ಜುಲೈ 12 ಶುಕ್ರವಾರ, ಬಹುನಿರೀಕ್ಷಿತ 2024ರ ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಈಗ ಕೇವಲ ಎರಡು ವಾರಗಳು ಮಾತ್ರ ಉಳಿದಿವೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧವಾಗಿರುವ ಭಾರತದ ಕ್ರೀಡಾಪಟುಗಳಲ್ಲಿ ಉತ್ಸಾಹ ಹೆಚ್ಚುತ್ತಿದೆ.
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಅಥ್ಲೀಟ್ಗಳಿಗೆ ಹಳೆಯ ಎಲ್ಲಾ ದಾಖಲೆಗಳನ್ನು ಮುರಿಯುವ ಸುವರ್ಣಾವಕಾಶವಿದೆ. ಏಕೆಂದರೆ ಭಾರತ ತಂಡವು ವಿಶ್ವದ ಅನೇಕ ಅತ್ಯುತ್ತಮ ಕ್ರೀಡಾಪಟುಗಳನ್ನು ಒಳಗೊಂಡಿದೆ.

ಒಲಿಂಪಿಕ್ಸ್ ಈ ವರ್ಷದ ಅತಿದೊಡ್ಡ ಕ್ರೀಡಾಕೂಟವಾಗಿದ್ದು, ಜುಲೈ 26 ರಿಂದ ಆಗಸ್ಟ್ 11 ರವರೆಗೆ ಪ್ಯಾರಿಸ್ನಲ್ಲಿ ನಡೆಯಲಿದೆ. ಕಳೆದ ಬಾರಿ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಗೆದ್ದಿತ್ತು. ಇಲ್ಲಿಯವರೆಗೆ, ಇದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರ ಅತ್ಯುತ್ತಮ ಪ್ರದರ್ಶನವಾಗಿತ್ತು.
ಇದರೊಂದಿಗೆ 2012ರ ಲಂಡನ್ ಒಲಿಂಪಿಕ್ಸ್ನ ದಾಖಲೆಯನ್ನು ಮುರಿದರು. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತ 6 ಪದಕ ಗೆದ್ದಿತ್ತು. ಇದೀಗ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕಾಗಿ ಪದಕಗಳನ್ನು ಗೆಲ್ಲಬಲ್ಲ 5 ಬಲಿಷ್ಠ ಕ್ರೀಡಾಪಟುಗಳ ಕುರಿತು ಮಾಹಿತಿ ಇಲ್ಲಿದೆ.
ಭಾರತದ 'ಗೋಲ್ಡನ್ ಬಾಯ್'ಖ್ಯಾತಿಯ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ನೀರಜ್ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕವನ್ನು ಗೆಲ್ಲುವ ಮೂಲಕ ಬಹುಕಾಲದ ಕನಸನ್ನು ನನಸಾಗಿಸಿದ್ದರು.

ಇದೀಗ ಪ್ಯಾರಿಸ್ ಕ್ರೀಡಾಕೂಟದಲ್ಲಿ ಹರಿಯಾಣದ ಅಥ್ಲೀಟ್ ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಲು ಸಿದ್ಧರಾಗಿದ್ದಾರೆ. ಫಿನ್ಲ್ಯಾಂಡ್ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್ನಲ್ಲಿ 85.97 ಮೀಟರ್ಗಳ ಆಕರ್ಷಕ ಎಸೆತದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.
ಇದರೊಂದಿಗೆ ಚೋಪ್ರಾ ಇದೀಗ ಸತತ ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಇತಿಹಾಸವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ದೇಶದ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಭಾರತ ಅಥ್ಲೀಟ್ಸ್ ತಂಡವನ್ನು ಕೂಡ ನೀರಜ್ ಚೋಪ್ರಾ ಮುನ್ನಡೆಸುತ್ತಿದ್ದಾರೆ.
2023ರಲ್ಲಿ ಗಾಯಗಳ ಹೊರತಾಗಿಯೂ, ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಪ್ಯಾರಿಸ್ ಕ್ರೀಡಾಕೂಟಕ್ಕೆ ಪುನರಾಗಮನವನ್ನು ಮಾಡಲು ಸಿದ್ಧರಾಗಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನ ಮೊದಲ ದಿನವೇ ಮೀರಾಬಾಯಿ ಚಾನು ಭಾರತಕ್ಕೆ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಮೊದಲ ದಿನವೇ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು. ಹೀಗಾಗಿ ಮೀರಾಬಾಯಿ ಮೇಲು ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಚೊಚ್ಚಲ ಒಲಿಂಪಿಕ್ಸ್ಗೆ ಪದಾರ್ಪಣೆ ಮಾಡಲು ತಯಾರಿ ನಡೆಸುತ್ತಿರುವ ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರು ಕೂಡ ಪ್ಯಾರಿಸ್ನಲ್ಲಿ ಪದಕ ಗೆಲ್ಲುವ ಬಯಕೆಯನ್ನು ಭಾರತೀಯ ಅಭಿಮಾನಿಗಳು ಹೊತ್ತಿದ್ದಾರೆ.
51 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸುವ ನಿಖತ್, 2019 ರಲ್ಲಿ ಬಲ್ಗೇರಿಯಾದಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಮೆಂಟ್ನಲ್ಲಿ ಚಿನ್ನದ ಪದಕ ಮತ್ತು ಫೆಬ್ರವರಿ 2024ರಲ್ಲಿ ನಡೆದ 75ನೇ ಆವೃತ್ತಿಯಲ್ಲಿ ಬೆಳ್ಳಿ ಪದಕ ಸೇರಿದಂತೆ ಅನೇಕ ಯಶಸ್ಸನ್ನು ಗಳಿಸಿದ್ದಾರೆ.
ಮೇ ತಿಂಗಳಲ್ಲಿ ನಡೆದ ಎಲೋರ್ಡಾ ಕಪ್ನಲ್ಲಿ ನಿಖತ್ ಗೆಲುವು ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಸ್ತುತ ಜರ್ಮನಿಯಲ್ಲಿ 28 ವರ್ಷದ ನಿಖತ್ ಇತರ ಭಾರತದ ಬಾಕ್ಸರ್ಗಳೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
ತನ್ನ ಎರಡನೇ ಒಲಿಂಪಿಕ್ಸ್ನಲ್ಲಿ ಮಹತ್ತರ ಸಾಧನೆ ಮಾಡಲು ಭಾರತದ ವೃತ್ತಿಪರ ಶೂಟರ್ ಮನು ಭಾಕರ್ ಸಜ್ಜಾಗಿದ್ದಾರೆ. ಇತ್ತೀಚಿನ ತಮ್ಮ ಪ್ರದರ್ಶನಗಳಿಂದ ಪಡೆದ ಆತ್ಮವಿಶ್ವಾಸದೊಂದಿಗೆ ಪ್ಯಾರಿಸ್ ಮನು ಭಾಕರ್ ಒಲಿಂಪಿಕ್ಸ್ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಟೋಕಿಯೊದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಗುರಿ ತಪ್ಪಿದ ಬಳಿಕ, 22 ವರ್ಷದ ಭಾಕರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿಶೇಷವಾಗಿ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 25 ಮೀ ಪಿಸ್ತೂಲ್ ತಂಡ ಈವೆಂಟ್ನಲ್ಲಿ ಚಿನ್ನದ ಪದಕ ಗೆದ್ದಿರುವುದು ಭಾಕರ್ ಅವರ ಸಾಮರ್ಥ್ಯವನ್ನು ತೋರಿಸುತ್ತದೆ.
ಅಕ್ಟೋಬರ್ನಲ್ಲಿ ಚಾಂಗ್ವಾನ್ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ 2023ರಲ್ಲಿ ಮಹಿಳೆಯರ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆಯುವ ಮೂಲಕ ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ ಕೋಟಾವನ್ನು ಪಡೆದಿದ್ದಾರೆ.
ಮಹಿಳೆಯರ 10ಮೀ ಏರ್ ಪಿಸ್ತೂಲ್ ಮತ್ತು ಮಹಿಳೆಯರ 25ಮೀ ಪಿಸ್ತೂಲ್ ಸ್ಪರ್ಧೆಯಲ್ಲಿರುವ ಭಾಕರ್ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ವಿಶ್ವ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪದಕ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಟೋಕಿಯೋ ಗೇಮ್ಸ್ನಲ್ಲಿ ಆರಂಭಿಕ ನಿರ್ಗಮನದ ಹೊರತಾಗಿಯೂ, ಸ್ವಾತಿಕ್ ಮತ್ತು ಚಿರಾಗ್ ಜೋಡಿಯ ಪ್ರದರ್ಶನಗಳು ಸುಧಾರಿಸಿದೆ.
2022ರಲ್ಲಿ ಸ್ವಾತಿಕ್ ಮತ್ತು ಚಿರಾಗ್ ಜೋಡಿ ಭಾರತದ ಥಾಮಸ್ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಮತ್ತು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದರು.
2023ರಲ್ಲಿ, ಇಬ್ಬರೂ ಸ್ವಿಸ್ ಓಪನ್, ಬ್ಯಾಡ್ಮಿಂಟನ್ ಏಷ್ಯನ್ ಚಾಂಪಿಯನ್ಶಿಪ್ ಮತ್ತು ಇಂಡೋನೇಷಿಯನ್ ಓಪನ್ನಲ್ಲಿ ವಿಜಯಗಳೊಂದಿಗೆ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸಿದ್ದರಯ. ಮಾರ್ಚ್ 2024 ರಲ್ಲಿ, ಇಬ್ಬರೂ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದರು.
ಆ ನಂತರ ಮೇ ತಿಂಗಳಲ್ಲಿ ಥೈಲ್ಯಾಂಡ್ ಓಪನ್ನಲ್ಲಿ ಗೆಲುವು ಸಾಧಿಸಿದ್ದರು. ಹೀಗಾಗಿ ಇವರ ಫಾರ್ಮ್ ನೋಡಿದರೆ ಈ ಬಾರಿ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಪದಕ ಗೆಲ್ಲುವ ಭರವಸೆ ಮೂಡಿದೆ.
ಮನು ಭಾಕರ್, ನಿಖತ್ ಜರೀನ್, ಮೀರಾಬಾಯಿ ಚಾನು, ನೀರಜ್ ಚೋಪ್ರಾ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ