರತ ಇಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದೆ. ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಈ ಸಂಭ್ರಮಕ್ಕೆ ಚಾಲನೆ ನೀಡಿದರು. ಈ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಭಾರತದ ಕ್ರೀಡಾಪಟುಗಳ ಸಾಧನೆಯನ್ನು ಕೊಂಡಾಡಿದ್ದಾರೆ.
ಕುಂಪುಕೋಟೆಯಲ್ಲಿ ನಡೆದ ಧ್ವಜಾರೋಹಣಾ ಕಾರ್ಯಕ್ರಮದಲ್ಲಿ ಭಾರತದ ಪರವಾಗಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಭಾಗವಹಿಸಿದ್ದರು. ಪದಕ ಗೆದ್ದಿರುವ ನೀರಜ್ ಚೋಪ್ರಾ, ಶಟ್ಲರ್ ಪಿವಿ ಸಿಂಧು ಮತ್ತು ವೈಟ್ಲಿಫ್ಟರ್ ಮೀರಾಬಾಯಿ ಚಾನು, ರವಿ ಕುಮಾರ್ ದಾಹಿಯಾ, ಬಜರಂಗ್ ಪೂನಿಯಾ ಸಹಿತ, ಭಾರತದ ಹಾಕಿ ತಂಡದ ಸದಸ್ಯರು ಸೇರಿದಂತೆ ಹಲವಾರು ಕ್ರೀಡಾಪಟುಗಳು ಭಾಗವಹಿಸಿದ್ದರು.
ಇನ್ನು ಈ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಪರವಾಗಿ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ. ಈವರೆಗೂ ಈ ಐತಿಹಾಸಿಕ ಕಾರ್ಯಕ್ರಮವನ್ನು ನಾನು ಟಿವಿಯಲ್ಲಿ ನೋಡುತ್ತಿದ್ದೆ. ಆದರೆ ಇಂದು ನಾನು ಖುದ್ದಾಗಿ ಹಾಜರಾಗಿದ್ದೇನೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಇದಕ್ಕೂ ಮೊದಲು ನಾನು ಈ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಆದರೆ ಇಂದು ನಾವು ಖುದ್ದಾಗಿ ಭಾಗವಹಿಸುತ್ತಿದ್ದೇವೆ. ಇದು ಹೊಸ ಅನುಭವ. ನಾವು ಸುದೀರ್ಘ ಕಾಲದಿಂದ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ಇಂದು ನನ್ನಿಂದಾಗಿ ಇಡೀ ದೇಶ ಹೆಮ್ಮೆ ಪಡುತ್ತಿರುವುದನ್ನು ನೋಡಿ ನನಗೆ ತುಂಬಾ ಹರ್ಷವಾಗುತ್ತಿದೆ" ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರು
ಇನ್ನು ಇಂದಿನ ಸ್ವಾತಂತ್ರ್ಯೋತ್ಸವದ ಭಾಷಣದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ರೀಡಾಪಟುಗಳ ವಿಶೇಷ ಸಾಧನೆಯನ್ನು ಕೊಂಡಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಭಾರತೀಯ ಆಟಗಾರರ ಬಳಗ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದು ಇಡೀ ದೇಶ ಈ ಗೆಲುವನ್ನು ಸಂಭ್ರಮಿಸುತ್ತಿದೆ ಎಂದಿದ್ದಾರೆ ಪ್ರಧಾನಿ ಮೋದಿ. ಕ್ರೀಡಾಪಟುಗಳ ಈ ಸಾಧನೆ ಭವಿಷ್ಯದ ಯುವ ಆಟಗಾರರಿಗೆ ಸ್ಪೂರ್ತಿಯನ್ನು ತುಂಬುತ್ತದೆ ಎಂದಿದ್ದಾರೆ.
"ಟೋಕಿಯೋ ಒಲಿಂಪಿಕ್ಸ್ನಲ್ಲಿ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ ಕ್ರೀಡಾಪಟುಗಳು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಡೀ ದೇಶ ಈ ಆಟಗಾರರ ಸಾಧನೆಯನ್ನು ಪ್ರಶಂಸಿಸಬೇಕು ಎಂದು ನಾನು ಬಯಸುತ್ತೇನೆ. ಅವರು ಕೇವಲ ನಮ್ಮ ಹೃದಯವನ್ನು ಗೆದ್ದಿಲ್ಲ. ಅವರು ಮುಂದಿನ ಪೀಳಿಗೆಗೆ ಸ್ಪೂರ್ತಿಯನ್ನು ತುಂಬಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಗೌರವ ಸೂಚಿಸಿದ್ದಾರೆ.
ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ನೀರಜ್ ಚೋಪ್ರಾ, ಮೀರಾಬಾಯಿ ಚಾನು, ಪಿವಿ ಸಿಂಧು, ಮೇರಿ ಕೋಮ್ ಮಾತ್ರವಲ್ಲದೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಭಾರತದ ಎಲ್ಲಾ ಕ್ರೀಡಾಪಟುಗಳು ಹಾಗೂ ಸಪೋರ್ಟ್ ಸ್ಟಾಫ್ 'ಸಾಯ್' ಮತ್ತು ಸ್ಪೋರ್ಟ್ಸ್ ಫೆಡರೇಶನ್ನ ಅಧಿಕಾರಿಗಳು ಸೇರಿದಂತೆ ಸುಮಾರು 240 ಮಂದಿ ಒಲಿಂಒಇಯನ್ಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿತ್ತು.
ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಒಂದು ಚಿನ್ನದ ಪದಕ ಸೇರಿದಂತೆ ಒಟ್ಟು 7 ಪದಕಗಳನ್ನು ಗೆದ್ದು ಬೀಗಿದ್ದರು. ಈ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಪದಕವನ್ನು ಗೆದ್ದ ಸಾಧನೆ ಮಾಡಿದೆ. ಒಂದು ಚಿನ್ನ ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳು ಭಾರತದ ಮುಡಿಗೇರಿತ್ತು. ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭದ ದಿನವೇ ಪದಕ ಮೀರಾಬಾಯಿ ಚಾನು ವೈಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತ ಶುಭಾರಂಭ ಮಾಡಿತ್ತು. ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಮೂಲಕ 41 ವರ್ಷಗಳ ನಂತರ ಒಲಿಂಪಿಕ್ಸ್ನಲ್ಲಿ ಪದಕಕ್ಕೆ ಮುತ್ತಿಕ್ಕಿದ ಸಾಧನೆ ಮಾಡಿತು.