ಜಕಾರ್ತ, ಆಗಸ್ಟ್ 29: ಹೆಸರಿನಲ್ಲಿಯೇ 'ಬೆಳ್ಳಿ' ಹೊಂದಿರುವ ಈ ಯುವಕ ಬೆಳ್ಳಿ ಗೆದ್ದಿದ್ದಲ್ಲದೆ, ಆತನ ಬದುಕಿನಲ್ಲಿಯೂ 'ಬೆಳ್ಳಿ ರೇಖೆ' ಮೂಡಿದೆ.
ಭಾರತದ ಪುರುಷರ ತಂಡ ಏಷ್ಯನ್ ಗೇಮ್ಸ್ನ ಕಾಂಪೌಂಡ್ ಆರ್ಚರಿಯಲ್ಲಿ (ಬಿಲ್ಲು ಸ್ಪರ್ಧೆ) ಮೊದಲ ಬಾರಿಗೆ ಬೆಳ್ಳಿ ಪದಕ ಜಯಿಸಿದೆ.
ಏಷ್ಯನ್ ಗೇಮ್ಸ್: ಪುರುಷರ ಆರ್ಚರಿ ಸ್ಪರ್ಧೆ: ಭಾರತಕ್ಕೆ ಬೆಳ್ಳಿ ಪದಕ
ಈ ತಂಡದಲ್ಲಿದ್ದ ರಾಜಸ್ಥಾನದ ಜೈಪುರದ 23ರ ಹರೆಯದ ಯುವಕ ರಜತ್ ಚೌಹಾಣ್ಗೆ ಬೆಳ್ಳಿ ಗೆದ್ದಿದ್ದಕ್ಕಿಂತ ಖುಷಿ ನೀಡಿದ ಸಂಗತಿ ಬೇರೆಯೇ ಇದೆ. ಅದೇನದು ಗೊತ್ತೇ? ತಮ್ಮ ಐದನೇ ಪ್ರಯತ್ನದಲ್ಲಿ ಕೊನೆಗೂ 12ನೇ ತರಗತಿಯ ಪರೀಕ್ಷೆಯನ್ನು ಪಾಸ್ ಮಾಡಿದ್ದು.
ಆರ್ಚರಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ ರಜತ್ ಓದಿನಲ್ಲಿ ಹಿಂದೆ. ಇದಕ್ಕೆ ಕಾರಣ ಅವರು ಓದಿಗಿಂತಲೂ ಕ್ರೀಡೆಯ ಬಗ್ಗೆ ಹೆಚ್ಚು ಗಮನ ಹರಿಸಿರುವುದು. ಅವರ ಸಾಧನೆಗೆ ಶಾಲೆ, ಕಾಲೇಜು ಮತ್ತು ಉನ್ನತ ಶಿಕ್ಷಣದ ಸಹಜ ಶಿಕ್ಷಣ ಮಾರ್ಗವಿಲ್ಲ. ಆದರೆ, ಶಿಕ್ಷಣ ಬೇಕು ಎಂದು ಅವರು ಪ್ರತಿಪಾದಿಸುತ್ತಾರೆ.
ನೀವು ಶಿಕ್ಷಿತರಾಗಿದ್ದರೆ ದೊಡ್ಡದನ್ನು ಸಾಧಿಸಬಹುದು. ಕ್ರೀಡೆ ನಿಮ್ಮನ್ನು ಯಾವುದರತ್ತಲೂ ಕೊಂಡೊಯ್ಯುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಶಿಕ್ಷಣವನ್ನು ಅವರ ಕುಟುಂಬ ಗಂಭೀರವಾಗಿ ಪರಿಗಣಿಸಿದೆ. ಹಲವಾರು ಪ್ರಯತ್ನಗಳ ಬಳಿಕ ಪರೀಕ್ಷೆ ಪಾಸಾಗಿದ್ದು ನಿಜಕ್ಕೂ ಹೆಚ್ಚು ತೃಪ್ತಿ ಕೊಟ್ಟಿರುವ ಸಂಗತಿ ಎಂದು ರಜತ್ ಹೇಳಿಕೊಂಡಿದ್ದಾರೆ.
ಶಾಲಾ ವಿದ್ಯಾಭ್ಯಾಸವನ್ನು ಕೊನೆಗೂ ಪೂರ್ಣಗೊಳಿಸಿರುವ ಅವರು, ಕಾಲೇಜು ಮೆಟ್ಟಿಲೇರುತ್ತಿರುವ ಬಗ್ಗೆ ಮುದಗೊಂಡಿದ್ದಾರೆ. ಜತೆಗೆ ವಿಶ್ವ ಯುನಿವರ್ಸಿಟಿ ಕ್ರೀಡಾಕೂಟದತ್ತಲೂ ಕಣ್ಣಿಟ್ಟಿದ್ದಾರೆ.
ಏಷ್ಯನ್ ಗೇಮ್ಸ್: ಆರ್ಚರಿಯಲ್ಲಿ ಬೆಳ್ಳಿ ಗೆದ್ದ ಭಾರತದ ವನಿತೆಯರು
'ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಲು ಇಷ್ಟು ಸಮಯ ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆ ಹೊಂದಿದ್ದೇನೆ. ನನಗೆ ಕೆಲಸವೂ ಇಲ್ಲ. ಹೀಗಾಗಿ ಶಿಕ್ಷಣ ನನಗೆ ಅತಿ ಮುಖ್ಯವಾಗಿದೆ. ಅದು ನನಗೆ ಸಾಮಾಜಿಕ ಸ್ವೀಕೃತಿಯನ್ನು ಕೊಡುತ್ತದೆ ಕೂಡ' ಎಂದಿದ್ದಾರೆ.
2015ರಲ್ಲಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಹೆಮ್ಮೆ ರಜತ್ ಅವರದು. ಇಂಚೆನ್ ಕ್ರೀಡಾಕೂಟದಲ್ಲಿ ಚಿನ್ನ ಕೂಡ ಗೆದ್ದಿದ್ದರು. ಆದರೂ ಅವರ ಸಾಧನೆಯನ್ನು ಗುರುತಿಸಿ ಸರ್ಕಾರ ಯಾವುದೇ ಉದ್ಯೋಗ ನೀಡಿಲ್ಲ. ಆದರೆ, ಸದಾ ಹಸನ್ಮುಖಿಯಾಗಿ ಇತರರನ್ನೂ ನಗಿಸುವ ಅವರು ತಂಡದಲ್ಲಿ ಸದಾ ಹುಮ್ಮಸ್ಸು ತುಂಬುತ್ತಿರುತ್ತಾರೆ.
90 ಕೆ.ಜಿ. ಇರುವ ಅವರಿಗೆ, ತಮ್ಮ ತೂಕದ ಬಗ್ಗೆ ಬೇಸರವಿಲ್ಲ. ಸಹೋದರಿಯ ಮದುವೆ ಸಂದರ್ಭದಲ್ಲಿ ನನ್ನ ತೂಕ ಹೆಚ್ಚಳವಾಯಿತು. ಆರ್ಚರಿಯಲ್ಲಿ ವಯಸ್ಸು ಮುಖ್ಯವಾಗುವುದಿಲ್ಲ. ಕಳೆದ ಸಾರಿ ನಾವು ಸ್ವಲ್ಪ ಅದೃಷ್ಟದೊಂದಿಗೆ ಚಿನ್ನ ಗೆದ್ದಿದ್ದೆವು. ಆದರೆ, ಈ ಬಾರಿ ಚಿನ್ನ ಗೆಲ್ಲಬೇಕಿದ್ದವರು ಬೆಳ್ಳಿ ಗೆದ್ದೆವು. ಈ ರೀತಿ ಆಗುವುದು ಸಹಜ ಎಂದು ಹೇಳಿದ್ದಾರೆ.
ತಮಗೊಂದು ಕೆಲಸ ಸಿಕ್ಕರೆ ಮದುವೆಯೂ ಆಗುತ್ತದೆ ಎನ್ನುವುದು ರಜತ್ ಆಶಯ. ಕೆಲಸಕ್ಕೆ ಅನೇಕ ಕಂಪೆನಿಗಳಿಂದ ಆಫರ್ಗಳು ಬಂದಿದ್ದರೂ, ರಾಜಸ್ಥಾನದಲ್ಲಿ ಇರುವ ಯಾವ ಕಂಪೆನಿಗಳಿಂದಲೂ ಬಂದಿಲ್ಲ. ಹೀಗಾಗಿ ಅದಕ್ಕೆ ಅವರು ಕಾಯಲು ನಿರ್ಧರಿಸಿದ್ದಾರೆ. ನನಗೆ ಕೆಲಸ ಬೇಕು. ಇಂಚೆನ್ ಚಿನ್ನ ಗೆದ್ದ ಬಳಿಕ ಸಿಗಲಿಲ್ಲ. ಈಗ ಬೆಳ್ಳಿ ನನಗೆ ವರದಾನವಾಗಲಿದೆಯೇ ನೋಡಬೇಕು ಎಂದಿದ್ದಾರೆ.