ಕಳೆದ ಭಾನುವಾರ ( ಮೇ 15 ) ಕಂಠೀರವ ಸ್ಟೇಡಿಯಮ್ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ( ಟಿಸಿಎಸ್ ) ವಿಶ್ವ 10ಕೆ ಮ್ಯಾರಥಾನ್ ನಡೆದಿದ್ದು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿಸಿದ್ದರು. ಇನ್ನು ಈ ವಿಶ್ವ ಮ್ಯಾರಥಾನ್ನಲ್ಲಿ ಬೆಂಗಳೂರಿನ ನಿವೃತ್ತ ಬ್ಯಾಂಕ್ ಬ್ಯಾಂಕ್ ಉದ್ಯೋಗಿ ಎನ್ ಎಸ್ ದತ್ತಾತ್ರೇಯ ಭಾಗವಹಿಸಿದ್ದು ವಿಶೇಷವಾಗಿತ್ತು. 94 ವರ್ಷದ ಎನ್ ಎಸ್ ದತ್ತಾತ್ರೇಯ ಅವರು ಈ ವಯಸ್ಸಿನಲ್ಲಿಯೂ ಮ್ಯಾರಥಾನ್ ಮತ್ತು ವಾಕಥಾನ್ಗಳಲ್ಲಿ ಭಾಗವಹಿಸಿ ಯುವಕರೇ ನಾಚುವಂತೆ ಫಿಟ್ ಆಗಿದ್ದಾರೆ.
ಎನ್ ಎಸ್ ದತ್ತಾತ್ತೇಯ ಅವರು ಈ ಹಿಂದೆ 2020ರಲ್ಲಿ ನಡೆದಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ( ಟಿಸಿಎಸ್ ) ವಿಶ್ವ 10ಕೆ ಮ್ಯಾರಥಾನ್ನಲ್ಲಿಯೂ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿವೃತ್ತಿ ಹೊಂದಿದ ನಂತರ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವುದಕ್ಕಾಗಿ ವಾಕಿಂಗ್ ಮತ್ತು ಓಟದ ಹವ್ಯಾಸವನ್ನು ಆರಂಭಿಸಿದ್ದ ಇವರು ಮ್ಯಾರಥಾನ್ ಮತ್ತು ವಾಕಥಾನ್ಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡದ್ದು 2019ರಲ್ಲಿ. ಹೌದು, ಸ್ನೇಹಿತರಿಂದ ಮೆಚ್ಚುಗೆಯನ್ನು ಪಡೆದುಕೊಂಡ ದತ್ತಾತ್ರೇಯ ಅವರು ಮ್ಯಾರಥಾನ್ಗಳಲ್ಲಿ ಭಾಗವಹಿಸಲು ನಿರ್ಧರಿಸಿದ್ದರು.
ಐಪಿಎಲ್ 2022: ಪ್ಲೇ ಆಫ್ ಟಿಕೆಟ್ ಅನ್ನು ಆನ್ಲೈನ್ನಲ್ಲಿ ಬುಕ್ ಮಾಡುವುದು ಹೇಗೆ?
ಹೀಗೆ ಆಸಕ್ತಿಯನ್ನು ಕಾರ್ಯರೂಪಕ್ಕೆ ತಂದ ದತ್ತಾತ್ರೇಯ ಅವರು 2019ರಲ್ಲಿ 5 ಕಿಲೋಮೀಟರ್ ಮ್ಯಾರಥಾನ್ನಲ್ಲಿ ಭಾಗವಹಿಸಿ ಸಹ ಓಟಗಾರರಿಂದ ದೊಡ್ಡ ಮಟ್ಟದ ಪ್ರಶಂಸೆಯನ್ನು ಗಿಟ್ಟಿಸಿಕೊಂಡರು. ಈ ಪ್ರಶಂಸೆ ಮತ್ತು ಮೆಚ್ಚುಗೆ ಎನ್ ಎಸ್ ದತ್ತಾತ್ರೇಯ ಅವರನ್ನು ಆ ವಯಸ್ಸಿನಲ್ಲಿಯೂ ಮತ್ತಷ್ಟು ಮ್ಯಾರಥಾನ್ ಮತ್ತು ವಾಕಥಾನ್ಗಳಲ್ಲಿ ಭಾಗವಹಿಸುವಂತೆ ಮಾಡಿತು.
2019ರಲ್ಲಿ ಮ್ಯಾರಥಾನ್ ಮತ್ತು ವಾಕಥಾನ್ಗಳಲ್ಲಿ ಭಾಗಹಿಸಲು ಆರಂಭಿಸಿದ ಇವರು ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 90 ಈವೆಂಟ್ಗಳಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ 48 ಫಿಸಿಕಲ್ ಭಾಗವಹಿಸುವಿಕೆಯಾದರೆ, ಉಳಿದ 42 ಭಾಗವಹಿಸುವಿಕೆಗಳು ವರ್ಚುವಲ್ ಆಗಿವೆ. ಇನ್ನು 21ನೇ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಇವರು 5 ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದರು.
ಇವರು ಈ ವಯಸ್ಸಿನಲ್ಲಿಯೂ ಮ್ಯಾರಥಾನ್ಗಳಲ್ಲಿ ಭಾಗವಹಿಸುವುದನ್ನು ಕಂಡು ಸ್ಪೂರ್ತಿಯಾಗಿ ತೆಗೆದುಕೊಂಡವರ ಹಲವಾರು ಉದಾಹರಣೆಗಳಿದ್ದು, ಈ ಪೈಕಿ ಈ ಹಿಂದೆ ಬೆಂಗಳೂರಿನಲ್ಲಿ ಒಂದು ವರ್ಷದ ಕಾಲ ತರಬೇತಿಗೆಂದು ಬಂದಿದ್ದ ಗುಜರಾತ್ನ ವಡೋದರ ಮೂಲದ ರಿಯಲ್ ಎಸ್ಟೇಟ್ ಕುಲ್ದೀಪ್ ಸಿಂಗ್ ಯಾದವ್ ಕೂಡ ಒಬ್ಬರು. ದತ್ತಾತ್ರೇಯ ಅವರ ಕುರಿತು ಮಾತನಾಡಿದ್ದ ಇವರು "ನಿಜ ಹೇಳಬೇಕೆಂದರೆ, ದತ್ತಾತ್ರೇಯ ಅಂಕಲ್ ನನ್ನ ಜೀವನವನ್ನು ಬದಲಾಯಿಸಿದ್ದಾರೆ. 2019 ರಲ್ಲಿ, ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದೆ, ಮತ್ತು ಈ 91 ವರ್ಷ ವಯಸ್ಸಿನವರು ಮ್ಯಾರಥಾನ್ ಅನ್ನು ಹೇಗೆ ಓಡಬಹುದು ಎಂದು ನಾನು ದಿಗ್ಭ್ರಮೆಗೊಂಡೆ. ಅಷ್ಟೇ ಅಲ್ಲ, ನಾನು 5 ಕಿ.ಮೀ ಓಟದಲ್ಲಿ ಭಾಗವಹಿಸಿದ್ದೆ, ಅವರು 10 ಕಿ.ಮೀ ಓಟ ನಡೆಸಿದ್ದರು. ಆ ಕ್ಷಣದಿಂದ, ನನಗೆ ಅನಿಸಿತು, ಈ 91 ವರ್ಷ ವಯಸ್ಸಿನವರು ದೂರವನ್ನು ಕ್ರಮಿಸಬಲ್ಲರು, ನನಗೆ ಏಕೆ ಸಾಧ್ಯವಿಲ್ಲ? ಆದ್ದರಿಂದ, ಅಂದಿನಿಂದ ನಾನು ನನ್ನ ಸುತ್ತಲೂ ನಡೆಯುವ ಪ್ರತಿಯೊಂದು ಓಟ ಅಥವಾ ಸೈಕ್ಲಿಂಗ್ ಈವೆಂಟ್ಗಳಲ್ಲಿ ಭಾಗವಹಿಸುತ್ತಿದ್ದೇನೆ" ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
IPL 2022: ಟೂರ್ನಿಯಿಂದ ಕೇನ್ ವಿಲಿಯಮ್ಸನ್ ಔಟ್; ಈ ಮೂವರಲ್ಲಿ ಯಾರಾಗ್ತಾರೆ ಸನ್ರೈಸರ್ಸ್ ನಾಯಕ?
ಇನ್ನು ತಮ್ಮ ಈ ಮ್ಯಾರಥಾನ್ ಮತ್ತು ವಾಕಥಾನ್ ಕುರಿತು ಸ್ವತಃ ಮಾತನಾಡಿರುವ ಎನ್ಎಸ್ ದತ್ತಾತ್ರೇಯ ಅವರು ಇನ್ನಷ್ಟು ಮ್ಯಾರಥಾನ್ಗಳಲ್ಲಿ ಹಾಗೂ ಸೈಕ್ಲಿಂಗ್ ಇವೆಂಟ್ಗಳಲ್ಲಿ ಭಾಗವಹಿಸಬೇಕೆಂಬ ಅಸೆ ನನ್ನಲ್ಲಿದೆ, ಇನ್ನೂ ಹಲವಾರು ಯುವ ಜನತೆಗೆ ಸ್ಪೂರ್ತಿಯಾಗಬೇಕೆಂಬ ಬಯಕೆಯಿದೆ ಎಂದಿದ್ದಾರೆ. ಇನ್ನೂ ಮುಂದುವರಿದ ಮಾತನಾಡಿರುವ ಅವರು ತನಗೆ ಆರೋಗ್ಯವೇ ಭಾಗ್ಯ, ಹೀಗಾಗಿಯೇ ತಾನು ಓಡುತ್ತೇನೆ, ಅದರಂತೆ ಯುವ ಜನತೆಯೂ ಸಹ ಇದನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.