ಭಾರತೀಯ ಕ್ರೀಡಾಪಟುಗಳ ಕ್ರೀಡಾ ಸಾಧನೆಗಾಗಿ ನೀಡಲಾಗುತ್ತಿದ್ದ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರಗಳಲ್ಲಿ ಒಂದಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ' ಪ್ರಶಸ್ತಿ ಎಂದು ಬದಲಾಯಿಸಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಆದಷ್ಟು ಬೇಗ ಬದಲಾಯಿಸುವುದಾಗಿ ಈ ಹಿಂದೆಯೇ ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ಇದೀಗ ಕೇಂದ್ರ ಸರ್ಕಾರವು ಭಾರತ ಹಾಕಿ ಇತಿಹಾಸದಲ್ಲಿ ಅತಿ ದೊಡ್ಡ ಕೊಡುಗೆಯನ್ನು ಸಲ್ಲಿಸಿರುವ ಮಾಜಿ ಹಾಕಿ ಆಟಗಾರ ಧ್ಯಾನ್ ಚಂದ್ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಇಟ್ಟಿದೆ. ಭಾರತ ದೇಶದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮಗ ರಾಜೀವ್ ಗಾಂಧಿ ಕೂಡ ಭಾರತದ ಪ್ರಧಾನಿಯಾಗಿದ್ದರು, ಹೀಗಾಗಿ ಅವರ ಗೌರವಾರ್ಥ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕ್ರೀಡಾಪಟುಗಳಿಗೆ ನೀಡಲಾಗುತ್ತಿತ್ತು.
ಆದರೆ ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರನ್ನು ಮರುನಾಮಕರಣ ಮಾಡಿದ್ದು ಕ್ರೀಡಾಪಟುಗಳಿಗೆ ನೀಡಲಾಗುವ ಪ್ರಶಸ್ತಿಯ ಹೆಸರು ಭಾರತ ಕ್ರೀಡಾ ಜಗತ್ತಿಗೆ ಅಪಾರವಾದ ಕೊಡುಗೆಗಳನ್ನು ಸಲ್ಲಿಸಿರುವ ಕ್ರೀಡಾಪಟುಗಳ ಹೆಸರಿನಲ್ಲಿಯೇ ಇರಬೇಕೆಂದು ಧ್ಯಾನ್ ಚಂದ್ ಅವರ ಹೆಸರನ್ನು ರಾಜೀವ್ ಗಾಂಧಿ ಅವರ ಹೆಸರಿನ ಜಾಗಕ್ಕೆ ಇಟ್ಟಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ಮತ್ತು ವಿರೋಧ ಎರಡೂ ವ್ಯಕ್ತವಾಗುತ್ತಿದ್ದು ಕೆಲವರು ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಇನ್ನೂ ಕೆಲವರು ಈ ಮರುನಾಮಕರಣದ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಇದೀಗ ಈ ಖೇಲ್ ರತ್ನ ಪ್ರಶಸ್ತಿಯ ಕುರಿತು ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೊಸ ವಿವಾದವನ್ನು ಎಬ್ಬಿಸುವ ಲಕ್ಷಣಗಳು ಕಾಣುತ್ತಿವೆ. ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್ ಕ್ರೀಡಾಪಟುಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗೆ ಕ್ರೀಡಾಪಟುಗಳ ಹೆಸರನ್ನೇ ಇಟ್ಟಿರುವುದು ನಿಜಕ್ಕೂ ಖುಷಿಯ ವಿಚಾರ, ಹೀಗೆಯೇ ಕ್ರೀಡೆಗೆ ಸಂಬಂಧಿಸಿದ ಎಲ್ಲಾ ವಿಭಾಗಗಳಲ್ಲಿಯೂ ಇದೇ ರೀತಿಯ ನಿರ್ಧಾರಗಳನ್ನು ಕೈಗೊಂಡರೆ ಇನ್ನೂ ಖುಷಿ ಎಂದಿದ್ದಾರೆ.
ಹೀಗೆ ಮತ್ತೊಂದು ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿದ ಹಾಗೆ ಭಾರತದಲ್ಲಿರುವ ಹಲವಾರು ಕ್ರೀಡಾಂಗಣಗಳ ಹೆಸರನ್ನು ಕೂಡ ಮರು ನಾಮಕರಣ ಮಾಡಿ ಆ ಕ್ರೀಡಾಂಗಣಗಳಿಗೆ ಕ್ರೀಡಾಪಟುಗಳ ಹೆಸರನ್ನೇ ಇಟ್ಟರೆ ಇನ್ನೂ ಚೆಂದ ಎಂದಿದ್ದಾರೆ. ಇರ್ಫಾನ್ ಪಠಾಣ್ ಮಾಡಿರುವ ಈ ಟ್ವೀಟ್ ಒಳಾರ್ಥವನ್ನು ಕೆದಕಿದರೆ ಇರ್ಫಾನ್ ಪಠಾಣ್ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ಕುಟುಕಿದ್ದಾರಾ ಎಂಬ ಸಂಶಯ ಮೂಡದೇ ಇರಲಾರದು.
ಹೌದು ಇರ್ಫಾನ್ ಪಠಾಣ್ ಮಾಡಿರುವ ಈ ಟ್ವೀಟ್ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ಕಾಲೆಳೆದ ರೀತಿ ಇದೆ ಎನಿಸುವುದಕ್ಕೆ ಕಾರಣ ಇತ್ತೀಚೆಗಷ್ಟೇ ಅಹ್ಮದಾಬಾದ್ ನಗರದಲ್ಲಿರುವ ಮೊಟೆರಾ ಸ್ಟೇಡಿಯಂ ಹೆಸರನ್ನು ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಎಂದು ಬದಲಾಯಿಸಿದ್ದು! ನಿಜ ಇತ್ತೀಚಿಗಷ್ಟೆ ಮೊಟೇರಾ ಸ್ಟೇಡಿಯಂ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಬದಲಾಯಿಸಿದ ಘಟನೆ ನಿಮಗೆಲ್ಲರಿಗೂ ತಿಳಿದೇ ಇದೆ. ಹೀಗಾಗಿ ಇರ್ಫಾನ್ ಪಠಾಣ್ ಕ್ರೀಡಾಂಗಣಗಳಿಗೂ ಸಹ ಕ್ರೀಡಾಪಟುಗಳ ಹೆಸರನ್ನೇ ಇಟ್ಟರೆ ಚೆಂದ ಎಂದು ಮಾಡಿರುವ ಟ್ವೀಟ್ ನರೇಂದ್ರ ಮೋದಿ ಸ್ಟೇಡಿಯಂ ಹೆಸರನ್ನು ಬದಲಾಯಿಸಬೇಕೆಂಬುದರ ಕುರಿತು ಎಂಬಂತಿದೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಾಯಿಸಿದ ರೀತಿ ನರೇಂದ್ರ ಮೋದಿ ಸ್ಟೇಡಿಯಂ ಹೆಸರನ್ನು ಬದಲಾಯಿಸಬೇಕು ಎನ್ನುವರ್ಥದಲ್ಲಿ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದು ಈಗಾಗಲೇ ಇರ್ಫಾನ್ ಪಠಾಣ್ ಟ್ವೀಟ್ ಕುರಿತು ಮೋದಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಲು ಆರಂಭಿಸಿದ್ದಾರೆ.