ಮಡಿಕೇರಿ, ಜೂನ್ 23: ಭಾರತ ಕಂಡ ಶ್ರೇಷ್ಠ ಓಟಗಾರ 'ಫ್ಲೈಯಿಂಗ್ ಸಿಖ್' ಮಿಲ್ಖಾ ಸಿಂಗ್ ಬಗ್ಗೆ ಕೇಳಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ದಿಗ್ಗಜ ಓಟಗಾರ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇಂತಾ ದಿಗ್ಗಜ ಓಟಗಾರ ಮಿಲ್ಖಾ ಸಿಂಗ್ ಅವರನ್ನು ಕರ್ನಾಟಕದ ಓರ್ವ ಓಟಗಾರ ಸೋಲಿಸಿದ್ದ ಸಂಗತಿ ನಿಮಗೆ ಗೊತ್ತಿದೆಯಾ? ಕೊಡಗು ಜಿಲ್ಲೆಯ ಕುಂಜಿಯಂಡ ಅಯ್ಯಣ್ಣ ಅವರ ಬಗ್ಗೆ ಯಾರಿಗೂ ಗೊತ್ತಿಲ್ಲದಿರುವುದು ನಿಜಕ್ಕೂ ವಿಷಾದನೀಯ.
1951 ರಲ್ಲಿ ಕೊಡಗಿನ ಯುವಕ ಐಯ್ಯಣ್ಣ ಅವರು 100 ಮೀಟರ್ ಓಟದಲ್ಲಿ ಫ್ಲೈಯಿಂಗ್ ಸಿಖ್ ಖ್ಯಾತಿಯ ಸಿಂಗ್ ಅವರನ್ನು ಸೋಲಿಸಿದ್ದರು. ಅಯ್ಯಣ್ಣ ಅವರು 10.69 ಸೆಕೆಂಡುಗಳಲ್ಲಿ ಗುರಿ ತಲುಪಿದರೆ ಮಿಲ್ಖಾ ಸಿಂಗ್ 10.75 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ 0.06 ಸೆಕೆಂಡುಗಳ ಮಹತ್ವ ಐಯ್ಯಣ್ಣ ಜೀವನದಲ್ಲಿ ಮರೆಯಲಿಲ್ಲ. ಇದಷ್ಟೆ ಅಲ್ಲ, ಅಯ್ಯಣ್ಣ ಅವರು ಕರ್ನಾಟಕವನ್ನು ರಾಷ್ಟ್ರಮಟ್ಟದ 100 ಮೀ. ಓಟದಲ್ಲಿ ಪ್ರತಿನಿಧಿಸಿದ್ದು ಹಲವಾರು ಬಾರಿ ಮಿಲ್ಖಾ ಸಿಂಗ್ ಅವರನ್ನು ಸೋಲಿಸಿದ ಕೀರ್ತಿ ಹೊಂದಿದ್ದಾರೆ. ಅದರೆ ನಮ್ಮದೇ ನಾಡಿನ ಈ ಹೆಮ್ಮೆಯ ಕ್ರೀಡಾಪಟುವಿನ ಹೆಸರು ಇಂದಿಗೂ ಮರೆಯಲ್ಲೇ ಉಳಿದಿದೆ. 100 ಮೀ. ಅಯ್ಯಣ್ಣ ಅವರ ಸಾಧನೆಗೆ ಎಂದಿಗೂ ಮನ್ನಣೆ ದೊರೆತಿಲ್ಲ ಮತ್ತು ಅವರ ಹೆಸರು ಇತಿಹಾಸದ ಪುಟಗಳಲ್ಲಿ ಮರೆಯಾಗಿದೆ.
ಮಿಲ್ಖಾ ಸಿಂಗ್ ನಿಧನರಾದ ಸುದ್ದಿ ಮೂರು ದಿನಗಳ ಹಿಂದೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಡ್ ಲೈನ್ ಆದ ನಂತರವೇ ಐಯ್ಯಣ್ಣ ಅವರ ಸಾಧನೆ ಬೆಳಕಿಗೆ ಬಂದಿದೆ. ಈಗ ಅಯ್ಯಣ್ಣ ಕೊಡಗಿನ ನೂರಾರು ಕುಟುಂಬಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಕೊಡಗು ಜಿಲ್ಲೆಯ ಅಮ್ಮತಿಯಲ್ಲಿರುವ ಕವಾಡಿ ಗ್ರಾಮದಿಂದ ಬಂದ ಅಯ್ಯಣ್ಣ ಅವರು ಆಗಸ್ಟ್ 2, 1929 ರಂದು ಕುಂಜಿಯಂಡ ಚಿನ್ನಪ್ಪ ಮತ್ತು ಸೀತವ್ವ ದಂಪತಿಯ ಮಗನಾಗಿ ಜನಿಸಿದರು. ನಂತರ ಅವರು ಭಾರತೀಯ ಸೈನ್ಯಕ್ಕೆ ಸೇರಿ ಫಿರಂಗಿ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ಅವರೋರ್ವ ಓಟಗಾರನಾಗಿದ್ದರಿಂದ ಅವರ ಕಮಾಂಡಿಂಗ್ ಅಧಿಕಾರಿಗಳು ಅವರ ಪ್ರತಿಭೆಯನ್ನು ಗುರುತಿಸಿದರು ಮತ್ತು ಅವರ ಸೈನ್ಯದ ಕರ್ತವ್ಯಗಳ ನಡುವೆಯೂ ಅವರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಅಯ್ಯಣ್ಣ ನಿಜವಾದ ಕ್ರೀಡಾಪಟು ಎಂದು ಸಾಬೀತಾಯಿತು ಮತ್ತು ರಾಷ್ಟ್ರೀಯ ಮಟ್ಟದ 100 ಮೀಟರ್ ಓಟದಲ್ಲಿ ಅನೇಕ ಬಾರಿ ಐಯ್ಯಣ್ಣ ತಮ್ಮ ಸಾಧನೆ ಮೆರೆದರೂ ಜನತೆಗೆ ಅವರು ಅಪರಿಚಿತರಾಗಿಯೇ ಉಳಿದರು. ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಂತರ, ಅಯ್ಯಣ್ಣ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ನಲ್ಲಿ ಕೆಲಸ ಮಾಡಿದರು. ನಂತರ 1995 ರಲ್ಲಿ ತನ್ನ 65 ನೇ ವಯಸ್ಸಿನಲ್ಲಿ ನಿಧನರಾದರು.
ಮಡಿಕೇರಿಯಲ್ಲಿ ಕಾರ್ಯಕ್ರಮಗಳ ಆಯೋಜನೆ ಉದ್ಯೋಗ ಮಾಡುತ್ತಿರುವ ಅವರ ಪುತ್ರ ಅರುಣ್ ಐಯ್ಯಣ್ಣ ಅವರು ಮಾತನಾಡಿದರು. "ಭಾರತದಲ್ಲಿ ಕ್ರೀಡೆಗಳನ್ನು ಕನಿಷ್ಠ ಆದ್ಯತೆಯೆಂದು ಪರಿಗಣಿಸಲಾಗಿದ್ದ ಸಮಯದಲ್ಲಿ ಮತ್ತು ಕ್ರೀಡಾಪಟುಗಳಿಗೆ ಮೂಲಭೂತ ಸೌಲಭ್ಯಗಳಿಲ್ಲದ ಸಮಯದಲ್ಲಿ ಅವರು ಅಥ್ಲೆಟಿಕ್ಸ್ನಲ್ಲಿ ಹೇಗೆ ಕಷ್ಟಪಟ್ಟರು ಎಂಬುದರ ಬಗ್ಗೆ ಅವರು ನಮಗೆ ಹೇಳುತ್ತಿದ್ದರು. ದಕ್ಷಿಣ ಭಾರತದ ಜನರನ್ನು ಹೇಗೆ 'ಮದ್ರಾಸಿಸ್' ಎಂದು ಕರೆಯುತ್ತಾರೆ ಮತ್ತು ಉತ್ತರದ ಕ್ರೀಡಾಪಟುಗಳು ಅವರನ್ನು ಕೀಳಾಗಿ ಕಾಣುತ್ತಾರೆ ಎಂಬ ಬಗ್ಗೆ ಅವರು ನಮಗೆ ತಿಳಿಸಿದರು" ಎಂದು ಅರುಣ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ದಕ್ಷಿಣದವರಿಗೆ ಉತ್ತರದವರಿಂದ ತಾರತಮ್ಯ ಸ್ಪಷ್ಟವಾಗಿತ್ತು. 100 ಮೀಟರ್ ಓಟದಲ್ಲಿ ಉತ್ತಮ ಸಾಧನೆ ಮಾಡಿದರೂ ಯಾರೂ ಅವರನ್ನು ಗುರುತಿಸಲಿಲ್ಲ ಎಂದು ಬೆಂಗಳೂರು ಸ್ಪೋರ್ಟ್ಸ್ ಹಾಸ್ಟೆಲ್ನಲ್ಲಿ ಅಧ್ಯಯನ ಮಾಡಿದ ಅರುಣ್ ಹೇಳಿದರು. ಅವರ ಸಹೋದರ ಅನಿಲ್ ಬೆಂಗಳೂರಿನ ಬಿಇಎಂಎಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಯ್ಯಣ್ಣ ಅವರ ಸಹೋದರ 84 ವರ್ಷದ ಕುಂಜಿಯಂಡ ಪೂವಯ್ಯ ಮೈಸೂರಿನ ಗೋಕುಲಂ ನಿವಾಸಿಯಾಗಿದ್ದು, ಅವರು ಕೂಡ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುವೂ ಆಗಿದ್ದರು. "ನಾನು ನನ್ನ ಸಹೋದರನೊಂದಿಗೆ ಒಂದೆರಡು ಬಾರಿ ದೆಹಲಿಗೆ ಹೋಗಿದ್ದೆ ನನ್ನ ಸಹೋದರನನ್ನು ಈಗಲಾದರೂ ಗುರುತಿಸಿರುವುದಕ್ಕೆ ನನಗೆ ಖುಷಿಯಾಗಿದೆ" ಎಂದು ಅವರು ಹೇಳಿದರು.