ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಗ್ನಾನಂದ ಅವರು ನಾರ್ವೆ ಚೆಸ್ ಗ್ರೂಪ್ ಎ ಓಪನ್ ಟೂರ್ನಮೆಂಟ್ನಲ್ಲಿ ಒಂಬತ್ತು ಸುತ್ತುಗಳಿಂದ 7.5 ಪಾಯಿಂಟ್ಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅಗ್ರ ಶ್ರೇಯಾಂಕದ 16 ವರ್ಷದ ಗ್ರ್ಯಾಂಡ್ಮಾಸ್ಟರ್ ಪ್ರಜ್ಞಾನಂದ ಉತ್ತಮ ಫಾರ್ಮ್ನಲ್ಲಿದ್ದರು ಮತ್ತು ಒಂಬತ್ತು ಸುತ್ತುಗಳ ಮೂಲಕ ಅಜೇಯರಾಗಿ ಗೆಲುವಿನ ನಾಗಾಲೋಟ ಬೀರಿದರು.
ಶುಕ್ರವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಸಹ ಭಾರತೀಯ ಆಟಗಾರ, ಅಂತಾರಾಷ್ಟ್ರೀಯ ಮಾಸ್ಟರ್ ವಿ. ಪ್ರಣೀತ್ ವಿರುದ್ಧ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಮುಗಿಸಿದರು. ಪ್ರಜ್ಞಾನಂದ ಅವರು (ಎಲೋ 2642) ಎರಡನೇ ಸ್ಥಾನದಲ್ಲಿರುವ IM ಮಾರ್ಸೆಲ್ ಎಫ್ರೊಯಿಮ್ಸ್ಕಿ (ಇಸ್ರೇಲ್) ಮತ್ತು IM ಜಂಗ್ ಮಿನ್ ಸಿಯೊ (ಸ್ವೀಡನ್)ಗಿಂತ ಅಧಿಕ ಪೂರ್ಣ ಅಂಕವನ್ನು ಗಳಿಸಿದರು.
ಆರು ಪಾಯಿಂಟ್ಗಳೊಂದಿಗೆ ಪ್ರಣೀತ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದರು, ಆದರೆ ಕೆಳಕ್ರಮಾಂಕದ ಟೈ-ಬ್ರೇಕ್ ಸ್ಕೋರ್ನಿಂದ ಆರನೇ ಸ್ಥಾನ ಪಡೆದರು.
ವಿ. ಪ್ರಣೀತ್ ಅವರನ್ನು ಸೋಲಿಸುವುದರ ಹೊರತಾಗಿ ಚೆಸ್ ಚಾಂಪಿಯನ್ ಪ್ರಗ್ನಾನಂದ ಅವರು ವಿಕ್ಟರ್ ಮಿಖಲೆವ್ಸ್ಕಿ ಅವರನ್ನು 8ನೇ ಸುತ್ತಿನಲ್ಲಿ, ವಿಟಾಲಿ ಕುನಿನ್ ಅವರನ್ನು 6ನೇ ಸುತ್ತಿನಲ್ಲಿ, ಮುಖಮ್ಮದ್ಜೋಖಿದ್ ಸುಯರೋವ್ ಅವರನ್ನು 4ನೇ ಸುತ್ತಿನಲ್ಲಿ, ಸೆಮೆನ್ ಮುಟುಸೊವ್ 2ನೇ ಸುತ್ತಿನಲ್ಲಿ ಮತ್ತು ಮಥಿಯಾಸ್ ಉನ್ನೆಲ್ಯಾಂಡ್ ಅವರನ್ನು 1ನೇ ಸುತ್ತಿನಲ್ಲಿ ವಿರುದ್ಧ ಜಯ ಗಳಿಸಿದರು. ಇದೇ ವೇಳೇ ತಮ್ಮ ಇತರ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡರು.
ಭಾರತದ ಯುವ ಚೆಸ್ ತಾರೆ ಇತ್ತೀಚಿನ ದಿನಗಳಲ್ಲಿ ಪ್ರಭಾವಶಾಲಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ ಮತ್ತು ಚೆಸ್ಸಬಲ್ ಮಾಸ್ಟರ್ ಆನ್ಲೈನ್ ಈವೆಂಟ್ನಲ್ಲಿ ಎರಡನೇ ಬಾರಿಗೆ ವಿಶ್ವದ ನಂಬರ್ ಒನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಸೋಲಿಸಿದ್ದಾರೆ. ಆದರೆ ಚೀನಾದ ಡಿಂಗ್ ಲಿರೆನ್ಗೆ ನಿಕಟ ಪೈಪೋಟಿ ನೀಡಿ ಫೈನಲ್ನಲ್ಲಿ ಸೋತರು.
ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್ನ ಮುಕ್ತ ಸ್ಪರ್ಧೆಯಲ್ಲಿ ಗ್ರ್ಯಾಂಡ್ಮಾಸ್ಟರ್ ಭಾರತ ಬಿ ತಂಡದ ಭಾಗವಾಗಲಿದ್ದಾರೆ. ಗೆಲುವಿನ ನಂತರ ಕೋಚ್ ಆರ್.ಬಿ. ರಮೇಶ್ ಅವರು ಪ್ರಗ್ನಾನಂದರನ್ನು ಅಭಿನಂದಿಸಿದರು ಮತ್ತು ಇದು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
"ಪ್ರಜ್ಞಾನಂದರಿಗೆ ಗೆಲುವಿಗಾಗಿ ಅಭಿನಂದನೆಗಳು. ಅವರು ಅಗ್ರ ಶ್ರೇಯಾಂಕದ ಆಟಗಾರ, ಆದ್ದರಿಂದ ಅವರು ಪಂದ್ಯಾವಳಿಯನ್ನು ಗೆದ್ದರೂ ಆಶ್ಚರ್ಯವಿಲ್ಲ. ಅವರು ಸಾಮಾನ್ಯವಾಗಿ ಉತ್ತಮವಾಗಿ ಆಡುತ್ತಾರೆ. ಕಪ್ಪು ಕಾಯಿಗಳೊಂದಿಗೆ ಮೂರು ಪಂದ್ಯಗಳನ್ನು ಡ್ರಾ ಮಾಡಿದರು ಮತ್ತು ಉಳಿದ ಪಂದ್ಯಗಳನ್ನು ಗೆದ್ದರು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ," ಎಂದು ಕೋಚ್ ಆರ್.ಬಿ. ರಮೇಶ್ ತಿಳಿಸಿದರು.