ಅದು 2012ರ ಲಂಡನ್ ಒಲಿಂಪಿಕ್ಸ್. ವಿಶ್ವದ ಅತಿದೊಡ್ಡ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಕ್ರೀಡಾ ಜ್ಯೋತಿಯನ್ನು ಹಿಡಿದಿದ್ದು 17ರ ಹರೆಯದ ಪಿಂಕಿ ಕರ್ಮಾಕರ್. ಅಸ್ಸಾಂನ ಪುಟ್ಟ ಹಳ್ಳಿಯಿಂದ ಬಂದಿದ್ದ ಪಿಂಕಿ ಕರ್ಮಾಕರ್ ಕ್ರೀಡಾಕ್ಷೇತ್ರದಲ್ಲಿ ಮೂಡಿಸಿದ್ದ ಭರವಸೆಯ ಕಾರಣಕ್ಕೆ ಈ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಅಂದು ಇಂತಾ ಅದ್ಭುತ ಅವಕಾಶ ದೊರೆತ ಕಾರಣಕ್ಕೆ ಪಿಂಕಿ ಕರ್ಮಾಕರ್ ಹಾಗೂ ಅವರ ಕುಟುಂಬ ಹಿಗ್ಗಿಹೋಗಿದ್ದರು. ಕ್ರೀಡಾಕ್ಷೇತ್ರದಲ್ಲಿ ತಾನು ಕಂಡ ಕನಸು ಇನ್ನು ನನಸಾಗಲಿದೆ. ತನ್ನ ಗುರಿ ತಲುಪಲು ಇದರಿಂದ ಸಾಧ್ಯವಾಗಲಿದೆ ಎಂದು ಕನಸು ಕಂಡಿದ್ದರು ಪಿಂಕಿ ಕರ್ಮಾಕರ್.
ಆದರೆ ಅಂದು ಪಿಂಕಿ ಕಂಡಿದ್ದ ಕನಸು ಕೇವಲ ಕನಸಾಗಿಯೇ ಉಳಿದಿದೆ. ಬಡ ಕುಟುಂಬದಿಂದ ಬಂದ ಪಿಂಕಿ ಕರ್ಮಾಕರ್ಗೆ ತನ್ನ ಕ್ರೀಡಾ ಕ್ಷೇತ್ರದತ್ತ ದೃಷ್ಟಿ ಹಾಯಿಸುವುದಿರಲಿ ನಿತ್ಯ ಜೀವನ ಸಾಗಿಸುವುದೇ ದುಸ್ತರವಾಗಿದೆ. ಹೀಗಾಗಿ ಕನಸುಗಳನ್ನು ಮೂಟೆಕಟ್ಟಿ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಪಿಂಕಿ. ಹೌದು, ಪಿಂಕಿ ಈಗ ಅಸ್ಸಾಂನ ದಿಬ್ರುಗರ್ ಜಿಲ್ಲೆಯ ಬೋರ್ಬೊರೋಹ್ ಎಂಬ ಟೀ ಗಾರ್ಡನ್ನಲ್ಲಿ 167 ರೂಪಾಯಿಗೆ ದಿನಗೂಲಿಯಾಗಿ ದುಡಿಯುತ್ತಿದ್ದಾರೆ.
ಲಂಡನ್ ಒಲಿಂಪಿಕ್ಸ್ನಲ್ಲಿ ಕ್ರೀಡಾ ಜ್ಯೋತಿ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಿ ಅಸ್ಸಾಂಗೆ ಮರಳಿದ ವೇಳೆ ಪಿಂಕಿ ಕರ್ಮಾಕರ್ಗೆ ಅದ್ಧೂರಿ ಸ್ವಾಗತ ದೊರೆತಿತ್ತು. ಕೇಂದ್ರ ಸಚಿವರು ಹಾಗೂ ಮಾಜಿ ಅಸ್ಆಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ದುಬ್ರಾಗರ್ ಸಂಸದರು ವಿಮಾನ ನಿಲ್ದಾಣದಲ್ಲಿ ಪಿಂಕು ಅವರನ್ನು ಸ್ವಾಗತಿಸಿದ್ದರು. ಆದರೆ ಅಷ್ಟಕ್ಕೆ ಎಲ್ಲವೂ ಮುಗಿದು ಹೋಗಿತ್ತು. "ರಾಜಕೀಯ ಪಕ್ಷಗಳು, ಸಚಿವರುಗಳು ಅಂದು ನನಗೆ ಕೆಲಸ ನೀಡುವ ಬಗ್ಗೆ ಹಾಗೂ ಕ್ರೀಡಾಕ್ಷೇತ್ರದಲ್ಲಿ ಮುಂದುವರಿಯಲು ಪೂರಕವಾದ ಸಹಾಯವನ್ನು ಮಾಡುವ ಭರವಸೆ ನೀಡಿದ್ದರು. ಆದರೆ ಅದ್ಯಾವುದು ಕೂಡ ನನಗೆ ದೊರೆಯಲಿಲ್ಲ" ಎಂದು ಪಿಂಕಿ ಕರ್ಮಾಕರ್ ಈಗ ಬೇಸರದಿಂದ ಹೇಳಿಕೊಳ್ಳುತ್ತಾರೆ.
ಆರ್ಚರ್ ಆಗುವ ಕನಸು ಕಂಡಿದ್ದರು ಪಿಂಕಿ: ಪಿಂಕಿ ಕರ್ಮಾಕರ್ಗೆ ಆರ್ಚರ್ನಲ್ಲಿ ಸಾಧನೆಯನ್ನು ಮಾಡಬೇಕು ಎಂಬುದು ಕನಸು. ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂಬ ಹಂಬಲವನ್ನು ಹೊಂದಿದ್ದ ಕ್ರೀಡಾಪಟು ಆಕೆ. ಆದರೆ ಕುಟುಂಬದಲ್ಲಿ ಉಂಟಾದ ಹಣಕಾಸಿನ ಮುಗ್ಗಟ್ಟಿನಿಂದಾಗಿ ಪಿಂಕಿ ಕರ್ಮಾಕರ್ ತನ್ನ ಕನಸನ್ನು ಪಕ್ಕಕ್ಕಿಡಬೇಕಾದ ಪರಿಸ್ಥಿತಿ ಬಂದಿತ್ತು. ತನ್ನ ತಾಯಿಯ ಅಗಲಿಕೆ ಹಾಗೂ ತಂದೆಯ ನಿವೃತ್ತಿಯ ನಂತರ ಕುಟಂಬವನ್ನು ಮುನ್ನಡೆಸಲು ಟೀ ಎಸ್ಟೇಟ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಪದವಿಯನ್ನು ಪಡೆಯುತ್ತಿದ್ದಾರೆ ಪಿಂಕಿ ಕರ್ಮಾಕರ್.
ಯಾವುದೇ ನೆರವು ಪಡೆದಿಲ್ಲ: "10ನೇ ತರಗತೊಯಲ್ಲಿದ್ದಾಗ ಲಂಡನ್ ಒಲಿಂಪಿಕ್ಸ್ನಲ್ಲಿ ಕ್ರೀಡಾಜ್ಯೋತಿ ಹಿಡಿಯುವ ಅವಕಾಶ ದೊರೆತಾಗ ದೊಡ್ಡ ಅವಕಾಶಗಳು ನನಗೆ ದೊರೆಯಲಿದೆ ಎಂದು ಬಾವಿಸಿದ್ದೆ. ಆದರೆ ನಾನೀಗ ಬೋರ್ಬೊರೋಗ್ ಟೀ ಗಾರ್ಡನ್ನಲ್ಲಿ ದಿನಗೂಲಿಗೆ ದುಡಿಯುತ್ತಿದ್ದೇನೆ. ಈಗ ನಾನು ಪದವಿ ವ್ಯಾಸಾಂಗ ಮಾಡುತ್ತಿದ್ದೇನೆ. ನಾನು ಸರ್ಕಾರದಿಂದಾಗಲಿ ಅಥವಾ ಯಾರ ಕಡೆಯಿಂದಲೂ ಏನನ್ನೂ ಪಡೆಯಲಿಲ್ಲ. ಇದು ನನಗೆ ತುಂಬಾ ನೀವು ಹಾಗೂ ಕಳವಳವನ್ನುಂಟು ಮಾಡಿದೆ" ಎಂದು ಪಿಂಕಿ ಕರ್ಮಾಕರ್ ಪ್ರತಿಕ್ರಿಯಿಸಿದ್ದಾರೆ.
ಒಂದೆಡೆ ಒಲಿಂಪಿಕ್ಸ್ನಲ್ಲಿ ಭಾರತ ಈ ಬಾರಿ ಸಾಧಿಸಿದ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಪದಕ ಗೆದ್ದ ಸಾಧಕರ ಸಾಧನೆಯನ್ನು ಕೊಂಡಾಡುತ್ತಿದೆ ಸಂಭ್ರಮಿಸುತ್ತಿದೆ. ಆದರೆ ಇಂತಾದ್ದೇ ಸಾಧನೆ ಮಾಡಲು ಸಾಮರ್ಥ್ಯವಿದ್ದು ಅದಕ್ಕಾಗಿ ಹವಣಿಸುತ್ತಿರುವ ಅದೆಷ್ಟೋ ಕ್ರೀಡಾಪಟುಗಳು ಪ್ರೋತ್ಸಾಹ, ಬೆಂಬಲ, ಆರ್ಥಿಕ ಸಮಸ್ಯೆಗಳ ಕಾರಣದಿಂದಾಗಿ ಕನಸು ನನಸು ಮಾಡಿಕೊಳ್ಳಲು ಅಸಾಧ್ಯವಾಗಿರುವ ಪರಿಸ್ಥಿತಿಯಿದೆ ಎಂಬುದು ಕೂಡ ಸತ್ಯ. ಇದಕ್ಕೆ ಪಿಂಕಿ ಕರ್ಮಾಕರ್ ಕೇವಲ ಒಂದು ಉದಾಹರಣೆಯಷ್ಟೇ!