ನಾಪೋಕ್ಲುವಿನ ಪೆರೂರು ಗ್ರಾಮದವರು
ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ, ಪಾರ್ವತಿ ದಂಪತಿ ಪುತ್ರಿ ಭವಾನಿ ಶಾಲಾ ದಿನಗಳಲ್ಲಿಯೇ ಕ್ರೀಡೆ, ಎನ್ಸಿಸಿಯತ್ತ ಹೆಚ್ಚಿನ ಒಲವು ಹೊಂದಿದ್ದರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತನ್ನನ್ನು ತೊಡಗಿಸಿಕೊಳ್ಳಲು ಇನ್ನಷ್ಟು ಹಾದಿ ಸುಗಮವಾಯಿತು.
ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣ ಕೊಡಗಿನ ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಮಡಿಕೇರಿ ತಾಲೂಕಿನ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ, ಮಂಗಳೂರಿನ ಸೆಂಟ್ ಆ್ಯಗ್ನೇಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಡಾರ್ಜಲಿಂಗ್ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ನಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದಾರೆ.
ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗಿ
ಪ್ರೌಢಶಾಲೆಯಿಂದಲೇ ಎನ್ಸಿಸಿಗೆ ಸೇರಿ ಕಾಲೇಜಿನಲ್ಲಿಯೂ ಅದನ್ನು ಮುಂದುವರೆಸಿ ವಿವಿಧ ಕ್ಯಾಂಪ್ಗಳಲ್ಲಿ ಭಾಗವಹಿಸಿ ತರಬೆತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.
ಇನ್ನು ಜೋದ್ಫುರ್ನಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ. ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕಠಿಣ ತರಬೇತಿ ಪೂರೈಸಿದ ಏಕೈಕ ಯುವತಿ
ಪರ್ವಾತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಭವಾನಿ ಅವರು, ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟ್ಯೂಟ್ ಆಫ್ ಮೌಂಟೇನರಿಂಗ್ ಆಲೈಡ್ ಸ್ಪೋರ್ಟ್ಸ್(ಎಬಿವಿಐಎಂಎಎಸ್)ನಲ್ಲಿ ಮತ್ತು ಹೆಚ್ಚಿನ ತರಬೇತಿಯನ್ನು ಡಾರ್ಜಲಿಂಗ್ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ (ಹೆಚ್ಎಂಐ)ನಲ್ಲಿ ಪಡೆದಿದ್ದಾರೆ.
ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ನಿಂದ ಈಗಾಗಲೇ ಹಿಮಾಲಯ ಪರ್ವತ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿದ್ದು, ಈ ಪೈಕಿ ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ತರಬೇತಿಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಇಂತಹ ತರಬೇತಿಯನ್ನು ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಶಿಖರದ ತುದಿಯಲ್ಲಿ ಭಾರತದ ಬಾವುಟ
2018ರಲ್ಲಿ ಯೂರೋಪ್ ದೇಶಗಳ ಪೈಕಿ ಎತ್ತರದ ಒಂದನೇ ಪರ್ವತ ಹಾಗೂ ರಷ್ಯಾದ ಅತಿ ಎತ್ತರದ ಹಿಮಚ್ಚಾದಿತ ಪರ್ವತ ಎಲ್ಬ್ರಸ್ನ್ನು ನಿರಂತರವಾಗಿ ಸುಮಾರು 8 ಗಂಟೆಗಳ ಕಾಲ ಏರಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸಿ ಬಂದಿದ್ದಾರೆ. ಪರ್ವತಾರೋಹಣ ಬಳಿಕ ಸ್ಕೀಯಿಂಗ್ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ತರಬೇತಿಯನ್ನು ಭಾರತದ ಗುಲ್ಮಾರ್ಗ್ ಮತ್ತು ಕಾಶ್ಮೀರದಲ್ಲಿ ಪಡೆದಿದಲ್ಲದೆ, ಹೆಚ್ಚಿನ ತರಬೇತಿಯನ್ನು 2019ರಲ್ಲಿ ನ್ಯೂಜಿಲ್ಯಾಂಡ್ನ ಮೌಂಟ್ ರೂಪೇವ್ನಲ್ಲಿ ಪಡೆದು ಬಂದಿರುವುದು ಗಮನಾರ್ಹವಾಗಿದೆ.