
ನವದೆಹಲಿ, ಆಗಸ್ಟ್ 27: ಬಿಡ್ಲ್ಯೂಎಫ್ ವರ್ಲ್ಡ್ ಚಾಂಪಿಯನ್ನಲ್ಲಿ ಭಾರತಕ್ಕೆ ಐತಿಹಾಸಿಕ ಬಂಗಾರ ಗೆದ್ದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಅಭಿನಂದಿಸಿದ್ದಾರೆ. ಪ್ರಧಾನಿ ಭೇಟಿಯ ವೇಳೆ ಸಿಂಧು ಜೊತೆ ಕ್ರೀಡಾ ಸಚಿವ ಕಿರೆನ್ ರಿಜಿಜು ಮತ್ತು ಬ್ಯಾಡ್ಮಿಟನ್ ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಇದ್ದರು.
ಸ್ವಿಟ್ಜರ್ಲೆಂಡ್ನ ಬಾಸೆಲ್ನಲ್ಲಿ ಭಾನುವಾರ (ಆಗಸ್ಟ್ 25) ನಡೆದ ಬಿಡಬ್ಲ್ಯೂಎಫ್ ವರ್ಲ್ಡ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸಿಂಧು, ಮಾಜಿ ಚಾಂಪಿಯನ್, ಜಪಾನ್ನ ನೊಝೋಮಿ ಒಕುಹರ ಅವರನ್ನು 21-7, 21-7ರ ನೇರ ಸೆಟ್ನಿಂದ ಸೋಲಿಸಿ ಚಿನ್ನ ಗೆದ್ದಿದ್ದರು. ಈ ಟೂರ್ನಿಯಲ್ಲಿ ಭಾರತೀಯೆಯೊಬ್ಬಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಇದೇ ಮೊದಲು.
ಮಂಗಳವಾರ (ಆಗಸ್ಟ್ 27) ಸಿಂಧುವನ್ನು ಭೇಟಿಯಾದ ಮೋದಿ, ವಿಶ್ವ ವಿಜೇತೆಯನ್ನು ಅಭಿನಂದಿಸುತ್ತಿರುವ ಚಿತ್ರಗಳನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಜೊತೆಗೆ 'ಚಿನ್ನದೊಂದಿಗೆ ದೇಶಕ್ಕೆ ಅತೀವ ಅಂಭ್ರಮ ತಂದ ಭಾರತದ ಹೆಮ್ಮೆ ಪಿವಿ ಸಿಂಧು ಅವರನ್ನು ಭೇಟಿಯಾಗಿ, ಅಭಿನಂದಿಸಲಾಯಿತು. ಭವಿಷ್ಯದ ದಿನಗಳಿಗೆ ಶುಭ ಹಾರೈಸಲಾಯ್ತು,' ಎಂದು ಬರೆದುಕೊಂಡಿದ್ದಾರೆ.
ಬಂಗಾರ ಗೆದ್ದ ಬಳಿಕ ಮಾತನಾಡಿದ್ದ ಸಿಂಧು, 'ಖುಷಿಯನ್ನು ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ. ಈ ಕ್ಷಣಕ್ಕಾಗಿ ತುಂಬಾ ಕಾದಿದ್ದೆ,' ಎಂದು ಸಂಭ್ರಮ ವ್ಯಕ್ತಪಡಿಸಿದ್ದರು. ಈ ಆವೃತ್ತಿಯ ಫೈನಲ್ನಲ್ಲಿ ಸಿಂಧು ವಿರುದ್ಧ ಸೋತ ಒಕುಹರ, 2017ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದವರು.