ನವದೆಹಲಿ, ಜೂನ್ 27: ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದ ಬಗ್ಗೆ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಅಗಲಿದ ಭಾರತ ಕಂಡ ಶ್ರೇಷ್ಠ ಅಥ್ಲೀಟ್ ಮಿಲ್ಖಾ ಸಿಂಗ್ ಅವರನ್ನು ಸ್ಮರಿಸಿದ್ದಾರೆ.
"ನಾವು ಒಲಿಂಪಿಕ್ಸ್ ಬಗ್ಗೆ ಮಾತನಾಡುವಾಗ ಮಿಲ್ಖಾ ಸಿಂಗ್ ಬಗ್ಗೆ ಮಾತನಾಡದಿರಲು ಹೇಗೆ ಸಾಧ್ಯ. ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅವರೊಂದಿಗೆ ಮಾತನಾಡುವ ಅವಕಾಶವನ್ನು ನಾನು ಪಡೆದುಕೊಂಡೆ. ಆ ಸಂದರ್ಭದಲ್ಲಿ ಅವರಲ್ಲಿ ನಾನು ಒಲಿಂಪಿಕ್ಸ್ಗೆ ತೆರಳುವ ಭಾರತೀಯ ಕ್ರೀಡಾಪಟುಗಳಲ್ಲಿ ಸ್ಪೂರ್ತಿ ತುಂಬುವಂತೆ ಮನವಿ ಮಾಡಿದ್ದೆ" ಎಂದಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ.
ಹಾರುವ ಸಿಖ್ ಎಂದೇ ಖ್ಯಾತಿಯನ್ನು ಪಡೆದುಕೊಂಡ ಮಿಲ್ಖಾ ಸಿಂಗ್ ಕಳೆದ ಜೂನ್ 18ರಂದು ಕೊನೆಯುಸಿರೆಳೆದರು. 91 ವರ್ಷದ ಮಿಲ್ಖಾ ಸಿಂಗ್ ಕೊರೊನಾವೈರಸ್ಗೆ ತುತ್ತಾಗಿದ್ದರು. ಕೋವಿಡ್ನಿಂದ ಅವರು ಚೇತರಿಸಿಕೊಂಡಿದ್ದರಾದರೂ ಸಾವು ಜಯಿಸಲಿ ಸಾಧ್ಯವಾಗಿರಲಿಲ್ಲ.
ಇನ್ನು ಪ್ರಧಾನು ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಟೋಕಿಯೋ ಒಲಿಂಪಿಕ್ಸ್ ಬಗ್ಗೆ ಮಾತನಾಡಿದ್ದಾರೆ. ಈ ಅಂತಾರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗುವಂತೆ ಯುವ ಜನರಿಗೆ ಮನವಿಯನ್ನು ಮಾಡಿದ್ದಾರೆ. ಭಾರತದ ಕ್ರೀಡಾಪಟುಗಳನ್ನು ಎಲ್ಲಾ ಭಾರತೀಯರೂ ಪ್ರೋತ್ಸಾಹಿರಬೇಕು ಎಂದು ಕೇಳಿಕೊಂಡಿದ್ದಾರೆ.
"ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗುವ ಎಲ್ಲಾ ಕ್ರೀಡಾಪಟುಗಳು ಕೂಡ ಸಾಕಷ್ಟು ಕಠಿಣ ಪರಿಶ್ರಮವನ್ನು ಪಟ್ಟಿದ್ದಾರೆ. ಅವರು ಅಲ್ಲಿ ಹೃದಯವನ್ನು ಗೆಲ್ಲಲು ತೆರಳುತ್ತಿದ್ದಾರೆ. ನಮ್ಮ ತಂಡವನ್ನು ಬೆಂಬಲಿಸುವುದು ನಮ್ಮ ಪ್ರಯತ್ನವಾಗಿರಬೇಕು ಅವರ ಮೇಲೆ ಒತ್ತಡವನ್ನು ಹೇರಬಾರದು" ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಭಾಷಣದಲ್ಲಿ ಹೇಳಿದ್ದಾರೆ.