ಬೆಂಗಳೂರು, ಆಗಸ್ಟ್ 26: ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದನ್ನು ಪ್ರಶ್ನಿಸಿದ್ದ ಲಂಡನ್ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಕನ್ನಡಿಗ ಎಚ್.ಎನ್. ಗಿರೀಶ್ ಅವರಿಗೆ ತಾತ್ಕಾಲಿಕ ಜಯ ಸಿಕ್ಕಿದೆ. ಸಾನಿಯಾ ಮಿರ್ಜಾ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಾನಿಯಾ ಮಿರ್ಜಾ ಅವರನ್ನು ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವ ಆಯ್ಕೆ ಸಮಿತಿ ಹಾಗೂ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಎಚ್.ಎನ್. ಗಿರೀಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಾನಿಯಾ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆಯ್ಕೆ ಪಟ್ಟಿಯನ್ನು ಮರುಪರಿಶೀಲಿಸುವಂತೆ ಗಿರೀಶ್ ಅವರ ಕೋಚ್ ಮನವಿ ಮಾಡಿದ್ದರೂ ಅದನ್ನು ಕೇಂದ್ರ ಸರ್ಕಾರ ಪರಿಗಣಿಸಿರಲಿಲ್ಲ. [ಬೆಳ್ಳಿ ಗೆದ್ದ ಕನ್ನಡಿಗ ಗಿರೀಶ್ ]
ಫೆ.24 ರಂದು ಕೇಂದ್ರ ಸರ್ಕಾರ ಖೇಲ್ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದಾಗ ಗಿರೀಶ್ ತಮ್ಮ ಅರ್ಜಿ ಸಲ್ಲಿಸಿದ್ದರು. 2011 ರಿಂದ 2014ರವರೆಗಿನ ಅವಧಿಯಲ್ಲಿ ಒಟ್ಟು 90 ಅಂಕ (2012ರ ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆಗೆ 70 ಅಂಕ, 2014ರ ಏಷ್ಯನ್ ಗೇಮ್ಸ್ನ ಕಂಚಿನ ಸಾಧನೆಗೆ 20 ಅಂಕ) ಗಳಿಸಿದ್ದರು.
ದೇಶದ ಉಳಿದ ಯಾವ ಅಥ್ಲೀಟ್ ಕೂಡ ಇಷ್ಟು ಅಂಕ ಗಳಿಸಿರಲಿಲ್ಲ. ಆದರೆ, 2015 ಜುಲೈ 31ರಂದು ರಚನೆಯಾಗಿದ್ದ ಕೇರಳ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಾಲಿ ಅವರ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ಈ ಅಂಕಗಳನ್ನು ಪರಿಗಣಿಸದೆ ಸಾನಿಯಾ ಮಿರ್ಜಾ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಇದನ್ನು ಕೇಂದ್ರ ಸರ್ಕಾರ ಪರಿಗಣಿಸಿತ್ತು.