ಬೆಂಗಳೂರು, ಆ. 21: ಈ ಬಾರಿಯ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಪ್ರಕಟವಾಗಿವೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಅರ್ಜುನ ಪ್ರಶಸ್ತಿ ಪಟ್ಟಿಯಿಂದ ಕ್ರೀಡಾಪಟುಗಳಾದ ಸಾಕ್ಷಿ ಮಲೀಕ್ ಹಾಗೂ ಮೀರಾಬಾಯಿ ಚಾನು ಹೆಸರನ್ನು ಹೊರಗಿಡಲಾಗಿದೆ. 29 ಸಾಧಕರ ಬದಲಿಗೆ 27 ಮಂದಿಗೆ ಮಾತ್ರ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ.
ಕಳೆದ ವಾರ ಜಸ್ಟೀಸ್ (ನಿವೃತ್ತ) ಮುಕುಂದಕಂ ಶರ್ಮ ನೇತೃತ್ವದ ಆಯ್ಕೆ ಸಮಿತಿಯು 29 ಮಂದಿ ಸಾಧಕರನ್ನು ಹೆಸರುಳ್ಳ ಪಟ್ಟಿಯನ್ನು ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಿತ್ತು. ಈ ಪಟ್ಟಿಯಲ್ಲಿ ಸಾಕ್ಷಿ ಹಾಗೂ ಮೀರಾ ಬಾಯಿ ಹೆಸರು ಸೇರ್ಪಡೆಯಾಗಿತ್ತು.
ಇಶಾಂತ್ ಶರ್ಮ ಸೇರಿದಂತೆ 27 ಸಾಧಕರಿಗೆ ಅರ್ಜುನ ಪ್ರಶಸ್ತಿ
ಆದರೆ, ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಹಾಗೂ 2017ರ ವಿಶ್ವ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಅವರಿಗೆ ಅರ್ಜುನ ಪ್ರಶಸ್ತಿ ನೀಡದಿರಲು ಕ್ರೀಡಾ ಸಚಿವ ಕಿರನ್ ರಿಜಿಜು ನಿರ್ಧರಿಸಿದರು.
ನಿಯಮಗಳ ಪ್ರಕಾರ, ದೇಶದ ಅತ್ಯುನ್ನತ ಕ್ರೀಡಾ ಗೌರವ ಗಳಿಸಿದ ಬಳಿಕ ಅದಕ್ಕಿಂತ ಕೆಳಸ್ತರದ ಪ್ರಶಸ್ತಿಗಳಿಗೆ ಪರಿಗಣಿಸುವಂತಿಲ್ಲ. ಆದರೂ ಈ ಇಬ್ಬರು ಕ್ರೀಡಾಪಟುಗಳ ಹೆಸರು ಸೇರ್ಪಡೆಯಾದಾಗ ಎಲ್ಲರ ಹುಬ್ಬೇರಿತ್ತು. ಆದರೆ, ನಿಯಮಕ್ಕೆ ಬದ್ಧರಾಗಿ ಈ ಇಬ್ಬರಿಗೂ ಖೇಲ್ ರತ್ನ ಪ್ರಶಸ್ತಿ ಲಭಿಸಿರುವುದರಿಂದ ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ ಪರಿಗಣಿಸಿಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ರೋಹಿತ್ ಶರ್ಮಾಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
ಕ್ರಿಕೆಟರ್ ರೋಹಿತ್ ಶರ್ಮ, ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಾಲಂಪಿಯನ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು, ಟೇಬಲ್ ಟೆನಿಸ್ ಪಟು ಮಣಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರಿಗೆ ಪ್ರಸಕ್ತ ಸಾಲಿನ ಖೇಲ್ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.
ಕೊರೊನಾವೈರಸ್ ಸೋಂಕಿನ ಭೀತಿಯಿಂದ ಇದೇ ಮೊದಲ ಬಾರಿಗೆ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನದಂದು ವರ್ಚ್ಯುಯಲ್ ಆಗಿ ಆನ್ ಲೈನ್ ಮೂಲಕ ನಡೆಯಲಿದೆ.