ಬೆಂಗಳೂರು, ಮಾರ್ಚ್ 10: ಕ್ರೀಡೆ ಚಟುವಟಿಕೆಗಳಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು ದೈಹಿಕ ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ರಾಷ್ಟ್ರೀಯ ವಾಲಿಬಾಲ್ ಆಟಗಾರ ಸುದೀಪ್ಶೆಟ್ಟಿ ಅವರು ತಿಳಿಸಿದ್ದಾರೆ.
ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಎನ್-ಕ್ರೀಡಾ ಎನ್ನುವ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದಾದರೊಂದು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯರಾಗಬೇಕು ಎಂದರು.
ಅಮೆರಿಕಾ ಆಸ್ಟ್ರೇಲಿಯಾ ಇನ್ನಿತರ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೀಡುವುದಕ್ಕಿಂತ ಹೆಚ್ಚಿನ ಆದ್ಯತೆಯನ್ನು ಕ್ರೀಡೆಗಳಿಗೆ ನೀಡಲಾಗುತ್ತದೆ ನಮ್ಮ ದೇಶದಲ್ಲಿಯೂ ಇತ್ತೀಚಿಗೆ ಕ್ರೀಡೆಗಳಿಗೆ ಒದಗಿಸುತ್ತಿರುವ ಸೌಲಭ್ಯ ಪ್ರೋತ್ಸಾಹ ಹೆಚ್ಚಾಗಿದೆ ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಯ ಆರ್.ಟಿ.ನಗರ, ವಿದ್ಯಾರಣ್ಯಪುರ, ಕಮ್ಮನಹಳ್ಳಿ, ಸಹಕಾರ ನಗರ,ಮತ್ತು ಯಲಹಂಕ ಶಾಖೆಗಳ ಸುಮಾರು 2 ಸಾವಿರ ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಈ ಕ್ರೀಡಾಕೂಟವನ್ನು ವಿದ್ಯಾರ್ಥಿ ಸಮೂಹವು ವಿವಿಧ ಕಾರ್ಯಕ್ರಮಗಳಾದ ಸಾಮೂಹಿಕ ಡ್ರಿಲ್ ಮತ್ತು ಅನೇಕ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಅದ್ದೂರಿ ಹಾಗೂ ಯಶಸ್ವಿಯಾಗಿ ನಡೆದವು.
ಕ್ರೀಡಾ ಕೂಟದಲ್ಲಿ 100 ಮೀ, 200 ಮೀ,400 ಮೀ, ಖೋಖೋ, ಕಬ್ಬಡಿ, ವಾಲಿಬಾಲ್, ಥ್ರೋ ಬಾಲ್ ಇತರೆ ಸ್ಪರ್ಧೆಗಳ ವಿಜೇತರನ್ನು ಸಂಸ್ಥೆಯ ನಿರ್ದೇಶಕರಾದ ಪದ್ಮಜಾ ಗೋಪಾಲ್ಕೃಷ್ಣ ಅಭಿನಂದಿಸಿದರು.ಡೀನ್ ಬಿ.ವಿ. ನಾಗರಾಜ ಪ್ರಾದೇಶಿಕ ಮುಖ್ಯಸ್ಥ ವೈ ಶ್ರೀನಿವಾಸ್ರಾವ್, ಸಂಸ್ಥೆಯ ಉತ್ತರ ವಲಯದ ಪ್ರಾದೇಶಿಕ ಮುಖ್ಯಸ್ಥ ಹರಿಬಾಬು ಮತ್ತು ಮುರುಳಿಕೃಷ್ಣ ಅವರು ಪಾಲ್ಗೊಂಡಿದ್ದರು. ಎನ್-ಕ್ರೀಡಾಗೆ ಲೀಪ್ ಸ್ಟಾರ್ಟ ಕ್ರೀಡಾ ಸಂಸ್ಥೆ ಸಹಭಾಗಿತ್ವ ವಹಿಸಿತ್ತು.