ಟೋಕಿಯೋ ಒಲಿಂಪಿಕ್ಸ್ನ ನಾಲ್ಕನೇ ದಿನವಾದ ಇಂದು (ಜು.26) ಭಾರತದ ಬಿಲ್ಲುಗಾರರಾದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ತಂಡ ಕಜಕಿಸ್ತಾನದ ವಿರುದ್ಧ 4-2 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿತ್ತು. ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದ ಈ ತಂಡ ಇದೀಗ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಹೀನಾಯವಾಗಿ ಸೋಲುವುದರ ಮೂಲಕ ಒಲಿಂಪಿಕ್ಸ್ನಿಂದ ಹೊರಬಿದ್ದಿದೆ.
ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ದಕ್ಷಿಣ ಕೊರಿಯಾ ತಂಡದ ವಿರುದ್ಧ ಸೆಣಸಾಡಿದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ತಂಡ 0-6 ಅಂತರದಲ್ಲಿ ಹೀನಾಯವಾಗಿ ಸೋತಿತು. ಹಿಂದಿನ ಸುತ್ತಿನಲ್ಲಿ ಈ ತಂಡ ಕಜಕಿಸ್ತಾನದ ವಿರುದ್ಧ ತೋರಿದ ಉತ್ತಮ ಪ್ರದರ್ಶನ ಕಂಡು ಪದಕ ನಿರೀಕ್ಷೆ ಮಾಡುತ್ತಿದ್ದ ಪ್ರೇಕ್ಷಕರಿಗೆ ಈಗ ನಿರಾಸೆಯುಂಟಾಗಿದೆ.
ಅತ್ತ ಸೇಬರ್ ಫೆನ್ಸಿಂಗ್ ಆಟದಲ್ಲಿ ಭರವಸೆಯನ್ನು ಹುಟ್ಟು ಹಾಕಿದ್ದ ಭಾರತದ ವನಿತೆ ಭವಾನಿ ದೇವಿ ಕೂಡ 32ನೇ ಸುತ್ತಿನಲ್ಲಿ ಸೋಲನ್ನು ಕಾಣುವುದರ ಮೂಲಕ ಟೊಕಿಯೊ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ. ಹಾಗೂ ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಸುತೀರ್ಥಾ ಮುಖರ್ಜಿ 0-4 ಅಂತರದಲ್ಲಿ ಸೋತು ಒಲಿಂಪಿಕ್ಸ್ನಿಂದ ಹೊರ ನಡೆದಿದ್ದಾರೆ.