ಭಾರತದ ಸ್ಟಾರ್ ಶಟ್ಲರ್, 2022ರ ಕಾಮನ್ವೆಲ್ತ್ ಗೇಮ್ಸ್ನ ಚಿನ್ನದ ಪದಕ ವಿಜೇತ ಲಕ್ಷ್ಯ ಸೇನ್ ಬುಧವಾರ ಭಾರತದ ಪ್ರಧಾನಿ ನರೇಂದ್ ಮೋದಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ವಿದೇಶಾಂಗ ಸಚಿವ ಎಸ್ ಜಯ್ಶಂಕರ್ ಅವರ ಸಹಾಯ ಕೇಳಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಪಾನ್ ಹಾಗೂ ಚೀನಾ ಓಪನ್ನಲ್ಲಿ ಭಾಗವಹಿಸಲು ಸಿದ್ದವಾಗಿರುವ ತಮಗೆ ವೀಸಾ ಸಮಸ್ಯೆ ಉಂಟಾಗಿದ್ದು ಪರಿಹಾರಕ್ಕಾಗಿ ನೆರವು ಕೇಳಿದ್ದಾರೆ ಭಾರತದ ಶಟ್ಲರ್.
ವಿಶ್ವದ 17ನೇ ಶ್ರೇಯಾಂಕದ ಆಟಗಾರನಾಗಿರುವ ಲಕ್ಷ್ಯ ಸೇನ್ ಅಕ್ಟೋಬರ್ 30ರಂದು ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಈವರೆಗೂ ವೀಸಾ ಲಭ್ಯವಾಗಿಲ್ಲದ ಕಾರಣ ಇದೀಗ ಅವರು ಸರ್ಕಾರದ ನೆರವು ಕೇಳಿದ್ದಾರೆ. ಮುಂದಿನ ಶನಿವಾರ ಅವರು ಜಪಾನ್ಗೆ ಪ್ರಯಾಣಿಸಬೇಕಿದೆ ಎಂದು ಅವರು ತಮ್ಮ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ.

"ನಾನು ಮುಂದಿನ ಶನಿವಾರ ಜಪಾನ್ ಮತ್ತು ಚೀನಾ ಓಪನ್ಗಾಗಿ ಪ್ರಯಾಣಿಸಬೇಕಿದೆ. ನಾನು ಮತ್ತು ನನ್ನ ತಂಡ ಅಕ್ಟೋಬರ್ 30, 2023ರಂದು ವೀಸಾಗಾಗಿ ಅರ್ಜಿ ಸಲ್ಲಿಸಿದ್ದೆವು. ಆದರೆ ಈವರೆಗೂ ವೀಸಾ ದೊರೆತಿಲ್ಲ. ನಾನು ಚೀನಾ ವೀಸಾಗೂ ಅರ್ಜಿ ಸಲ್ಲಿಸಿದ್ದೆ. ನನಗೆ ನನ್ನ ಕೋಚ್ ಹಾಗೂ ಫೀಸಿಯೋಗೆ ವೀಸಾದ ತುರ್ತು ಅಗತ್ಯವಿದೆ. ದಯವಿಟ್ಟು ಸಹಾಯ ಮಾಡಿ" ಎಂದು ಲಕ್ಷ್ಯ ಸೇನ್ ಕೇಂದ್ರ ಸಚಿವ ಅನುರಾಹ್ ಠಾಕೂರ್, ಪ್ರಧಾನಿ ಮೋದಿ ಕಛೇರಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.
ನವೆಂಬರ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಪ್ರತಿಭೆಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 14 ರಿಂದ 19 ರವರೆಗೆ ಜಪಾನ್ ಮಾಸ್ಟರ್ಸ್ ಮತ್ತು ನವೆಂಬರ್ 21 ರಿಂದ 26 ರವರೆಗೆ ಚೀನಾ ಮಾಸ್ಟರ್ಸ್ನಲ್ಲಿ ಭಾರತೀಯ ಶಟ್ಲರ್ಗಳು ಭಾಗವಹಿಸಲಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ನಲ್ಲಿ ಇತಿಹಾಸ ಬರೆದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡದ ಭಾಗವಾಗಿದ್ದಾರೆ ಲಕ್ಷ್ಯ ಸೇನ್.