ನವದೆಹಲಿ, ಜೂನ್ 25: ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ಮಂಡೋಲಿ ಕಾರಾಗೃಹದಿಂದ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಸುಶಿಲ್ ಕುಮಾರ್ ಹಾಗೂ ಅವರ ಸಹಚರ ಅಜಯ್ ಎಂಬಾತನನ್ನು ಮೇ 23ರಂದು ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ದೆಹಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಅಧಿಕೃತ ಮಾಹಿತಿಯ ಪ್ರಕಾರ ಪ್ರಕ್ರಿಯೆಯ ಭಾಗವಾಗಿ ತಿಹಾರ್ ಜೈಲಿಗೆ ಆರೋಪಿ ಸುಶೀಲ್ ಕುಮಾರ್ ಅವರನ್ನು ಸ್ಥಳಾಂತರಿಸಲಾಗಿದೆ. ಆದರೆ ಮೂಲಗಳ ಮಾಹಿತಿಯ ಪ್ರಕಾರ ಭದ್ರತಾ ಕಾರಣಗಳಿಗಾಗಿ ಈ ಸ್ಥಳಾಂತರವನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಸುಶೀಲ್ ಕುಮಾರ್ ಪ್ರಮುಖ ಆರೋಪಿ ಮತ್ತು ಮಾಸ್ಟರ್ಮೈಂಡ್ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಪೂರಕವಾದ ವಿಡಿಯೋ ಸಾಕ್ಷ್ಯಗಳನ್ನು ಕೂಡ ಪೊಲೀಸರು ಸಂಗ್ರಹಿಸಿದ್ದಾರೆ.
ಆರೋಪಿ ಸುಶೀಲ್ ಕುಮಾರ್ ವಿಚಾರಣೆಯ ಸಂದರ್ಭದಲ್ಲಿ ಸಾಗರ್ ರಾಣಾನನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಿಕೆಯನ್ನು ನೀಡಿರುವುದು ತಿಳಿದು ಬಂದಿದೆ. ತನ್ನನ್ನು ದುರ್ಬಲ ಎಂದು ಪರಿಗಣಿಸಿ ತನ್ನೊಂದಿಗೆ ಸಂಘರ್ಷಕ್ಕೆ ಇಳಿಯದಂತೆ ಸಾಗರ್ ರಾಣಾ ಹಾಗೂ ಆತನ ಸ್ನೇಹಿತರಿಗೆ ಪಾಠವನ್ನು ಕಲಿಸುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ. ದೆಹಲಿಯ ಮಾಡೆಲ್ ಟೌನ್ ಪ್ರದೇಶದ ಸುಶೀಲ್ ಕುಮಾರ್ ಅವರಿಗೆ ಸೇರಿದ ಫ್ಲ್ಯಾಟ್ ವಿಚಾರವಾಗಿ ಸುಶೀಲ್ ಕುಮಾರ್ ಮತ್ತು ಸಾಗರ್ ರಾಣಾ ನಡುವೆ ಭಿನ್ನಾಭಿಪ್ರಾಯವಿತ್ತು.
ಮೇ 4ರಂದು ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಸಾಗರ್ ಧಂಕರ್ ಹತ್ಯೆ ನಡೆದಿತ್ತು. ಘಟನೆ ನಡೆದ ರಾತ್ರಿ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದರು. ನಂತರ ಮೇ 23 ರ ಬೆಳಿಗ್ಗೆ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸುಶೀಲ್ ಕುಮಾರ್ ಅವರನ್ನು ಬಂಧಿಸಲು ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ನಂತರ ದೆಹಲಿ ಪೊಲೀಸರಿಂದ ಹತ್ತು ದಿನಗಳ ಕಾಲ ವಿಚಾರಣೆ ನಡೆದಿದ್ದು ನಂತರ ಜೂನ್ 2ರಿಂದ ನ್ಯಾಯಾಂಕ ಬಂಧನದಲ್ಲಿದ್ದಾರೆ.