ಕಾಮನ್ವೆಲ್ತ್ ಗೇಮ್ಸ್ನ ಟ್ರಯಲ್ಸ್ನಲ್ಲಿ 125 ಕೆಜಿ ವಿಭಾಗದ ಫೈನಲ್ನಲ್ಲಿ ಸೋತ ನಂತರ ಕುಸ್ತಿಪಟು ಸತೇಂದರ್ ಮಲಿಕ್ ಅವರು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನವದೆಹಲಿಯ ಕೆಡಿ ಜಾಧವ್ ಹಾಲ್ನಲ್ಲಿ ರೆಫರಿ ಜಗ್ಬೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸತೇಂದರ್ ಮಲಿಕ್ ಅವರಿಗೆ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಅಜೀವ ನಿಷೇಧ ಹೇರಿದೆ. ಈ ಪಂದ್ಯದಲ್ಲಿ ಏರ್ಫೋರ್ಸ್ ತಂಡದ ಸತೇಂದರ್ ಮಲಿಕ್ ಹಾಗೂ ಮೋಹಿತ್ ಮುಖಾಮುಖಿಯಾಗಿದ್ದರು.
ಪಂದ್ಯವು ಕೊನೆಗೊಳ್ಳಲು 18 ಸೆಕೆಂಡುಗಳಿರುವಾಗ 3-0 ಯಿಂದ ಸತೇಂದರ್ ಮಲಿಕ್ ಮುನ್ನಡೆಯಲ್ಲಿದ್ದರು. ಈ ಹಂತದಲ್ಲಿ ಮೋಹಿತ್ "ಟೇಕ್ಡೌನ್' ನಡೆ ಪ್ರಯೋಗಿಸಿದರು. ಈ ವೇಳೆ ಸತೇಂದರ್, ಮೋಹಿತ್ ಅವರನ್ನು ಮ್ಯಾಟ್ನಿಂದ ಹೊರಕ್ಕೆ ದೂಡಿದರು. ಆದರೆ ಪಂದ್ಯದ ರೆಫರಿ ವೀರೇಂದ್ರ ಮಲಿಕ್ ಟೇಕ್ಡೌನ್ಗೆ ಮಾತ್ರ ಎರಡು ಪಾಯಿಂಟ್ ನೀಡಿದ್ದರು. ಆದರೆ ಹೊರದೂಡಿದ್ದಕ್ಕೆ ಪಾಯಿಂಟ್ ನೀಡಿರಲಿಲ್ಲ.
ಈ ವೇಳೆ ಮೋಹಿತ್ ಹೆಚ್ಚುವರಿ ಪಾಯಿಂಟ್ಗಾಗಿ ಮೇಲ್ಮನವಿ ಸಲ್ಲಿಸಿದರು. ಈ ವೇಳೆ ಸೀನಿಯರ್ ರೆಫರಿ ಆಗಿದ್ದ ಜಗ್ಬೀರ್ ಸಿಂಗ್ ಅವರು ಟಿವಿ ಮರುಪರಿಶೀಲನೆಗೆ ಸೂಚಿಸಿದರು. ಅಲ್ಲದೆ ಮರುಪರಿಶೀಲನೆ ವೇಳೆ ಹೊರದೂಡಿದ್ದಕ್ಕೆ ಹೆಚ್ಚುವರಿ ಪಾಯಿಂಟ್ಸ್ ನೀಡಬೇಕಾಗಯಿತು. ಅದರಂತೆ ಮೋಹಿತ್ ಅವರಿಗೆ ಮೂರು ಪಾಯಿಂಟ್ಸ್ ನೀಡಲಾಯಿತು.
ಈ ವೇಳೆ ಬೌಟ್ 3-3ರಿಂದ ಸಮಬಲವಾಯಿತು. ಅಷ್ಟೇ ಅಲ್ಲದೆ ಬೌಟ್ನ ಕೊನೆಯ ಪಾಯಿಂಟ್ ಮೋಹಿತ್ ಗಳಿಸಿದ್ದರಿಂದ ಅವರನ್ನೇ ವಿಜಯಿ ಎಂದು ಘೋಷಿಸಲಾಯಿತು. ಇದರಿಂದ ಸಂಯಮ ಕಳೆದುಕೊಂಡ ಸತೇಂದರ್ ಸೀನಿಯರ್ ರೆಫರಿ ಜಗ್ಬೀರ್ ಸಿಂಗ್ ಅವರನ್ನು ನಿಂದಿಸಿದ್ದಾರೆ.
ಅಷ್ಟೇ ಅಲ್ಲದ ಬಳಿಕ ಕಪಾಳಕ್ಕೆ ಹೊಡೆಯುವ ಮೂಲಕ ದೈಹಿಕ ಹಲ್ಲೆ ನಡೆಸಿದರು. ಇತ್ತ ಅನಿರೀಕ್ಷಿತ ಹಲ್ಲೆಯಿಂದಾಗಿ ರೆಫರಿ ನೆಲಕ್ಕುರುಳಿದರು, ಅಷ್ಟರಲ್ಲಾಗಲೇ ಕುಸ್ತಿ ಆಯೋಜಕರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ಘಟನೆಯ ವೇಳೆ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷನ್ ಶರಣ್ ಸಿಂಗ್ ಕೂಡ ಸ್ಥಳದಲ್ಲಿ ಹಾಜರಿದ್ದರು. ಹೀಗಾಗಿ ಸತೇಂದರ್ ಮಲಿಕ್ ಅವರ ನಡೆಯ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅದರಂತೆ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಇದೀಗ ಸತೇಂದರ್ ಮಲಿಕ್ ಅವರಿಗೆ ರಾಷ್ಟ್ರೀಯ ಕುಸ್ತಿ ಫೆಡರೇಶನ್ನಿಂದ ಆಜೀವ ನಿಷೇಧ ಹೇರಿದೆ.
ಪ್ರತಿಯೊಬ್ಬರೂ ನಿಜವಾದ ಆತ್ಮದೊಂದಿಗೆ ಆಡಬೇಕು:
"ಕುಸ್ತಿಪಟುಗಳಿಂದ ಈ ಸಂಗತಿಗಳು ಸಂಭವಿಸಬಾರದು ಮತ್ತು ಕ್ರೀಡೆಯನ್ನು ನಿಜವಾದ ಉತ್ಸಾಹ ಹಾಗೂ ಸ್ಫೂರ್ತಿಯಿಂದ ಆಡಬೇಕು. ಇದು ನನ್ನ ಪಂದ್ಯವಲ್ಲ, ಆದ್ದರಿಂದ ನಾನು ನೋಡಲಾಗಲಿಲ್ಲ ಆದರೆ ಈ ಎಲ್ಲಾ ಸಂಗತಿಗಳು ಸಂಭವಿಸಬಾರದು ಮತ್ತು ಪ್ರತಿಯೊಬ್ಬರೂ ಆಟದ ನಿಜವಾದ ಉತ್ಸಾಹದಿಂದ ಆಡಬೇಕೆಂದು ನಾನು ಹೇಳಲು ಬಯಸುತ್ತೇನೆ,'' ಎಂದು ಭಾರತದ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾ ತಿಳಿಸಿದರು.
"ದೇಶಕ್ಕಾಗಿ ಚಿನ್ನದ ಪದಕ ಗೆಲ್ಲಲು ಎದುರು ನೋಡುತ್ತಿದ್ದೇವೆ. ಆದ್ದರಿಂದ ನಾವು ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದ್ದೇವೆ ಮತ್ತು ನೀವು ಪ್ರಾರ್ಥನೆ ಮತ್ತು ಬೆಂಬಲವನ್ನು ಮುಂದುವರಿಸಿದರೆ ನಾವು ದೇಶಕ್ಕೆ ಚಿನ್ನ ಗೆಲ್ಲುತ್ತೇವೆ,'' ಎಂದು ರವಿ ದಹಿಯಾ ಹೇಳಿದರು.