ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಅಶ್ವಿನಿ ಭಟ್
ಜುಲೈ 2ರಂದು ಕಂಠೀರವ ಸ್ಟೇಡಿಯಂನಲ್ಲಿ ಏಷ್ಯಾ ಅಲ್ಟ್ರಾ ಮ್ಯಾರಾಥನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪರವಾಗಿ ಕಣಕ್ಕಿಳಿದಿದ್ದಾರೆ. ಈ ಮೊದಲು ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೈ ತುಂಬಾ ಸಂಬಳಕ್ಕೆ ಉದ್ಯೋಗಲ್ಲಿದ್ದ ಅಶ್ವಿನಿ, ಆದರೀಗ ಕ್ರೀಡೆಯನ್ನೇ ವೃತ್ತಿಯಾಗಿ ತೆಗೆದುಕೊಂಡಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದವರಾಗಿರುವ ಅಶ್ವಿನಿ ಭಟ್, 9 ವರ್ಷಗಳ ಟೆಕ್ಕಿ ವೃತ್ತಿಗೆ ಗುಡ್ ಬೈ ಹೇಳಿ ಹವ್ಯಾಸವಾಗಿ ಆರಂಭಿಸಿದ ಓಟ, ದೇಶಕ್ಕಾಗಿ ಓಡುವಂತೆ ಮಾಡಿದೆ. 2016ರಲ್ಲಿ ಸಾಫ್ಟ್ವೇರ್ ಬದುಕಿಗೆ ಗುಡ್ ಬೈ ಹೇಳಿ ಅಲ್ಟ್ರಾ ಮ್ಯಾರಾಥನ್ ಎಂಬ ಅಥ್ಲೀಟ್ ಮಾದರಿಗೆ ಪಾದಾರ್ಪಣೆ ಮಾಡಿದ್ದರು. ಸಾಮಾನ್ಯವಾಗಿ ಯಾರೂ ಆಯ್ದುಕೊಳ್ಳದ ಅಥ್ಲೀಟ್ ಮಾದರಿ ಇದಾಗಿದ್ದು, ಇದರಲ್ಲಿ ದೇಶವನ್ನು ಪ್ರತಿನಿಧಿಸುವ ಸಾಧ್ಯತೆ ಕಂಡುಕೊಳ್ಳುತ್ತಾರೆ.
ಅಶ್ವನಿ ಕನಸಿಗೆ ಬೆನ್ನೆಲುಬಾಗಿ ನಿಂತ ಪತಿ
2020ರಲ್ಲಿ ನಡೆದ ದೇಶೀಯ ಮಟ್ಟದ ಅಲ್ಟ್ರಾ ಮ್ಯಾರಥಾನ್ನಲ್ಲಿ 112 ಕಿಮೀ ಕ್ರಮಿಸಿದ ಅಶ್ವಿನಿ ಭಟ್ ದಾಖಲೆ ಬರೆದಿದ್ದರು. ಅದಾಗಿ ಮುಂದಿನ ವರ್ಷವೇ 2021ರಲ್ಲಿ ಈ ಈವೆಂಟ್ಗೆ ನಡೆದ ಅರ್ಹತಾ ಓಟದಲ್ಲಿ 175 ಕಿಮೀ ಕ್ರಮಿಸಿ ದೇಶದ ತ್ರಿವರ್ಣ ಧ್ವಜವನ್ನು ಎದೆಯ ಮೇಲೆ ಧರಿಸುವ ಅರ್ಹತೆ ಪಡೆದುಕೊಳ್ಳುತ್ತಾರೆ.
ತನ್ನ ಈ ಅಸಾಮಾನ್ಯ ಸಾಧನೆಗೆ ಮನಸ್ಥೈರ್ಯವೇ ಕಾರಣ ಎಂದು ಮುಖದಲ್ಲಿ ನಗು ಬೀರುತ್ತಾ ಅಲ್ಟ್ರಾ ಅಥ್ಲಿಟ್ ಅಶ್ವಿನಿ ಹೇಳುತ್ತಾರೆ. ಕೌಟುಂಬಿಕ ಬದುಕು ಆರಂಭಿಸಿ 10 ವರ್ಷಗಳೇ ಕಳೆದಿದೆ. ನನ್ನೊಳಗಿನ ಈ ಆಸೆಯನ್ನು ಪತಿ ಸಂದೀಪ್ ಸತ್ಯನಾರಾಯಣರಿಗೆ ಹೇಳಿದಾಗ, ನನಗೆ ಮಾತ್ರವಲ್ಲದೆ ನನ್ನ ಕನಸಿಗೂ ಬೆನ್ನೆಲುಬಾಗಿ ನಿಂತರು. ಅವರಿಲ್ಲದೆ ಹೋಗಿದ್ದರೆ ನನ್ನ ಈ ಕನಸು ನನಸಾಗುತ್ತಿರಲಿಲ್ಲವೇನೋ ಎಂದು ಹೇಳಿದರು.
ಅಶ್ವಿನಿ ಭಟ್ ಒಬ್ಬರೇ ಕರ್ನಾಟಕದವರು
IAU Asia oscenia 24 hr Championshipನಲ್ಲಿ ದೇಶವನ್ನು ಒಟ್ಟು 12 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಈ ಪೈಕಿ 6 ಪುರುಷರು, 6 ಮಹಿಳೆಯರು ಇರಲಿದ್ದಾರೆ. ಇದರಲ್ಲಿ ಅಶ್ವಿನಿ ಭಟ್ ಒಬ್ಬರೇ ಕರ್ನಾಟಕದವರು. ದೇಶದಲ್ಲಿ ಹೆಚ್ಚು ಕ್ರೀಡಾಪಟುಗಳಿಲ್ಲದ ಅಲ್ಟ್ರಾ ಮ್ಯಾರಾಥನ್ಗೆ ಅಸಾಮಾನ್ಯ ಕ್ಷೇತ್ರ ಇದು. ದಿನದ 24 ಗಂಟೆಗಳ ಕಾಲವೂ ಓಡುವ ಸ್ಪರ್ಧೆ ಇದಾಗಿದ್ದು, ಎಲ್ಲರಿಂದಲೂ ಸಾಧ್ಯವಿಲ್ಲ ಎಂಬುವುದು ನಿಚ್ಚಳವಾಗಿದೆ.
ನಾನು ಓಡುತ್ತೇನೆ ಎಂದು ಅಲ್ಟ್ರಾ ಮ್ಯಾರಾಥನ್ಗೆ ಇಳಿದ ಅಶ್ವಿನಿ ಭಟ್, ಈಗ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ. ""ಅವಳು ಈ ವಿಚಾರ ಹೇಳಿದಾಗ ನಾನು ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಟ್ಟೆ, ಎಂದು ಅಶ್ವಿನಿ ಪತಿ ಸಂದೀಪ್ ಸತ್ಯನಾರಾಯಣ ಹೇಳಿದ್ದಾರೆ. ಸಾಫ್ಟ್ವೇರ್ ಟೆಕ್ಕಿಯಾದ ಅಶ್ವಿನಿ ಗಣಪತಿ ಭಟ್, ಈಗ ಫುಲ್ ಟೈಮ್ ಅಥ್ಲೀಟ್ ಆಗಿ ರೂಪುಗೊಂಡಿದ್ದಾರೆ.