
ಕೌಲೂನ್, ನವೆಂಬರ್ 15: ಭಾರತದ ಸ್ಟಾರ್ ಶಟ್ಲರ್ ಕಿದಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಅವರು ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆದರೆ ಮಹಿಳಾ ವಿಭಾಗದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಪಂದ್ಯಾಟದಿಂದ ಹೊರ ಬಿದ್ದಿದ್ದಾರೆ.
ಗುರುವಾರ (ನವೆಂಬರ್ 15) ನಡೆದ ಪುರಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ವಿಶ್ವ ನಂ.4ರ ಆಟಗಾರ ಶ್ರೀಕಾಂತ್, ಭಾರತದವರೇ ಆದ ಎಚ್ಎಸ್ ಪ್ರಣಯ್ ಅವರನ್ನು ರೋಚಕ ರೀತಿಯಲ್ಲಿ 18-21, 30-29, 21-18 ಅಂತರದಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಗಿಟ್ಟಿಸಿಕೊಂಡರು. 1 ಗಂಟೆ 7 ನಿಮಿಷಗಳ ಕಾದಾಟ ಇಬ್ಬರ ಮಧ್ಯೆ ನಡೆಯಿತು.
ಒಲಿಂಪಿಕ್ ಚಾಂಪಿಯನ್ ಚೀನಾ ಬಲಾಡ್ಯ ಲಿನ್ ಡಾನ್ ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದಿದ್ದರಿಂದ ಭಾರತ ಮತ್ತೊಬ್ಬ ಆಟಗಾರ ಸಮೀರ್ ಅವರಿಗೂ ಕ್ವಾರ್ಟರ್ ಫೈನಲ್ಗೆ ಮುನ್ನಡೆಯ ಅವಕಾಶ ಲಭಿಸಿತು. ಆದರೆ ಪಿವಿ ಸಿಂಧು ಸೌತ್, ಕೊರಿಯಾದ ಸುಂಗ್ ಜಿ ಹ್ಯುನ್ ಅವರೆದುರು 24-26, 20-22ರಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.