ಹದಿಹರೆಯದ 19ನೇ ವಯಸ್ಸಿನಲ್ಲಿ ಪೂಜಾ ತನ್ನ ಸ್ನೇಹಿತರಂತೆ ಪದವಿ ಶಿಕ್ಷಣ ಪಡೆಯುವಲ್ಲಿ ಉತ್ಸಾಹ ತೋರಲಿಲ್ಲ. ಪೂಜಾ ತನ್ನ ಹೆತ್ತವರು ಮತ್ತು ಆಕೆಯ ಇಬ್ಬರು ಒಡಹುಟ್ಟಿದವರನ್ನು ಆರ್ಥಿಕವಾಗಿ ಬೆಂಬಲಿಸಬೇಕಾಗಿತ್ತು.
ಕೆಳಮಧ್ಯಮ-ವರ್ಗದ ಕುಟುಂಬದಲ್ಲಿ ಜನಿಸಿದ ಪೂಜಾಳ ತಂದೆ ಆಟೋ-ರಿಕ್ಷಾ ಚಾಲಕರಾಗಿದ್ದರು. ತಾಯಿ ಗುತ್ತಿಗೆ ಟೈಲರ್ ಆಗಿದ್ದು, ಆಕೆಯ ಹಿರಿಯ ಸಹೋದರಿಗೆ ಮದುವೆ ಆಗಿತ್ತು. ಮನೆಯಲ್ಲಿದ್ದ ತಂಗಿ ಇನ್ನೂ ಓದುತ್ತಿದ್ದ ಕಾರಣ, ಪೋಷಕರಿಗೆ ಸಹಾಯ ಮಾಡಬೇಕೆಂದು ಪೂಜಾ ಬಯಸಿದಳು.
ಪೂಜಾ ದ್ವಿತೀಯ ಪಿಯುಸಿಯವರೆಗೆ ಅಥ್ಲೀಟ್ ಆಗಿದ್ದರು. ಆಕೆ ಜಿಲ್ಲಾ ಮಟ್ಟ, ರಾಜ್ಯಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾ ತಂಡಗಳಲ್ಲಿ ಸದಸ್ಯೆಯಾಗಿದ್ದ ಸಂದರ್ಭದಲ್ಲಿ ಥ್ರೋ ಬಾಲ್, ಬಾಸ್ಕೆಟ್ಬಾಲ್, ಹಗ್ಗ-ಜಗ್ಗಾಟ, ಬಾಲ್ ಶೂಟಿಂಗ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಅವರು ತಮ್ಮ ಶಾಲಾ ದಿನಗಳಲ್ಲಿ ಎನ್ಸಿಸಿಯ ಭಾಗವಾಗಿದ್ದರು ಹಾಗೂ ಭಾರತೀಯ ಸೇನೆಗೆ ಸೇರುವುದು ಅವಳ ಗುರಿಯಾಗಿತ್ತು.
ಕೆಲವು ಕನಸುಗಳು ನನಸಾಗುವುದಿಲ್ಲ, ಕನಸುಗಳಾಗಿಯೇ ಉಳಿಯುತ್ತವೆ. ವಿವಿಧ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸ ಗಿಟ್ಟಿಸಿಕೊಳ್ಳಲು ಹಾಗೂ ಖಾಸಗಿ ತರಬೇತಿ ತರಗತಿಗಳನ್ನು ನಡೆಸಲು ಪೂಜಾ ಅವರ ಕ್ರೀಡಾ ಅರ್ಹತೆ ಸಾಕಷ್ಟಿತ್ತು. ಆದರೆ ಆಕೆಯ ಪಯಣ ನಿರೀಕ್ಷಿಸಿದಷ್ಟು ಸುಗಮವಾಗಿರಲಿಲ್ಲ.
ದೈಹಿಕ ಶಿಕ್ಷಕಿಯಾಗಿ 2 ವರ್ಷದ ಅನುಭವದ ನಂತರ, ಪೂಜಾ ಬನ್ನೇರುಘಟ್ಟದ ಆರ್ಕಿಡ್ಸ್- ದಿ ಇಂಟರ್ನ್ಯಾಷನಲ್ ಶಾಲೆಗೆ ಸೇರಿದರು. ಆದರೆ ಕೋವಿಡ್ ಮಹಾಮಾರಿ ರಾಜ್ಯವನ್ನು ತತ್ತರಿಸಿದಾಗ ಗಲಿಬಿಲಿಯ ವಾತಾವರಣ ಸೃಷ್ಟಿಯಾಯಿತು. ಎಲ್ಲಾ ತರಗತಿಗಳು ಆನ್ಲೈನ್ಗೆ ಬದಲಾಯಿತು. ಈ ವೇಳೆ ಪೂಜಾ ಕೂಡ ಆನ್ಲೈನ್ನಲ್ಲಿ ಪಾಠಗಳನ್ನು ತೆಗೆದುಕೊಳ್ಳಬೇಕಾಯಿತು.
ಚಿಕ್ಕ ಮನೆಯಲ್ಲಿ ವಾಸವಾಗಿದ್ದ ಪೂಜಾಳಿಗೆ ಸೌಲಭ್ಯಗಳ ಕೊರತೆಯಿಂದಾಗಿ ವಿಡಿಯೋ ಆನ್ ಮಾಡಿಕೊಂಡು ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಲಾಕ್ಡೌನ್ನಿಂದಾಗಿ ಅವಳ ಹೆತ್ತವರಿಬ್ಬರು ನಿರುದ್ಯೋಗಿಗಳಾಗಿದ್ದರು. ಹಾಗಾಗಿ ಮನೆಯ ಏಕೈಕ ದುಡಿಯುವ ಕೈಗಳು ಪೂಜಾಳದ್ದಾಗಿತ್ತು.
ನಮ್ಮೂರ ಪ್ರತಿಭೆ: ಪ್ರೋ ಕಬಡ್ಡಿ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ರೈ
ಆನ್ಲೈನ್ ತರಗತಿಗಳು ಮಾತ್ರ ಆಕೆಯ ಸಮಸ್ಯೆಯಾಗಿರಲಿಲ್ಲ, ಕೋವಿಡ್ ಪ್ರಾರಂಭವಾದ ಕೆಲ ವಾರಗಳ ನಂತರ ಟೈಫಾಯಿಡ್ಗೆ ತುತ್ತಾದ ಪೂಜಾ, ಎದ್ದು ನಡೆಯಲಾರದಷ್ಟು ಅಸ್ವಸ್ಥರಾಗಿದ್ದರು. ಐಸಿಯುನಲ್ಲಿ ಬಹಳ ಸಮಯ ಕಳೆದಿದ್ದ ಪೂಜಾಗೆ ಟೈಫಾಯಿಡ್ ತುತ್ತಾಗಿ ಮೂರು ತಿಂಗಳು ಕಳೆದರೂ ಏಕಾಂಗಿಯಾಗಿ ನಡೆದಾಡಲು ಆಗುತ್ತಿರಲಿಲ್ಲ.
ಹೀಗಾಗಿ ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ ಅನಾರೋಗ್ಯದ ನಂತರ ತೀರಾ ಸುಸ್ತಿನಿಂದ ಬಳಲುತ್ತಿದ್ದ ಪೂಜಾಗೆ, ಸೈನ್ಯದಲ್ಲಿ ಕನಸಿನ ಕೆಸಲಕ್ಕೆ ಅರ್ಜಿ ಸಲ್ಲಿಸಲು ಕೂಡ ಸಾಧ್ಯವಾಗಲಿಲ್ಲ.
ಆದರೆ, ಪೂಜಾ ಸವಾಲುಗಳಿಂದ ಹಿಂದೆ ಸರಿಯಲಿಲ್ಲ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ತನ್ನ ವೃತ್ತಿಯನ್ನು ಮರಳಿ ಪ್ರಾರಂಭಿಸಲು ಸಿದ್ಧತೆ ನಡೆಸಿದಳು. ಆರ್ಕಿಡ್ನ ಇನ್ನೊಂದು ಶಾಖೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇರಿಕೊಂಡರು. ಕೆಲಸಕ್ಕೆ ಸೇರಿದ ನಂತರ, ಪೂಜಾ ದೈಹಿಕ ಶಿಕ್ಷಣದಲ್ಲಿ ಪದವಿ ಪಡೆಯಲು ಬಯಸಿ, ತರಗತಿಗಳಿಗೆ ಸೇರಿಕೊಂಡಳು.
ಆಕೆಯ ಅನಾರೋಗ್ಯದ ಜೊತೆಗೆ ಕೋವಿಡ್ನಿಂದಾಗಿ ಪೂಜಾಳ ಕುಟುಂಬ ಆರ್ಥಿಕವಾಗಿ ನಲುಗಿತ್ತು. ಅದಾಗಿಯೂ ಪರಿಚಿತರ ಸಹಾಯದಿಂದ ಶುಲ್ಕಕ್ಕಾಗಿ ಅರ್ಧದಷ್ಟು ಹಣವನ್ನು ಸಂಗ್ರಹಿಸಿದರು. ಉಳಿದ ಶುಲ್ಕವನ್ನು ಹೇಗೆ ಹೊಂದಿಸುವುದು ಎನ್ನುವ ಬಗ್ಗೆ ಚಿಂತೆಯಲ್ಲಿದ್ದಾಗ ಬನ್ನೇರುಘಟ್ಟ ಶಾಖೆಯ ಸಹೋದ್ಯೋಗಿಗಳು ಸಹಾಯಕ್ಕೆ ಬಂದರು.
ನಮ್ಮೂರ ಪ್ರತಿಭೆ: ಕುಸ್ತಿಯಲ್ಲಿ 'ಕರ್ನಾಟಕದ ಕಿಶೋರಿ'ಯಾದ ಹಳಿಯಾಳದ ಸುಜಾತಾ ಪಾಟೀಲ್
ಸಹೋದ್ಯೋಗಿಗಳು ಮತ್ತು ಶಾಖೆಯ ಪ್ರಾಂಶುಪಾಲರು ಉಳಿದ ಮೊತ್ತವನ್ನು ವ್ಯವಸ್ಥೆ ಮಾಡಲು ನಿರ್ಧರಿಸಿದರು. ಇದೀಗ ದೈಹಿಕ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಪೂರೈಸುತ್ತಿರುವ ಪೂಜಾ ಏಕಕಾಲದಲ್ಲಿ ದೈಹಿಕ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಪದವಿಯ ನಂತರ ಸ್ನಾತಕೋತ್ತರ ಪದವಿ ಪಡೆಯಬೇಕೆಂಬುದು ಪೂಜಾಳ ಆಸೆಯಾಗಿದೆ. ಮುಂದೊಂದು ದಿನ ಮಕ್ಕಳಿಗಾಗಿ ಕಲಾ ತರಗತಿಗಳನ್ನು ತೆರೆದು, ಕಲೆಯನ್ನು ಕಲಿಸುವುದು ಪೂಜಾಳ ಅಂತಿಮ ಗುರಿಯಾಗಿದೆ.
ಮನಸ್ಸಿದ್ದರೆ ಮಾರ್ಗ ಎನ್ನುವ ಮಾತಿನಂತೆ, ಮನಸ್ಸಿಟ್ಟು ಏನನ್ನಾದರೂ ಮಾಡಿದರೆ ಖಂಡಿತವಾಗಿಯೂ ಅದರಲ್ಲಿ ಯಶಸ್ವಿಯಾಗಬಹುದು ಎನ್ನುವುದಕ್ಕೆ ಪೂಜಾಳ ಕತೆಯೇ ನಿದರ್ಶನ. ನಮ್ಮ ಸುತ್ತಲಿರುವ ಜನರ ಸ್ವಲ್ಪಮಟ್ಟಿನ ಬೆಂಬಲವಿದ್ದರೆ, ಏನನ್ನಾದರೂ ಸಾಧಿಸಬಹುದಲ್ಲವೇ.