ನವದೆಹಲಿ, ಏ. 30: ಕೆಲವು ದಿನಗಳ ಹಿಂದಷ್ಟೇ ಮುಕ್ತಾಯಗೊಂಡ ಪ್ರತಿಷ್ಠಿತ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಅಥ್ಲೀಟ್ ನೀರಜ್ ಚೋಪ್ರಾ ಹೆಸರು ಭಾರತದ ಗೌರವಾನ್ವಿತ ಪ್ರಶಸ್ತಿ 'ರಾಜೀವ್ ಗಾಂಧಿ ಖೇಲ್ ರತ್ನಾ'ಕ್ಕೆ ನೋಂದಾವಣೆಯಾಗಿದೆ.
ಏಪ್ರಿಲ್ ತಿಂಗಳಾರಂಭದಲ್ಲಿ ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದು ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿಭಾಗಕ್ಕೆ ಲಭಿಸಿದ ಮೊದಲ ಚಿನ್ನದ ಪದಕವಾಗಿತ್ತು.
ಪ್ರತಿಭಾನ್ವಿತ ಕ್ರೀಡಾಪಟುಗಳ ಕಣಜವೆಂದೇ ಖ್ಯಾತಿಯಾದ ಹರಿಯಾಣ ರಾಜ್ಯದ ಪಾಣೀಪತ್ ನವರಾದ ನೀರಜ್ ತನ್ನ ಹೆಸರು ಖೇಲ್ ರತ್ನಕ್ಕೆ ಶಿಫಾರಸ್ಸಾಗಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುಂದೆ ತನ್ನ ಜಾವೆಲಿನ್ ಎಸೆತದ ಸಾಧನೆ ಉತ್ತಮ ಪಡಿಸುವುದಾಗಿ, 90ಮೀ. ದೂರ ಜಾವೆಲಿನ್ ಎಸೆತದ ಸಾಧನೆ ಮೆರೆಯುವತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.
'ಖೇಲ್ ರತ್ನಾಕ್ಕೆ ಹೆಸರು ನೋಂದಾವಣೆಯಾಗಿದ್ದು ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ. ಇದು ಖುಷಿಯೊಂದಿಗೆ ಸ್ವೀಕರಿಸುತ್ತಿರುವ ದೊಡ್ಡ ಸವಾಲೂ ಹೌದು' ಎಂದು 20ರ ಹರೆಯದ ನೀರಜ್ ಸಂತಸ ವ್ಯಕ್ತಪಡಿಸಿದ್ದಾರೆ.
ಮೇ 4ರಂದು ಕತರ್ ನ ದೋಹಾದಲ್ಲಿ ಆರಂಭಗೊಳ್ಳಲಿರುವ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕಾಗಿ ನೀರಜ್ ತೆರಳಲಿದ್ದು, ಅಲ್ಲಿ ಹೆಚ್ಚಿನ ಸಾಧನೆ ಮೆರೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ದೋಹಾ ಕೂಟ ನೀರಜ್ ಪಾಲ್ಗೊಳ್ಳುತ್ತಿರುವ ಎರಡನೇ ಡೈಮಂಡ್ ಲೀಗ್ ಆಗಿದ್ದು, ಕಳೆದ ವರ್ಷ ಪ್ಯಾರೀಸ್ ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ನಲ್ಲಿ ಚೋಪ್ರಾ 84.67 ಮೀ. ದೂರ ಜಾವೆಲಿನ್ ಥ್ರೋ ಸಾಧನೆಯೊಂದಿಗೆ ಗಮನ ಸೆಳೆದಿದ್ದರು.