ನವದೆಹಲಿ, ಆಗಸ್ಟ್ 10: ಮುಂಬರಲಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳು, ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸುವಂತೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕರೆ ನೀಡಿದ್ದಾರೆ. ಕ್ರೀಡಾಂಗಣ ಮತ್ತು ಕ್ರೀಡಾಂಗಣಕ್ಕೆ ಹೊರತಾಗಿಯೂ ಭಾರತದ ಘನತೆಗೆ ಧಕ್ಕೆ ತರುವಂತೆ ವರ್ತಿಸದಿರಲು ರಾಥೋಡ್ ಸೂಚಿಸಿದ್ದಾರೆ.
'ಲಾರ್ಡ್ಸ್' ಸ್ಟೇಡಿಯಂನಲ್ಲಿ ದುಡಿದು ಗಮನ ಸೆಳೆದ ಅರ್ಜುನ್ ತೆಂಡೂಲ್ಕರ್
ಮುಂದಿನ ವಾರ ಆಗಸ್ಟ್ 18ರಿಂದ ಇಂಡೋನೇಷ್ಯಾದ ಜಕಾರ್ತಾದ ಪಾಲೆಂಬಂಗ್ ನಲ್ಲಿ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಆರಂಭವಾಗಲಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಭಾರತದಿಂದ 572 ಕ್ರೀಡಾಪಟುಗಳನ್ನು ಸೇರಿಸಿ ಒಟ್ಟು 800ಕ್ಕೂ ಹೆಚ್ಚು ಮಂದಿ ತೆರಳುವುದರಲ್ಲಿದ್ದಾರೆ.
ಏಷ್ಯನ್ ಗೇಮ್ಸ್ ಗೆ ತೆರಳುತ್ತಿರುವ ಭಾರತ ತಂಡವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯವರ್ಧನ್, 'ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅಪೂರ್ವ ಅವಕಾಶ ನಿಮಗೆ ಲಭಿಸಿದೆ. ಇದು ನಿಜಕ್ಕೂ ನೀವು ಹೆಮ್ಮೆ ಪಡಬೇಕಾದ ಸಂಗತಿ' ಎಂದಿದ್ದಾರೆ.
'ಕಾರ್ಯಕ್ರಮದ ಅಂಗವಾಗಿ ನೀವು ಕ್ರೀಡಾಗ್ರಾಮದಲ್ಲಿ ತಂಗಲಿದ್ದೀರಿ. ಆಗ ನಿಮ್ಮ ವೈಯಕ್ತಿಕ ಗುರುತು ಮಾಸಿಹೋಗಿರುತ್ತದೆ. ನಿಮ್ಮನ್ನು ಅಲ್ಲಿ ಗುರುತಿಸುವುದು ಒಂದೇ ರೀತಿಯಿಂದ; ಅದು 'ಭಾರತೀಯ'ನೆಂದು. ಹಾಗಾಗಿ ನಿಮ್ಮ ಮೇಲೆ ಮಹತ್ತರ ಜವಾಬ್ದಾರಿಯಿದೆ. ದೇಶಕ್ಕೆ ಧಕ್ಕೆ ತರುವಂತೆ ಎಲ್ಲೂ ಎಲ್ಲೆಮೀರಿ ನಡೆದುಕೊಳ್ಳಬಾರದು' ಎಂದು ರಾಥೋಡ್ ತಿಳಿಸಿದ್ದಾರೆ.