
ಪ್ರಸ್ತುತ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಕಳೆದ ಶನಿವಾರ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಸೆಮಿಫೈನಲ್ ಹಂತದಲ್ಲಿ ಸೋಲುವುದರ ಮೂಲಕ ಹೊರ ಬಿದ್ದಿದ್ದಾರೆ.
ಜಪಾನ್ನ ಅಕೇನ್ ಯಮಗುಚಿ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದ ಮೊದಲ ಆಟದಲ್ಲಿ 21-13 ಸೆಟ್ಗಳ ಅಂತರದಿಂದ ಬೃಹತ್ ಮುನ್ನಡೆಯನ್ನು ಸಾಧಿಸಿದ್ದ ಪಿವಿ ಸಿಂಧು ದ್ವಿತೀಯ ಆಟದಲ್ಲಿ 19-21 ಸೆಟ್ಗಳ ಹಿನ್ನಡೆ ಅನುಭವಿಸಿದರು. ಇನ್ನು ಅಂತಿಮ ಆಟದಲ್ಲಿಯೂ 16-21 ಸೆಟ್ಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದ ಪಿವಿ ಸಿಂಧು ಪಂದ್ಯವನ್ನು ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇನ್ನು ಇದೇ ಪಂದ್ಯದ ವೇಳೆ ಪಿ ವಿ ಸಿಂಧು ತಾಳ್ಮೆ ಕಳೆದುಕೊಂಡು ಚೇರ್ ಅಂಪೈರ್ ವಿರುದ್ಧ ಮೈದಾನದಲ್ಲಿಯೇ ವಾಗ್ದಾಳಿ ನಡೆಸಿರುವ ಘಟನೆ ನಡೆದಿದೆ. ಹೌದು, ಪಂದ್ಯದ ಎರಡನೇ ಆಟದ ಸಂದರ್ಭದಲ್ಲಿ ಪಿವಿ ಸಿಂಧು ಸರ್ವ್ ಮಾಡುವುದರಲ್ಲಿ ವಿಳಂಬ ಮಾಡಿದರು ಎಂಬ ಕಾರಣಕ್ಕೆ ಚೇರ್ ಅಂಪೈರ್ ಪೆನಾಲ್ಟಿ ಹೇರಿದರು. ತೀರ್ಪುಗಾರರ ಈ ನಿರ್ಧಾರದಿಂದ ಪಿವಿ ಸಿಂಧು ಆ ಸುತ್ತಿನಲ್ಲಿ ಕಡಿಮೆ ಅಂಕ ಪಡೆದು ಕೊಂಚ ಅಂತರದಲ್ಲಿ ಸೋಲನ್ನು ಅನುಭವಿಸಿದರು.
ಈ ಕಾರಣದಿಂದಾಗಿ ಕೋಪಗೊಂಡ ಪಿವಿ ಸಿಂಧು ಪಂದ್ಯದ ವೇಳೆಯೇ ಚೇರ್ ಅಂಪೈರ್ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವಿನ ವಾಗ್ವಾದ ಹೆಚ್ಚಾಗುವುದನ್ನು ಗಮನಿಸಿದ ಮುಖ್ಯ ತೀರ್ಪುಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಯಥಾಸ್ಥಿತಿಗೆ ತರುವತ್ತ ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಮುಖ್ಯ ತೀರ್ಪುಗಾರರ ಜೊತೆ ಕೆಲ ಸಮಯ ಮಾತನಾಡಿದ ಪಿ ವಿ ಸಿಂಧು ತಾನು ಸರ್ವ್ ಮಾಡಲು ಸಿದ್ಧರಿದ್ದರೂ ಸಹ ಎದುರಾಳಿ ಸಿದ್ಧರಿರಲಿಲ್ಲ ಹೀಗಾಗಿ ಸರ್ವ್ ಮಾಡುವುದು ತಡವಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಪಿವಿ ಸಿಂಧು ಚೇರ್ ಅಂಪೈರ್ ವಿರುದ್ಧ ವಾಗ್ವಾದ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.