ಮೆಲ್ಬೋರ್ನ್, ಜ.16: ಐಸಿಸಿ ವಿಶ್ವಕಪ್ ಗೆ ಸೆಣಸುವ 15 ಜನರ ಟೀಂ ಇಂಡಿಯಾದಲ್ಲಿ ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿ ಆಯ್ಕೆಯಾಗಿದ್ದು ಏಕೆ? ಎಂಬುದರ ಬಗ್ಗೆ ಟಿವಿ, ಟ್ವಿಟ್ಟರ್, ಫೇಸ್ ಬುಕ್ ಅಲ್ಲದೆ ಚಹಾ ಅಂಗಡಿ ಮುಂದೆ ಕೂಡಾ ಭಾರಿ ಚರ್ಚೆ ನಡೆದಿದ್ದು ಗೊತ್ತಿದೆ. ಆದರೆ, ಆಯ್ಕೆ ಹಿಂದಿನ ಉದ್ದೇಶ ಮಾತ್ರ ಇಲ್ಲಿ ತನಕ ಬಹಿರಂಗವಾಗಿರಲಿಲ್ಲ.
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ನೇತೃತ್ವ ಐವರು ಸದಸ್ಯರು ಹಾಗೂ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಮತ್ತು ಕೋಚ್ ಡಂಕನ್ ಫ್ಲೆಚರ್ ಅವರಿಗೆ ಮಾತ್ರ ಯಾರನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬುದು ಗೊತ್ತಿದೆ. ಇವರ ಪೈಕಿ ಆಯ್ಕೆ ಸಮಿತಿ ಸದಸ್ಯರಾಗಲಿ, ಎಂಎಸ್ ಧೋನಿಯಾಗಲಿ ಬಾಯ್ಬಿಟ್ಟಿಲ್ಲ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]
ಅದರಲ್ಲೂ ಈ ಹಿಂದಿನ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಬದಲಿಗೆ ಸ್ಟುವರ್ಟ್ ಬಿನ್ನಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದ್ದು ಇನ್ನಷ್ಟು ಕಿಚ್ಚು ಹೆಚ್ಚಿಸಿತ್ತು. ಆದರೆ, ಈಗ ಕೋಚ್ ಡಂಕನ್ ಫ್ಲೆಚರ್ ಅವರು ಸ್ಟುವರ್ಟ್ ಬಿನ್ನಿ ಆಯ್ಕೆಯನ್ನು ಸಮರ್ಥಿಸಿ ನಾಲ್ಕು ಮಾತನ್ನಾಡಿದ್ದಾರೆ.
ಆಯ್ಕೆ ಮಾಡಿದ್ದು ಏಕೆ?: ಬಿಸಿಸಿಐ ವೆಬ್ ಸೈಟ್ ಜೊತೆ ಮಾತನಾಡುತ್ತಾ ವಿಶ್ವಕಪ್ ಗಾಗಿ ಟೀಂ ಇಂಡಿಯಾ ಆಯ್ಕೆ ಮಾಡುವಾಗ ಸಮರ್ಥ ಆಲ್ ರೌಂಡರ್ ಗಳ ಬಗ್ಗೆ ಭಾರಿ ಚರ್ಚೆ ನಡೆಸಲಾಯಿತು. [ಕದನಕ್ಕಿಳಿಯುವ 14 ತಂಡಗಳ ವಿವರ]
ಉತ್ತಮ ಬ್ಯಾಟಿಂಗ್ ಮಾಡಬಲ್ಲ ಸೀಮ್ ಬೌಲರ್ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಈಗಾಗಲೇ ಸ್ಪಿನ್ನರ್ ಕಮ್ ಆಲ್ ರೌಂಡರ್ ಅಗಿ ರವೀಂದ್ರ ಜಡೇಜ ಹಾಗೂ ಯುವ ಪ್ರತಿಭೆ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದರು. ಯುವರಾಜ್ ಸಿಂಗ್ ಸಂಭಾವ್ಯ 30 ಜನರ ಪಟ್ಟಿಯಲ್ಲೂ ಇರಲಿಲ್ಲ. ಮಿಕ್ಕಂತೆ ಇದ್ದದ್ದು ಸ್ಟುವರ್ಟ್ ಬಿನ್ನಿ ಮಾತ್ರ. [ಟೀಕಾಕಾರರಿಗೆ ತಕ್ಕ ಉತ್ತರ ನೀಡಲಿದ್ದಾರೆ ಬಿನ್ನಿ: ಅರುಣ್]
ಸ್ಟುವರ್ಟ್ ಬಿನ್ನಿ ಆಯ್ಕೆ ಮೂಲಕ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಸಾಧ್ಯವಿದೆ ಹಾಗೂ ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಶಕ್ತಿ ಮುಖ್ಯವಾಗಿದ್ದು, ಅಗತ್ಯ ಬಿದ್ದಾಗ ಬಿನ್ನಿ ಸೀಮ್ ಬೌಲಿಂಗ್ ಕೂಡಾ ತಂಡಕ್ಕೆ ಸಹಾಯಕವಾಗಲಿದೆ. ಅಲ್ಲದೆ ಬಿನ್ನಿ ಅವರು ಕಳೆದ ಒಂದು ವರ್ಷದಲ್ಲಿ ತೋರಿರುವ ಸಾಧನೆ ಅವರನ್ನು ಆಯ್ಕೆ ಮಾಡದೇ ಇರಲು ಸಾಧ್ಯವಾಗಲಿಲ್ಲ ಎಂದು ಫ್ಲೆಚರ್ ಉತ್ತರಿಸಿದ್ದಾರೆ. 1983ರಲ್ಲಿ ಜಿಂಬಾಬ್ವೆ ಪರ ಆಡಿದ್ದ ಫ್ಲೆಚರ್ ಅವರು ನಂತರ ಇಂಗ್ಲೆಂಡ್ ತಂಡದ ಕೋಚ್ ಆಗಿ 2003 ಹಾಗೂ 2007ರಲ್ಲಿ ಕಾರ್ಯನಿರ್ವಹಿಸಿದ್ದರು.