ಬಾಡಿಗೆ ಮನೆಯಲ್ಲಿ ವಾಸ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಕುಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿರುವ ಈರಣ್ಣ-ಚಂದ್ರಮ್ಮ ದಂಪತಿ ಪುತ್ರ ಇ ನಾಗರಾಜು. ಕಾಡುಗೊಲ್ಲ ಬುಡಕಟ್ಟು ಸಮುದಾಯದ ಈರಣ್ಣ-ಚಂದ್ರಮ್ಮ ಇಬ್ಬರಿಗೂ ಅಕ್ಷರ ಜ್ಞಾನವಿಲ್ಲ. ತಂದೆ ಈರಣ್ಣ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯವಸಾಯ ಮಾಡಿಕೊಂಡಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದಡಿಯಲ್ಲಿ ಚಿತ್ರದುರ್ಗ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿರುವ ಈ ನಾಗರಾಜು ಮುಂಬರುವ ಡಿಸೆಂಬರ್ನಲ್ಲಿ ತೈವಾನ್ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಅಲ್ಲಿ ಪದಕ ಗೆದ್ದರೆ 4 ವರ್ಷಗಳಿಗೊಮ್ಮೆ ನಡೆಯುವ ಗ್ರ್ಯಾಂಡ್ ಚಾಂಪಿಯನ್ಷಿಪ್ಗೆ ನಾಗರಾಜು ಅವರಿಗೆ ಆಯ್ಕೆ ಲಭಿಸಲಿದೆ. ಆದರೆ ಬರಿಗೈಯ್ಯಲ್ಲಿರುವ ಈ ನಾಗರಾಜುಗೆ ನೆರವು ಲಭಿಸದಿದ್ದರೆ ಆತನ ಕನಸು ಕಮರಿ ಹೋಗಲಿದೆ. ಜಿಲ್ಲೆ, ತಾಲೂಕಿನಲ್ಲಿ ಶಾಸಕರು, ಸಂಸದರ ನಿರ್ಲಕ್ಷ್ಯಕ್ಕೊಳಗಾಗಿರುವ ಕ್ರೀಡಾಪಟುವಿಗೆ ನೀವು ಬೆನ್ನು ತಟ್ಟಿ ಧೈರ್ಯ ಹೇಳಬೇಕಿದೆ.
ಅಪ್ರತಿಮ ಓಟಗಾರ ನಾಗರಾಜು
ಮುಖ್ಯವಾಗಿ ದೂರದ ಓಟದ ಸ್ಪರ್ಧೆಗಳಾದ, 5000 ಮೀ., 10000 ಮೀ., 10 ಕಿ.ಮೀ., 12 ಕಿ.ಮೀ. ಗುಡ್ಡಗಾಡು ಓಟ, ಹಾಫ್ ಮ್ಯಾರಥಾನ್ (21 ಕಿ.ಮೀ.) ರೇಸ್ಗಳಲ್ಲಿ ನಾಗರಾಜು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್ನ 5,000 ಮೀ., 10,000 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ ಅಖಿಲ ಭಾರತ ಚಾಂಪಿಯನ್ಷಿಪ್ನ ಎರಡೂ ಸ್ಪರ್ಧೆಗಳಲ್ಲೂ ಬಂಗಾರ ಲಭಿಸಿದೆ. ಕಳೆದ ವರ್ಷ ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಚಾಂಪಿಯನ್ಷಿಪ್ನ 5000 ಮೀ. ರೇಸ್ನಲ್ಲಿ ಪ್ರಥಮ, ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ (ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್-ಐಎಎಎಫ್) ಮ್ಯಾರಥಾನ್ನ 5 ಕಿ.ಮೀ. ಓಟದಲ್ಲಿ 4ನೇ ಸ್ಥಾನ, ಎಸ್ಎಂಟಿ ಗೋವಾದಲ್ಲಿನ ಅಂರಾತಾಷ್ಟ್ರೀಯ ಮ್ಯಾರಥಾನ್ನ 5 ಕಿ.ಮೀ. ಓಟದಲ್ಲಿ ದ್ವೀತಿಯ, ಸಂಗೂರ್ನಲ್ಲಿ ನಡೆದ (ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ-ಎಎಫ್ಐ) ಅಥ್ಲೆಟಿಕ್ಸ್ ವಲ್ಡ್ ಚಾಂಪಿಯನ್ಷಿಪ್ನ 5000 ಮೀ. ಓಟದಲ್ಲಿ 4ನೇ ಸ್ಥಾನ, ಪಂಜಾಬಿನ ಪಾಟಿಯಾಲದಲ್ಲಿ (ಎಎಫ್ಐ) ನಡೆದ ಸೀನಿಯರ್ ಚಾಂಪಿಯನ್ಷಿಪ್ನಲ್ಲಿ 4ನೇ ಸ್ಥಾನ, ಇತ್ತೀಚಿಗೆ ವಿಯೆಟ್ನಾಮ್ನಲ್ಲಿ ನಡೆದ (ಐಎಎಎಫ್) ಅಂತರಾಷ್ಟ್ರೀಯ ಮ್ಯಾರಥಾನ್ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಡಿಸೆಂಬರ್ನಲ್ಲಿ ತೈವಾನ್ನಲ್ಲಿ ನಡೆಯುವ ಚಾಂಪಿಯನ್ಷಿಪ್ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲಿ ಆಯ್ಕೆಯಾದರೆ ಗ್ರ್ಯಾಂಡ್ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಲಿದೆ. ಆದರೆ ನಾಗರಾಜು ಗ್ರ್ಯಾಂಡ್ ಚಾಂಪಿಯನ್ಷಿಪ್ಗೆ ಆಯ್ಕೆಯಾಗಬೇಕಾದರೆ ನಿಮ್ಮ ಸಹಾಯ ಬೇಕು.
ನೆರವಿಗೆ ಮುಂದಾಗಬೇಕಿದೆ
'ನೇಪಾಳದಿಂದ ಚಿನ್ನ ಗೆದ್ದು ತವರಿಗೆ ಆಗಮಿಸಿದ್ದ ನಾಗರಾಜ್ ಗೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸನ್ಮಾನ ಮಾಡಿದ್ದರು. ಆ ವೇಳೆ ಮಾತನಾಡಿದ್ದ ಶಾಸಕರು ನಾಗರಾಜ್ಗೆ ಮನೆ ನಿರ್ಮಾಣ ಸೇರಿದಂತೆ ಮುಂದಿನ ಕ್ರೀಡೆಗಳಲ್ಲಿ ಭಾಗವಹಿಸಲು ಆರ್ಥಿಕ ಸಹಾಯ ಮಾಡುವುದಾಗಿ ನುಡಿಯಿತ್ತಿದ್ದರು. ಆದರೆ ಶಾಸಕರನ್ನು ಭೇಟಿ ಮಾಡಿದಾಗ ಅವರು ನನ್ನ ಬಗ್ಗೆ ಹೆಮ್ಮೆ ತೋರಿಕೊಳ್ಳೋದು ಬಿಟ್ಟರೆ, ನೆರವು ನೀಡಿಲ್ಲ. ಇನ್ನು ಸಂಸದ ಎ. ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿದ್ದು, ಮನೆ ನಿರ್ಮಾಣ ಮಾಡಿಕೊಡಲಾಗುವುದೆಂದು ಹೇಳಿದ್ದರು. ನೇಪಾಳದಲ್ಲಿ ಪದಕ ಗಳಿಸಿದ್ದ ಸಂದರ್ಭದಲ್ಲಿ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಅವರು ನನ್ನನ್ನು ಸಂಪರ್ಕಿಸಿ ಸಹಾಯ ಮಾಡುವುದಾಗಿ ಹೇಳಿದ್ದರು. ಮಾಧ್ಯಮದವರು, ಚಳ್ಳಕೆರೆ ಕಾಂಗ್ರೆಸ್ ಮುಖಂಡ ಸಿ. ವೀರಭದ್ರಬಾಬು ಅವರೂ ಕೈಲಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಇವರ ನೆರವಿಗಾಗಿ ಕಾಯುತ್ತಿದ್ದೇನೆ,' ಎನ್ನುತ್ತಾರೆ ನಾಗರಾಜು.
ಕನಸಿಗೆ ಜೀವ ತುಂಬಿ
ಪ್ರತಿಭಾನ್ವಿತ ಬಡ ಕ್ರೀಡಾಪಟು ನಾಗರಾಜುವಿನ ಕನಸಿಗೆ ಜೀವ ತುಂಬಬಯಸುವ ಕ್ರೀಡಾಪ್ರೇಮಿಗಳು, ಸಹೃದಯರು ನಾಗರಾಜ ಇ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ಸಂಖ್ಯೆ 500902010023244, ಚಿತ್ರದುರ್ಗ ಬ್ರಾಂಚ್, ಐಎಫ್ಎಸ್ಸಿ ಕೋಡ್ UBINO550094 ಇದಕ್ಕೆ ಧನಸಹಾಯ ಮಾಡಬಹುದು. ಮಾಹಿತಿಗೆ 8762636799 ದೂರವಾಣಿ ಸಂಪರ್ಕಿಸಬಹುದು.