ಮೆಲ್ಬೋರ್ನ್, ಜ. 17 : ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಸ್ಟುವರ್ಟ್ ಬಿನ್ನಿ ಆಯ್ಕೆಯಾಗಿದ್ದಕ್ಕೆ ಪ್ರತಿಯಾಗಿ ಟೀಕಾಕಾರರ ಹೀಗಳಿಕೆಯ ಮಾತು ಕೇಳಿಕೇಳಿ ಬೇಸತ್ತಿದ್ದ ಅಭಿಮಾನಿಗಳ ಮುಖ ಖುಷಿಯಿಂದ ಅರಳುವಂತಹ ಹೇಳಿಕೆಯನ್ನು ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿದ್ದಾರೆ.
ಕರ್ನಾಟಕವನ್ನು ಪ್ರತಿನಿಧಿಸುವ ಸ್ಟುವರ್ಟ್ ಬಿನ್ನಿ "ಭಾರತದ ಅತ್ಯುತ್ತಮ ಸೀಮ್ ಆಲ್ರೌಂಡರ್" ಎಂದು ಧೋನಿ ವಾಚಾಮಗೋಚರವಾಗಿ ಹೊಗಳಿದ್ದಾರೆ. ಹಾಗೆಯೆ, ಹೊಗಳಿಕೆಗೆ ತಕ್ಕಂತೆ ವಿಶ್ವಕಪ್ ನಲ್ಲಿ ಆಡುವ ಭಾರವನ್ನೂ ಬಿನ್ನಿ ಮೇಲೆ ಧೋನಿ ಹೊರಿಸಿದ್ದಾರೆ. ಅಂದ ಹಾಗೆ, ಎಲ್ಲರಿಗೂ ತಿಳಿದಿರುವಂತೆ ಸ್ಟುವರ್ಟ್ ಬಿನ್ನಿ, ರಾಷ್ಟ್ರೀಯ ಆಯ್ಕೆ ತಂಡದಲ್ಲಿರುವ ರೋಜರ್ ಬಿನ್ನಿ ಮಗ.
ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆಗಾರರ ತಂಡ ಅಂತಿಮ 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದಾಗ ಆಲ್ ರೌಂಡರ್ ಆಗಿ ಸ್ಟುವರ್ಟ್ ಬಿನ್ನಿ ಹೆಸರು ಕೇಳಿ ಹಲವಾರು ಜನರು ಹುಬ್ಬು ಏರಿಸಿದ್ದರು. ಬಿನ್ನಿ ಜಾಗದಲ್ಲಿ, ಕಳೆದ ಬಾರಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಯುವರಾಜ್ ಸಿಂಗ್ ಇರಬೇಕಿತ್ತು ಎಂಬ ಅಭಿಪ್ರಾಯ ಮಂಡಿಸಿದ್ದರು. [15 ಸದಸ್ಯರ ಭಾರತ ತಂಡ]
ಈಗ ಧೋನಿ ನೀಡಿರುವ ಕಾರಣ ಹೀಗಿದೆ, "ಪರ್ತ್ ಮತ್ತು ನ್ಯೂಜಿಲೆಂಡ್ ನಲ್ಲಿ ಸ್ಪಿನ್ನರ್ ಗಳಿಗೆ ಅಷ್ಟು ಸಹಾಯವಾಗುವುದಿಲ್ಲ. ಇಂಥಲ್ಲೇ ಬಿನ್ನಿ ಉಪಯೋಗಕ್ಕೆ ಬರುತ್ತಾರೆ. ಆಯ್ಕೆಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿರಲಿ, ಬಿನ್ನಿ ದೇಶದ ಅತ್ಯುತ್ತಮ ಸೀಮ್ ಆಲ್ ರೌಂಡರ್. ಅವರು ಅಗ್ರೆಸ್ಸೀವ್ ಆಗಿ ಬ್ಯಾಟ್ ಮಾಡುತ್ತಾರೆ ಮತ್ತು ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ." [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]
ಜಡೇಜಾ, ಇಶಾಂತ್ ಇಲ್ಲ : ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರೂ, ಸದ್ಯಕ್ಕೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ, ಗಾಯದಿಂದ ಇನ್ನೂ ಚೇತರಿಸಿಕೊಂಡಿರದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ವೇಗಿ ಇಶಾಂತ್ ಶರ್ಮಾ ಆಡುವುದಿಲ್ಲ ಎಂದು ಧೋನಿ ಸ್ಪಷ್ಟಪಡಿಸಿದ್ದಾರೆ.
ಅವರಿಬ್ಬರೂ ತಂಡದ ಪ್ರಮುಖ ಆಟಗಾರರಾಗಿರುವುದರಿಂದ, ಅವರು ಗಾಯದಿಂದ ಇನ್ನೂ ಗುಣವಾಗದಿರುವುದರಿಂದ ಅವರನ್ನು ಆಡಿಸಿ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಧೋನಿ ಹೇಳಿಕೆ ನೀಡಿದ್ದಾರೆ. ತ್ರಿಕೋನ ಸರಣಿಯ ಮೊದಲ ಪಂದ್ಯವನ್ನು ಭಾರತ ಆಸ್ಟ್ರೇಲಿಯಾದ ವಿರುದ್ಧ ಭಾನುವಾರ ಮೆಲ್ಬೋರ್ನ್ ನಲ್ಲಿ ಆಡಲಿದೆ.