ಬರ್ಮಾರ್, ಸೆ.23: ಅರ್ಜುನ ಪ್ರಶಸ್ತಿ ವಿಜೇತ, ರೇಸಿಂಗ್ ಸ್ಟಾರ್ ಗೌರವ್ ಗಿಲ್ ಹಾಗೂ ನೇವಿಗೇಟರ್ ವಿರುದ್ಧ ಅಪಘಾತ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ. ರಾಷ್ಟ್ರೀಯ ರೇಸಿಂಗ್ ಚಾಂಪಿಯನ್ ಶಿಪ್ ವೇಳೆ ಮೋಟರ್ ಸೈಕಲ್ ಗೆ ಗೌರವ್ ಗಿಲ್ ಅವರಿದ್ದ ರೇಸಿಂಗ್ ಕಾರು ಗುದ್ದಿದೆ. ಬೈಕಿನಲ್ಲಿದ್ದ ದಂಪತಿ ಹಾಗೂ ಪುತ್ರ ಮೃತಪಟ್ಟಿದ್ದಾರೆ.
ಇದಲ್ಲದೆ, ಈ ರೇಸಿಂಗ್ ಆಯೋಜಿಸದ್ದ ಮ್ಯಾಕ್ಸ್ ಪೇರಿನಸ್, ಮಹೀಂದ್ರಾ, ಜೆಕೆ ಟೈಯರ್ಸ್, ಎಂಆರ್ ಎಫ್ ಟೈಯರ್ಸ್ ಹಾಗೂ ಫೆಡೆರೇಷನ್ ಆಫ್ ಮೋಟರ್ ಸ್ಫೋರ್ಟ್ಸ್ ಕ್ಲಬ್ ಆಫ್ ಇಂಡ್ಯಾ ವಿರುದ್ಧ ಕೂಡಾ ಎಫ್ಐಆರ್ ದಾಖಲಾಗಿದೆ.
"ಸಂದಾರಿ ಪೊಲೀಸ್ ಠಾಣೆಯಲ್ಲಿ ಭಾನುವಾರದಂದು ಗೌರವ್ ಗಿಲ್, ಎಂ ಷರೀಫ್ ವಿರುದ್ಧ ಐಪಿಸಿ ಸೆಕ್ಷನ್ 304 ಅನ್ವಯ ಎಫ್ಐಆರ್ ಹಾಕಲಾಗಿದೆ" ಎಂದು ಹೆಚ್ಚುವರಿ ಎಸ್ಪಿ ಖಿನ್ವ್ ಸಿಂಗ್ ಹೇಳಿದ್ದಾರೆ.
ಮೃತರನ್ನು ನರೇಂದ್ರ ಕುಮಾರ್, ಅವರ ಪತ್ನಿ ಪುಷ್ಪಾ ದೇವಿ ಹಾಗೂ ಪುತ್ರ ಜಿತೇಂದ್ರ ಎಂದು ಗುರುತಿಸಲಾಗಿದೆ. ಮೂವರ ಸಾವಿಗೆ ಕಾರಣರಾದ ರೇಸ್ ಕಾರು ಚಾಲಕರ ಬಂಧನಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ, ಪರಿಹಾರ ಧನ ಬೇಡಿಕೆ ಇಟ್ಟಿದ್ದಾರೆ.
"ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ನನ್ನ ತಂದೆ, ತಾಯಿ ಹಾಗೂ ನನ್ನ ತಮ್ಮ ಮಾತನಾಡುತ್ತಿದ್ದಾಗ, ಗಿಲ್ ಅವರ ಕಾರು ಬಡಿದಿದೆ. ಇದಾದ ಬಳಿಕ ಹಿಂಬದಿ ಬರುತ್ತಿದ್ದ ಇನ್ನೆರಡು ಕಾರು ಡಿಕ್ಕಿ ಹೊಡೆದಿದೆ. ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ, ನಮಗೆ ಆದ ನಷ್ಟ ತುಂಬುವವರು ಯಾರು" ಎಂದು ಮೃತ ನರೇಂದ್ರ ಅವರ ಹಿರಿಯ ಪುತ್ರ ರಾಹುಲ್ ಪ್ರಶ್ನಿಸಿದ್ದಾರೆ.
ಈ ಘಟನೆಯಲ್ಲಿ ಗಿಲ್ ಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ರೇಸಿಂಗ್ ರದ್ದು ಮಾಡಲಾಗಿದೆ.