ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ರಂಜಣಗಿ ಗ್ರಾಮದ ವಿಕಲಚೇತನ ಶೂಟರ್ ಶ್ರೀಹರ್ಷ ರಾಮಕೃಷ್ಣ ದೇವರಡ್ಡಿ ಅವರು ಪ್ರಾನ್ಸ್ನಲ್ಲಿ ನಡೆಯುತ್ತಿರಯವ ಪ್ಯಾರಾ ಶೂಟಿಂಗ್ ವಿಶ್ವಕಪ್ 10 ಮೀ. ಏರ್ ರೈಫಲ್ ಸ್ಟಾಡಿಂಗ್ ಎಸ್ಎಚ್ 2ನಲ್ಲಿ 253.1 ಅಂಕದೊಂದಿಗೆ ಶ್ರೀಹರ್ಷ ದೇವರಡ್ಡಿ ಚಿನ್ನದ ಪದಕ ಗೆದ್ದಿದ್ದಾರೆ.
ಈ ಗೆಲುವಿನ ಮೂಲಕ 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯುವ ಪ್ಯಾರಾ ಒಲಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಎರಡನೆಯ ಪ್ಯಾರಾ ಶೂಟರ್ ಆಗಿ ಹೊರಹೊಮ್ಮಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರಂಜಣಗಿ ಗ್ರಾಮದ ನಿವೃತ್ತ ನವೋದಯ ವಿದ್ಯಾಲಯ ಪ್ರಾಚಾರ್ಯ ರಾಮಕೃಷ್ಣ ದೇವರಡ್ಡಿ ಹಾಗೂ ಡಿಇಡಿ ಕಾಲೇಜ್ ನಿವೃತ್ತ ಪ್ರಾಚಾರ್ಯ ಲಲಿತಾ ದೇವರಡ್ಡಿಯವರ ಪುತ್ರರಾಗಿ ಆಗಸ್ಟ್ 28, 1980ರಲ್ಲಿ ಜನಿಸಿದ ಶ್ರೀಹರ್ಷ, ಹುಟ್ಟಿದಾಗ ಎಲ್ಲರಂತೆ ಚನ್ನಾಗಿಯೇ ಇದ್ದರು.
ನಮ್ಮೂರ ಪ್ರತಿಭೆ: ನೇಪಾಳದಲ್ಲಿ ಚಿನ್ನದ ಪದಕ ಗೆದ್ದ ದಾವಣಗೆರೆಯ ಯುವತಿಯರು; ಸರ್ಕಾರದಿಂದ ನಿರ್ಲಕ್ಷ್ಯ!
ಧಾರವಾಡದಲ್ಲಿ ಬಿಬಿಎ ಅಭ್ಯಾಸ ಮಾಡಿ, ಜೆಎಸ್ಎಸ್ ಕಾಲೇಜಿನಲ್ಲಿ ಪಡೆದ ಮಾರ್ಕೆಟಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. ವಿವಿಧ ಇಲಾಖೆ ಹಾಗೂ ಕಂಪನಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೇ ಹಲವಾರು ಬಾರಿ ಬ್ಯಾಡ್ಮಿಂಟನ್ನಲ್ಲಿ ಪ್ರೌಢ ಶಾಲೆಯಿಂದ ಪದವಿವರೆಗೆ ರಾಜ್ಯ ಮಟ್ಟದಲ್ಲಿ ಗೆಲುವು ಸಾಧಿಸಿದ್ದರು.
2013ರಲ್ಲಿ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಬರುವಾಗ ಆದ ರಸ್ತೆ ಅಪಘಾತದಿಂದ ಪೂರ್ಣ ಪ್ರಮಾಣದಲ್ಲಿ ಪ್ರಜ್ಞೆ ತಪ್ಪಿ ಎಲ್ಲ ಅಂಗಗಳಲ್ಲಿ ಶಕ್ತಿ ಇಲ್ಲದಂತಾಯಿತು. ಆಗಲೇ ಮದುವೆಯಾಗಿದ್ದ ಪತ್ನಿ ಶೋಭಾ ಧೃತಿಗೆಡದೆ ನಿರಂತರ ಪ್ರಯತ್ನದ ಚಿಕಿತ್ಸೆಯಿಂದ 11 ತಿಂಗಳ ನಂತರ ಶ್ರೀಹರ್ಷ ಮತ್ತೆ ಮಾತನಾಡಲು ಪ್ರಾರಂಭಿಸಿದರು.
ತದನಂತರ ಹಿಡಿದ ಹಠವೋ, ಸಾಧಿಸುವ ಚಲವೋ ಗೊತ್ತಿಲ್ಲ. ಸೊಂಟದ ಕೆಳಗೆ ಪೂರ್ಣ ಪ್ರಮಾಣದಲ್ಲಿ ಶಕ್ತಿ ಹೋದರೂ ಛಲ ಬಿಡದೆ, 2017ರಲ್ಲಿ ಶೂಟಿಂಗ್ ತರಬೇತಿಗೆ ಸೇರಿದರು. ಮಗುವಿನಂತೆ ಸಹಾಯಕರು, ತರಬೇತಿದಾರರಾಗಿ ಪತ್ನಿ ನಿರಂತರವಾಗಿ ಧೈರ್ಯ ತುಂಬುತ್ತಲೇ ಬಂದಳು. ಇದರಿಂದಾಗಿ 2018ರಲ್ಲಿ ಕೇರಳದ ತಿರುವನಂತಪುರಂನಲ್ಲಿ ನಡೆದ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ, 2019ರಲ್ಲಿ ಚಿನ್ನದ ಪದಕ ಗೆದ್ದು ನಂತರ ಮತ್ತೆ ಹಿಂದಿರುಗಿ ನೋಡುವ ಪ್ರಶ್ನೆಯೇ ಉದ್ಬವಿಸಲಿಲ್ಲ.
2019ರ ಶಾರ್ಜಾದಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ, 2020ರಲ್ಲಿ ಶಾರ್ಜಾದಲ್ಲಿ ಬೆಳ್ಳಿ, 2021ರಲ್ಲಿ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು, ಪೆರು ದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಹೀಗೆ ಸಾಲು ಸಾಲು ಪದಕ ಪಡೆಯುತ್ತಲೇ ಮುನ್ನುಗ್ಗಿದ ಶ್ರೀಹರ್ಷ, ಈಗ ಪ್ರಾನ್ಸ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ 12 ರಾಷ್ಟ್ರಗಳ ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದರು.
ಅಲ್ಲದೇ ಇದೇ ವೇಳೆ 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯುವ ಪ್ಯಾರಾ ಒಲಂಪಿಕ್ಸ್ಗೆ ಅರ್ಹತೆ ಪಡೆದ ಎರಡನೆಯ 2 ಪ್ಯಾರಾ ಶೂಟರ್ ಆಗಿ ಹೊರಹೊಮ್ಮಿದ್ದಾರೆ. ಈಗಾಗಲೇ ಜರ್ಮನ್, ದಕ್ಷಿಣ ಕೊರಿಯಾ, ದುಬೈನಲ್ಲಿ 2022ರಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಯ್ಕೆಯಾಗಿದ್ದಾರೆ. ಇದೆಲ್ಲವೂ ರನ್ನ ನಾಡಿನ ಚಿನ್ನದ ಹುಡಗನ ಸಾಧನೆಯಾಗಿದೆ.
"ನಾನು ಈ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅಜ್ಜ ತಿಮ್ಮಣ್ಣರ ಹಾರೈಕೆ, ಹೆತ್ತವರ ಸಹಕಾರ ಹಾಗೂ ಪತ್ನಿ ನಿರಂತರವಾಗಿ ಕೊಟ್ಟ ಅತ್ಮಬಲದಿಂದಾಗಿದೆ. ಈ ಸಾಧನೆ ಪತ್ನಿಗೆ ಸಲ್ಲಬೇಕು ಜೊತೆಗೆ ನನಗೆ 2020ರಲ್ಲಿ ಶಾರ್ಜಾದಲ್ಲಿ ನಡೆದ ಅಂತರರಾಷ್ಟ್ರೀಯ ಶೂಟಿಂಗ್ ಸ್ಪರ್ಧೆ ಹೋಗಲು ವಿಜಯವಾಣಿಯ ಡಾ.ವಿಜಯ ಸಂಕೇಶ್ವರ ಸಹಾಯ ಮಾಡಿದ್ದನ್ನು ಮರೆಯಲಾರೆ," ಎನ್ನುವ ಶ್ರೀಹರ್ಷ ರಾಮಕೃಷ್ಣ ದೇವರಡ್ಡಿಯ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕವಾಗಲಿದೆ.