ಟೋಕಿಯೋ, ಜುಲೈ 25: ಭಾರತಕ್ಕೆ ಭಾನುವಾರ ಮತ್ತೊಂದು ನಿರಾಶಾದಾಯಕ ಫಲಿತಾಂಶ ದೊರೆತಿದೆ. ಟೇಬಲ್ ಟೆನಿಸ್ ಪುರುಷರ ವಿಭಾಗದಲ್ಲಿ ಸಥಿಯಾನ್ ಜ್ಞಾನಶೇಖರನ್ ಸೋಲು ಕಂಡಿದ್ದಾರೆ. ಹಾಂಕಾಂಗ್ನ ಲಾಮ್ ಸಿಯು ಹಾಂಗ್ ವಿರುದ್ಧ ಏಳು ಸುತ್ತುಗಳಲ್ಲಿ 3-4 ಅಂತರದಿಂದ ಶರಣಾಗಿದ್ದಾರೆ.
ಸಥಿಯಾನ್ ತಮ್ಮ ಚೊಚ್ಚಲ ಒಲಿಂಪಿಕ್ಸ್ ಪಂದ್ಯವನ್ನು ಕೆಳ ಕ್ರಮಾಂಕದ ಹಾಂಕಾಂಗ್ನ ಆಟಗಾರನ ವಿರುದ್ಧ ಆಡಿದ್ದರು. ಆದರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಥಿಯಾನ್ಗೆ ಸಾಧ್ಯವಾಗಲಿಲ್ಲ. 37ನೇ ಶ್ರೇಯಾಂಕದ ಸಥಿಯಾನ್ ಹಾಂಕಾಂಗ್ನ 95ನೇ ಶ್ರೇಯಾಂಕದ ಲಾಮ್ ಸಿಯು ಹಾಂಗ್ ವಿರುದ್ಧ ಉತ್ತಮ ಆರಂಭದ ಹೊರತಾಗಿಯೂ ಗೆಲುವು ಪಡೆಯಲು ವಿಫಲರಾಗಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ರೋಯಿಂಗ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್
ಭಾರತದ ಸಥಿಯಾನ್ ಆರಂಭದಲ್ಲಿ 3-1 ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದರು. ಹೀಗಾಗಿ ಸಾಥಿಯನ್ ಗೆಲ್ಲುವ ನಿರೀಕ್ಷೆಯಿತ್ತು, ಆದರೆ ಬಳಿಕ ಲಾಮ್ ಅದ್ಭುತ ಪ್ರದರ್ಶನ ನೀಡಿ ತೀವ್ರ ಪೈಪೋಟಿ ನೀಡಿ ಮುನ್ನಡೆಯುತ್ತಾ ಸಾಗಿದರು. ಅಂತಿಮವಾಗಿ ಭಾರತದ ಆಟಗಾರಿಗೆ ಸೋಲಿನ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಈ ಮೂಲಕ ಸಿಂಗಲ್ಸ್ ಹೋರಾಟದಲ್ಲಿ ಭಾರತದ ಸಥಿಯಾನ್ ಜ್ಞಾನಶೇಖರನ್ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.
11-4, 11-7 ಮತ್ತು 11-5 ಅಂತರದಿಂದ ಚೆನ್ನೈ ಮೂಲದ ಪೆಡ್ಲರ್ ಸಥಿಯಾನ್ ಉತ್ತಮ ಆರಂಭವನ್ನು ಪಡೆದರು. ಇನ್ನೊಂದು ಗೆಲುವು ಅವರನ್ನು ಮೂರನೇ ಸುತ್ತಿಗೆ ಕೊಂಡೊಯ್ಯಲಿತ್ತು. ಆದರೆ ಭಾರತೀಯ ಆಟಗಾರ ತಮ್ಮ ಲಯವನ್ನು ಕಳೆದುಕೊಂಡರು. ಬಳಿಕ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಲು ಅವರಿಂದ ಸಾಧ್ಯವಾಗಲಿಲ್ಲ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತ ಈಗ ಶರತ್ ಕಮಲ್ ಮೇಲೆ ಭರವಸೆಯನ್ನು ಇಟ್ಟುಕೊಂಡಿದೆ. ಪುರುಷರ ಸಿಂಗಲ್ಸ್ನಲ್ಲಿ ನಾಲ್ಕನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ಶರತ್ ಭಾಗವಹಿಸುತ್ತಿದ್ದಾರೆ. ಆದರೆ ಶರತ್ ಮಿಶ್ರ ಡಬಲ್ಸ್ನಲ್ಲಿ ನೀರಸ ಪ್ರದರ್ಶನದ ಮೂಲಕ ಆರಂಭವನ್ನು ಮಾಡಿದ್ದಾರೆ. ತಮ್ಮ ಜೋಡಿ ಮನಿಕಾ ಬಾತ್ರಾ ಜೊತೆಗೆ ಆರಂಭಿಕ ಪಂದ್ಯದಲ್ಲಿ ಎದುರಾಳಿಗೆ ಶರಣಾಗಿದ್ದಾರೆ. ಇದಕ್ಕೂ ಮುನ್ನ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ಪೆಡ್ಲರ್ಗಳಾದ ಮನಿಕಾ ಬಾತ್ರಾ ಹಾಗೂ ಸುತೀರ್ಥ ಮುಖರ್ಜಿ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಕಾಲಿಟ್ಟಿದ್ದಾರೆ.