ಬೆಂಗಳೂರು, ಫೆ. 6: 1983ರ ವಿಶ್ವಕಪ್ ಕಿರೀಟ ಹೊತ್ತು ತಂದ ಕಪಿಲ್ ದೇವ್ ತಂಡ ಕೊಂಚ ಎಡವಟ್ಟು ಮಾಡಿಕೊಂಡಿದ್ದರೆ ಬರಿಗೈಲಿ ಮನೆಗೆ ಮರಳಬೇಕಾಗಿತ್ತು.
ಲೀಗ್ ಹಂತದಲ್ಲಿ ತಲಾ ಎರಡೆರಡು ಪಂದ್ಯ ಗೆದ್ದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ರೇಸ್ ನಲ್ಲಿದ್ದವು. ಅದೇ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿದ್ದ ಜಿಂಬಾಬ್ವೆ ಭಾರತಕ್ಕೆ ಸರಿಯಾದ ಆಘಾತವನ್ನೇ ನೀಡಿತ್ತು.[ಕೊನೆ ವಿಶ್ವಕಪ್ ಆಡಲಿರುವ ಟಾಪ್ 10 ಸ್ಟಾರ್ ಕ್ರಿಕೆಟರ್ಸ್]
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡಕ್ಕೆ ಆರಂಭಿಕರು ಮತ್ತು ಮಧ್ಯಮ ಕ್ರಮಾಂಕದ ಆಟಗಾರರು ನೆರವು ನೀಡಲಿಲ್ಲ.
ಸುನೀಲ್ ಗಾವಸ್ಕರ್, ಶ್ರೀಕಾಂತ್, ಮೋಹಿಂದರ್ ಅಮರನಾಥ್ ಮತ್ತು ಸಂದೀಪ್ ಪಾಟೀಲ್ ಅವರನ್ನು ಕೇವಲ 9 ರನ್ ಗಳಿಸುವುದರಲ್ಲಿ ಕಳೆದುಕೊಂಡಿತ್ತು. ಈ ಸಂದರ್ಭ ಕಪಿಲ್ ಬ್ಯಾಟ್ ಹಿಡಿದು ಆಗಮಿಸಿದ್ದರು.
ಪ್ರಮುಖರನ್ನು ಕಳೆದುಕೊಂಡ ಭಾರತ ನೂರು ರನ್ ಗಳಿಸುವುದು ಅನುಮಾನ ಎಂಬ ಸ್ಥತಿ ನಿರ್ಮಾಣವಾಗಿತ್ತು. ಮತ್ತೆ 8 ರನ್ ಗಳಿಸುವಷ್ಟರಲ್ಲಿ ಅಂದರೆ 17 ರನ್ ಗೆ ಭಾರತ 5 ವಿಕೆಟ್ ಕಳೆದುಕೊಂಡಿತು.[ಭಾರತ-ಪಾಕಿಸ್ತಾನ ಕದನ ಟಿಕೆಟ್ ದಾಖಲೆ ಮಾರಾಟ]
ಸಾಮಾನ್ಯವಾಗಿ ಕಪಿಲ್ ಬ್ಯಾಟಿಂಗ್ ಗೆ ಇಳಿಯುತ್ತಿದ್ದದ್ದು 7 ನೇ ಕ್ರಮಾಂಕದಲ್ಲಿ. ಆದರೆ ನಾಯಕ ತನ್ನ ಸ್ಥಾನ ಬದಲಾಯಿಸಿ ಆರನೇ ಕ್ರಮಾಂಕದಲ್ಲಿ ಇಳಿದಿದ್ದರು. ಯಶ್ ಪಾಲ್ ಶರ್ಮಾ ಸಹ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಹಿಂದಿರುಗಿದರು.
ಹೋರಾಟ ಮುಂದುವರಿಯಿತು
ಆಲ್ ರೌಂಡರ್ ರೋಜರ್ ಬಿನ್ನಿ ಮತ್ತಯು ಕಪಿಲ್ ನಡುವೆ ಮೂಡಿಬಂದ 60 ರನ್ ಜತೆಯಾಟ ಭಾರತಕ್ಕೆ ಕೊಂಚ ಶಕ್ತಿ ತುಂಬಿತು. ಆದರೆ ಕೆಲವೇ ರನ್ ಗಳ ಅಂತರದಲ್ಲಿ ಬಿನ್ನಿ(22) ಮತ್ತು ರವಿ ಶಾಸ್ತ್ರೀ (1) ಕಳೆದುಕೊಂಡ ಭಾರತದ ಮೊತ್ತ 78 ರನ್. ಅದಾಗಲೇ 7 ಜನ ಫೆವಿಲಿಯನ್ ಸೇರಿದ್ದರು. ನಂತರ ಕ್ರೀಸ್ ಗೆ ಆಗಮಿಸಿದ ಮದನ್ ಲಾಲ್ ಕಪಿಲ್ ಜತೆ 62 ರನ್ ಜತೆಯಾಟದಲ್ಲಿ ಭಾಗಿಯಾದರು.
ಕಪಿಲ್-ಕಿರ್ಮಾನಿ 126 ರನ್ ಜುಗಲ್ ಬಂದಿ
140 ರನ್ ಗೆ 8 ವಿಕೆಟ್ ಕಳೆದುಕೊಂಡ ಭಾರತದ ಮೊತ್ತ ಹೆಚ್ಚಿಸಿದ್ದು ಕಪಿಲ್-ಕಿರ್ಮಾನಿ ಜುಗಲ್ ಬಂದಿ. ಕಿರ್ಮಾನಿ ಒಂದೆಡೆ ಕ್ರೀಸ್ ಕಚ್ಚಿ ನಿಂತರೆ ಇತ್ತ ಹರಿಯಾಣದ ಹುಲಿ ಅಬ್ಬರಿಸಿದರು.
138 ಎಸೆತ ಎದುರಿಸಿದ ಕಪಿಲ್ ಗಳಿಸಿದ್ದು 175 ರನ್. ಅದರಲ್ಲಿ 6 ಸಿಕ್ಸ್ ಮತ್ತು 16 ಬೌಂಡರಿಗಳಿದ್ದವು. ಕಪಿಲ್ ಅವರನ್ನು ಔಟ್ ಮಾಡಲು ಜಿಂಬಾಬ್ವೆ ಬಳಿ ಬೌಲರ್ ಗಳ ಕೊನೆಗೂ ಸಾಧ್ಯವಾಗಲಿಲ್ಲ.
ನಿಗದಿತ ಓವರ್ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ ಭಾರತ 266 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಹೋರಾಟ ಆರಂಭಿಸಿದ ಜಿಂಬಾಬ್ವೆ ಭಾರತಕ್ಕೆ 31 ರನ್ ಜಯ ಬಿಟ್ಟುಕೊಟ್ಟಿತು.
ಬೌಲಿಂಗ್ ನಲ್ಲೂ ಮಿಂಚಿದ ನಾಯಕ ಕಪಿಲ್ ಭಾರತದ ಜಯದ ರೂವಾರಿ ಎನಿಸಿಕೊಂಡರು. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕನ ಕೊಡುಗೆ ನೀಡಿದ ಕಪಿಲ್ ನಂತರ ಚಾಂಪಿಯನ್ ಪಟ್ಟವನ್ನೂ ಅಲಂಕರಿಸಿದ್ದು ಇತಿಹಾಸ.