ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಇದುವರೆಗೂ ಭಾರತ ಕೇವಲ ಒಂದೇ ಒಂದು ಪದಕವನ್ನು ಮುಡಿಗೇರಿಸಿಕೊಂಡಿದೆ. ಮೂರನೇ ದಿನ ಭಾರತದ ಹಲವಾರು ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದರೂ ಕೂಡ ಯಾವುದೇ ಪದಕ ಲಭಿಸಿಲ್ಲ. ರೋಯಿಂಗ್ ವಿಭಾಗದಲ್ಲಿ ಅರ್ಜುನ್ ಮತ್ತು ಅರವಿಂದ್ ಸೆಮಿಫೈನಲ್ ಪ್ರವೇಶಿಸಿದರೆ, ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ತಮ್ಮ ಮೊದಲನೇ ಪಂದ್ಯವನ್ನು ಲೀಲಾಜಾಲವಾಗಿ ಗೆದ್ದುಕೊಂಡಿದ್ದಾರೆ. ಹಾಗೂ ಬಾಕ್ಸರ್ ಮೇರಿ ಕೋಮ್ ಕೂಡ ಭರ್ಜರಿ ಪ್ರದರ್ಶನ ನೀಡುವುದರ ಮೂಲಕ ಪ್ರಿ ಕ್ವಾರ್ಟರ್ಗೆ ಲಗ್ಗೆ ಇಟ್ಟಿದ್ದಾರೆ.
ಹಾಗೂ ನಾಲ್ಕನೇ ದಿನವಾದ ಇಂದು (ಜು.26) ಭಾರತದ ಭವಾನಿ ದೇವಿ ಸೇಬರ್ ಫೆನ್ಸಿಂಗ್ನ 32ನೇ ಸುತ್ತಿನಲ್ಲಿ ವಿಶ್ವದ ನಂ. 3 ಆಟಗಾರ್ತಿ ಮ್ಯಾನೊನ್ ಬ್ರುನೆಟ್ ವಿರುದ್ಧ 7-15 ಅಂತರದಲ್ಲಿ ಸೋಲನ್ನಪ್ಪಿದ್ದಾರೆ. ಇದಕ್ಕೂ ಮೊದಲು ನಡೆದ ತಮ್ಮ ಮೊದಲ ಪಂದ್ಯದಲ್ಲಿ ತುನೀಷಿಯಾ ದೇಶದ ಆಟಗಾರ್ತಿ ನಡಿಯ ಅಝೀಝಿ ವಿರುದ್ಧ ಭವಾನಿದೇವಿ 15-3 ಅಂತರದಲ್ಲಿ ಗೆಲುವನ್ನು ಸಾಧಿಸಿದ್ದರು. ಮೊದಲನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಭರವಸೆಯನ್ನು ಹುಟ್ಟು ಹಾಕಿದ್ದ ಭವಾನಿದೇವಿ 32ನೇ ಸುತ್ತಿನಲ್ಲಿ ಸೋಲನುಭವಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ.
ಇದಕ್ಕೂ ಮುನ್ನ ನಡೆದ ಪುರುಷರ ಆರ್ಚರಿ ವಿಭಾಗದ ಪಂದ್ಯದಲ್ಲಿ ಭಾರತದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಕಜಕಿಸ್ತಾನದ ವಿರುದ್ಧ 6-2 ಅಂತರದಿಂದ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಹಾಗೂ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.