ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಓಪನ್ನಲ್ಲಿ ಭಾಗವಹಿಸದೆಯೇ ಆಸ್ಟ್ರೇಲಿಯಾದಿಂದ ವಾಪಾಸಾಗಿದ್ದ ವಿಷಯ ಸಾಕಷ್ಟು ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿತ್ತು. ಹೌದು, ಒಂದು ತಿಂಗಳ ಹಿಂದೆ ಆಸ್ಟ್ರೇಲಿಯಾ ಓಪನ್ನಲ್ಲಿ ಭಾಗವಹಿಸಲು ತೆರಳಿದ್ದ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಸರ್ಕಾರ ತನ್ನ ವೀಸಾವನ್ನು ಎರಡನೇ ಬಾರಿಗೆ ರದ್ದು ಮಾಡಿದ್ದರ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ಆದರೆ ಎರಡನೇ ಬಾರಿ ವಿಸಾ ರದ್ದುಗೊಳಿಸಿದ್ದ ಆಸ್ಟ್ರೇಲಿಯಾ ಸರ್ಕಾರದ ಆದೇಶವನ್ನು ಅಲ್ಲಿನ ಫೆಡರಲ್ ಕೋರ್ಟ್ ಎತ್ತಿ ಹಿಡಿದಿತ್ತು. ಹೀಗೆ ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧವೇ ಸಮರ ಸಾರಿದ್ದ ಸರ್ಬಿಯಾ ಮೂಲದ ಆಟಗಾರ ನೊವಾಕ್ ಜೊಕೊವಿಕ್ ಕಾನೂನು ಹೋರಾಟದಲ್ಲಿ ಸೋತು ಟೂರ್ನಿಯಲ್ಲಿ ಭಾಗವಹಿಸಲಾಗದೇ ದುಬೈಗೆ ಹಾರಿದ್ದರು.
ಈ ಕಾರಣದಿಂದಲೇ ಸುರೇಶ್ ರೈನಾರನ್ನು ಮೆಗಾ ಹರಾಜಿನಲ್ಲಿ ಖರೀದಿಸಲಿಲ್ಲ ಎಂದ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ!
ಈ ವೇಳೆ ನೊವಾಕ್ ಜೊಕೊವಿಕ್ ಕೊರೋನಾ ಲಸಿಕೆ ಹಾಕಿಸಿಕೊಂಡಿರುವುದರ ಕುರಿತು ತಪ್ಪು ಮಾಹಿತಿಯನ್ನು ನೀಡಿದ್ದರು ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಲಸಿಕೆ ಕುರಿತು ತಪ್ಪಾದ ಮಾಹಿತಿಯನ್ನು ನೀಡಿ ಆಸ್ಟ್ರೇಲಿಯಾ ಪ್ರವಾಸವನ್ನು ಪಡೆದುಕೊಂಡಿದ್ದ ಆರೋಪ ಮಾಡಿ ಜೋಕೋವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ಮೊದಲ ಬಾರಿಗೆ ರದ್ದು ಮಾಡಿತ್ತು ಆದರೆ ಕೋರ್ಟ್ ಮೊರೆ ಹೋದ ಜೋಕೋವಿಕ್ ಪರ ತೀರ್ಪು ಹೊರಬಿದ್ದಿತ್ತು. ಆದರೆ ಎರಡನೇ ಬಾರಿ ಕೂಡ ಆಸ್ಟ್ರೇಲಿಯಾ ಸರ್ಕಾರ ತನ್ನ ವೀಸಾ ರದ್ದು ಮಾಡಿದ್ದರ ಕುರಿತು ಕಾನೂನು ಹೋರಾಟ ನಡೆಸಲು ಮುಂದಾದ ಜೊಕೊವಿಕ್ ಆಸ್ಟ್ರೇಲಿಯಾದ ಇಮಿಗ್ರೇಷನ್ ಮಿನಿಸ್ಟರ್ ಮುಂದೆ ಸೋಲಬೇಕಾಯಿತು.
ಇನ್ನು ಆಸ್ಟ್ರೇಲಿಯಾ ನೆಲದಲ್ಲಿ ಕಾನೂನು ಸಮರ ಸೋತ ನೊವಾಕ್ ಜೊಕೊವಿಕ್ ದುಬೈಗೆ ಹಾರಿದ ಸಂದರ್ಭದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ನೊವಾಕ್ ಜೊಕೊವಿಕ್ ಆಸ್ಪ್ರೇಲಿಯಾ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ಸಿಗದೆ ಹೊರ ಬಿದ್ದಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹಬ್ಬಿತ್ತು. ಆದರೆ ಈ ಕುರಿತಾಗಿ ಎಲ್ಲಿಯೂ ಬಹಿರಂಗವಾಗಿ ಮಾತನಾಡದೇ ಇದ್ದ ನೊವಾಕ್ ಜೊಕೊವಿಕ್ ಇದೀಗ ಬಿಬಿಸಿ ಸಂದರ್ಶನದಲ್ಲಿ ವಿಶೇಷವಾಗಿ ಮಾತನಾಡಿದ್ದು, ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಭಾಗವಹಿಸದೇ ಆಚೆ ಬಿದ್ದದ್ದಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಈ ತಂಡವೇ ಬಲಿಷ್ಠ ಎಂದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್!
ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಆ ಘಟನೆ ನಿಜಕ್ಕೂ ಬೇಸರ ತಂದಿದೆ ಎಂದಿರುವ ನೊವಾಕ್ ಜೊಕೊವಿಕ್ ಅಲ್ಲಿನ ಫೆಡರಲ್ ಕೋರ್ಟ್ ಹಾಗೂ ಇಮಿಗ್ರೇಷನ್ ಮಿನಿಸ್ಟರ್ ತನ್ನ ವೀಸಾವನ್ನು ವಿರೋಧಿಸದೇ ಸ್ವೀಕರಿಸಿದ್ದರು ಎಂದಿದ್ದಾರೆ. ಆದರೆ ಇಮಿಗ್ರೇಷನ್ ಮಿನಿಸ್ಟರ್ ತನ್ನ ಅಧಿಕಾರವನ್ನು ಉಪಯೋಗಿಸಿ ವೀಸಾವನ್ನು ರದ್ದು ಮಾಡಿ ಟೂರ್ನಿಯಲ್ಲಿ ಭಾಗವಹಿಸದಂತೆ ಮಾಡಿದರು ಎಂದಿದ್ದಾರೆ. ಒಂದುವೇಳೆ ತನಗೆ ಆಸ್ಟ್ರೇಲಿಯಾ ಓಪನ್ನಲ್ಲಿ ಭಾಗವಹಿಸುವ ಅವಕಾಶವನ್ನು ನೀಡಿ ತಾನೇನಾದರೂ ಕೊರೋನಾ ಲಸಿಕೆಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿದರೆ, ಅದು ಜನರಲ್ಲಿ ವಿಭಿನ್ನವಾದ ಪ್ರಭಾವವನ್ನು ಬೀರುತ್ತದೆ ಎಂಬ ಭಯದಿಂದ ಆ ಮಿನಿಸ್ಟರ್ ಈ ರೀತಿಯ ಕ್ರಮಕ್ಕೆ ಮುಂದಾದರು ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಟೂರ್ನಿಗಳಲ್ಲಿ ಲಸಿಕೆ ಇದ್ದರೆ ಮಾತ್ರ ಪ್ರವೇಶ ಎಂದಾದರೆ ಆ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ಆ ಟ್ರೋಫಿಗಳನ್ನು ತ್ಯಾಗ ಮಾಡಲಿದ್ದೇನೆ ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ. ಹಾಗೂ ತಾನು ಕೊರೊನಾ ಲಸಿಕೆಯ ವಿರುದ್ಧವಾಗಿಲ್ಲ, ಬದಲಾಗಿ ಓರ್ವ ವ್ಯಕ್ತಿ ತನ್ನ ದೇಹಕ್ಕೆ ಲಸಿಕೆ ಹಾಕಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುವುದು ಆತನಿಗಿರುವ ಸ್ವಾತಂತ್ರ್ಯ ಎಂದು ಜೊಕೊವಿಕ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕೊರೋನಾವೈರಸ್ ವಿರುದ್ಧ ಕೋಟ್ಯಂತರ ಜನ ಹೋರಾಡುತ್ತಿದ್ದು ಇದಕ್ಕೆಲ್ಲಾ ಶಾಶ್ವತ ಪರಿಹಾರ ಸಿಗಬೇಕೇ ಹೊರತು ತಾತ್ಕಾಲಿಕ ಪರಿಹಾರವಲ್ಲ ಎಂದು ಕೂಡ ನೊವಾಕ್ ಜೊಕೊವಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.