ಕಂಚು ಗೆದ್ದರೂ ಟೀ ಮಾರುವ ಕಾಯಕ
ಇತ್ತೀಚೆಗಷ್ಟೇ ಇಂಡೋನೇಷ್ಯಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಸೆಪಕ್ಟಾಕ್ರಾ (ಕಿಕ್ ವಾಲಿಬಾಲ್) ತಂಡ ಸ್ಪರ್ಧೆಯಲ್ಲಿ ಹರೀಶ್ ಅವರು ಭಾರತ ಪರ ಕಂಚು ಗೆದ್ದಿದ್ದರು. ಸ್ಪರ್ಧೆ ಮುಗಿಸಿ ಭಾರತಕ್ಕೆ ಬಂದ ಹರೀಶ್ ದೆಹಲಿಯ ಮಂಜು-ಕಾ-ತಿಲ್ಲ ಕಾಲನಿಯಲ್ಲಿ ತನ್ನ ತಂದೆಯ ಪುಟ್ಟ್ ಟೀ ಶಾಪ್ ನಲ್ಲಿ ಟೀ ಮಾರುವ ಕಾಯಕ ಶುರುವಿಟ್ಟುಕೊಂಡಿದ್ದಾರೆ!
ಸೆಪಕ್ಟಾಕ್ರಾದಲ್ಲಿ ಭಾರತಕ್ಕೆ ಮೊದಲ ಪದಕ
ಕೈಗಳನ್ನು ತಾಗಿಸದೆ ಬರೀ ಕಾಲಿನ ಮೂಲಕವೇ ಚೆಂಡನ್ನು (ವಾಲಿಬಾಲ್ ಆಟದಂತೆ) ಆಚೆ ಕೋರ್ಟಿಗೆ ಮುಟ್ಟಿಸುವ ಈ ವಿಶಿಷ್ಟ ಆಟದಲ್ಲಿ ಭಾರತ, ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದು ಈ ಬಾರಿಯೇ ಮೊದಲು. ಮೊದಲು ಸ್ಪರ್ಧಿಸಿಯೂ ಭಾರತ ತಂಡ ಪದಕ ಗೆದ್ದಿದ್ದು ವಿಶೇಷ ಅನ್ನಿಸಿತ್ತು.
ತುಂಬು ಕುಟುಂಬ, ಕಷ್ಟದ ಜೀವನ
ಹರೀಶ್ ಅವರನ್ನು ಮಾತನಾಡಿಸಿದಾಗ, 'ನಮ್ಮ ಕುಟುಂಬ ದೊಡ್ಡದು. ತುಂಬಾ ಜನರಿದ್ದಾರೆ. ಹಾಗಾಗಿ ಬದುಕಿನ ಬಂಡಿ ಮುನ್ನಡೆಯಲು ನಾನೀ ಟೀಪಾತ್ರೆಯನ್ನು ಬೆಚ್ಚಗಿರಿಸಲೇಬೇಕು. ಕುಟುಂಬಕ್ಕೆ ನೆರವು ನೀಡುವ ಸಲುವಾಗಿ ನಾನು ನನ್ನ ತಂದೆಯೊಟ್ಟಿಗೆ ಚಹಾದಂಗಡಿಯಲ್ಲಿ ಕಳೆಯುತ್ತೇನೆ' ಎಂದು ಆಚೆಯಿಂದ ಬಂದ ಉತ್ತರ ಭಾವಜೀವಿಗಳನ್ನು ಕಾಡುವಂತಿತ್ತು.
ದೇಶಕ್ಕಾಗಿ ಇನ್ನೂ ಗೆಲ್ಲುತ್ತೇನೆ
'ಈ ಕ್ರೀಡೆಯನ್ನು ನಾನು 2011ರಿಂದ ಆಡಲಾರಂಭಿಸಿದೆ. ನನ್ನ ಕೋಚ್ ಹೇಮರಾಜ್ ಅವರು ನನ್ನನ್ನು ಕ್ರೀಡಾರಂಗಕ್ಕೆ ಎಳೆತಂದು ಪ್ರೋತ್ಸಾಹಿಸಿದರು. ಅವರೇ ನನ್ನನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಪರಿಚಯಿಸಿದ್ದು. ಅನಂತರ ನಂಗೆ ಕ್ರೀಡೆಗೆ ಸಂಬಂಧಿಸಿ ಸ್ವಲ್ಪ ಬೆಂಬಲ ಸಿಕ್ಕಿತು. ಈಗಲೂ ನಾನು ದಿನನಿತ್ಯ ತರಬೇತಿ ಮಾಡುತ್ತೇನೆ. ಮುಂದೆಯೂ ದೇಶಕ್ಕಾಗಿ ನಾನು ಪದಕ ಗೆಲ್ಲುತ್ತೇನೆ' ಎಂದು ಪ್ರತಿಕ್ರಿಯಿಸುವಾಗ ಮಸಿತಾಕಿದ ಕೈಗಳಲ್ಲಿದ್ದ ಹರೀಶ್ ಕಣ್ಣೊಳಗೊಂದು ಹೊಳಪು ಕಾಣಿಸಿತು!