ಯುವ ಜನಾಂಗ ಹೆಚ್ಚು ತೊಡಗಿಸಿಕೊಳ್ಳಲಿ
ಸನ್ಮಾನ ಮಾಡಿ ಮಾತನಾಡಿದ ಕರ್ನಾಟಕ ಸ್ಟೇಟ್ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಶಾಸಕರಾದ ಎನ್ ಎ ಹ್ಯಾರಿಸ್, 'ದೈಹಿಕ ಶಕ್ತಿಯನ್ನು ಬೇಡುವ ಕ್ರೀಡೆ ಮಿಕ್ಸಡ್ ಮಾರ್ಷಲ್ ಆರ್ಟ್ಸ್, ಇಂತಹ ಕ್ರೀಡೆಯಲ್ಲಿ ನಮ್ಮ ನಗರದ ಹುಡುಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಸನ್ಮಾನ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಬೇಕಾದ ಪ್ರೋತ್ಸಾಹ ನೀಡುವುದಕ್ಕೂ ಸಿದ್ಧರಿದ್ದೇವೆ. ಮೊಹಮ್ಮದ್ ಫರಾದ್ ಸಾಧನೆ ಇನ್ನು ಹಲವರಿಗೆ ಸ್ಪೂರ್ತಿಯಾಗಲಿ ಹಾಗೂ ಹೆಚ್ಚು ಹೆಚ್ಚು ಯುವ ಜನಾಂಗ ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ,' ಎಂದರು.
ಅಕಾಡೆಮಿಯಲ್ಲಿ ಅಳವಡಿಸಿಕೊಳ್ಳಲು ಚಿಂತನೆ
ನಲಪಾಡ್ ಅಕಾಡೆಮಿಯ ನಿರ್ದೇಶಕ ಓಮರ್ ನಲಪಾಡ್ ಹ್ಯಾರಿಸ್ ಮಾತನಾಡಿ, 'ನಮ್ಮ ನಲಪಾಡ್ ಅಕಾಡೆಮಿಯಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಎಂಎಂಎ ನಂತಹ ಕ್ರೀಡೆಗಳನ್ನು ನಾವು ನಮ್ಮ ಅಕಾಡೆಮಿಯಲ್ಲೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದೇವೆ,' ಎಂದು ಹೇಳಿದರು.
ಪಾಕಿಸ್ತಾನಿ ವಿರುದ್ಧ ಭರ್ಜರಿ ಫೈಟ್
ಆಲ್ ಇಂಡಿಯಾ ಎಂಎಂಎ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತಿ ನೀಡಿದ ಅಬ್ದುಲ್ ಮುನೀರ್ ಮಾತನಾಡಿ, 'ಸಾಕಷ್ಟು ಶ್ರಮದಿಂದ ನಮ್ಮ ಬೆಂಗಳೂರಿನ ಹುಡುಗ ಮೊಹಮ್ಮದ್ ಫರಾದ್ ಈ ಗೆಲುವನ್ನು ಸಾಧಿಸಿದ್ದಾನೆ. ಸೋತಿರುವ ಪಾಕಿಸ್ತಾನಿ ಫೈಟರ್ ಹಿಂದಿನ ಹಲವು ಪಂದ್ಯಗಳಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಸೋಲಿಸಿದ್ದರು. ಕ್ರೀಡೆಯಲ್ಲಿ ನಮ್ಮ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಕ್ರೀಡಾಪಟುಗಳು ಎದುರಾದಾಗ ಬಹಳಷ್ಟು ಮಾನಸಿಕವಾದ ಒತ್ತಡ ಇರುತ್ತದೆ. ಈ ಒತ್ತಡವನ್ನು ಮೀರಿ ದೇಶದ ಹೆಸರನ್ನು ಎತ್ತಿಹಿಡಿಯವುದು ಬಹಳ ಹೆಮ್ಮೆಯ ಸಂಗತಿಯಾಗಿದೆ,' ಎಂದರು.
ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಎಂಎಂಎ ಫೆಡರೇಷನ್ ನ ಅಧ್ಯಕ್ಷರಾದ ಆದಿತ್ಯ, ಬೌರಿಂಗ್ ಇನ್ಸಿಟ್ಯೂಟ್ ನ ಅಧ್ಯಕ್ಷರಾದ ರೂಪ್ ಗೋಲ್ಖಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.