ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಇದೇ ಜುಲೈ 14 ರಂದು ತಮ್ಮ ಹಾಗೂ ಪರುಪಳ್ಳಿ ಕಶ್ಯಪ್ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ. ಹೀಗಾಗಿ ನಾವು ವಿಚ್ಛೇದನಕ್ಕೆ ಮುಂದಾಗಿದ್ದೇವೆ ಎಂದು ಸಾಮಾಜಿಕ ತಾಣದಲ್ಲಿ ತಿಳಿಸಿದ್ದರು. ಆದರೆ ಇದಾದ ಕೇವಲ 19 ದಿನಗಳ ಅಂತರದಲ್ಲಿ ಇವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ತಮ್ಮ ಸಂಬಂಧ ಮುಂದುವರೆಸಲು ಮತ್ತೊಂದು ಅವಕಾಶ ನೀಡಿದ್ದಾರೆ. ಈ ಬಗ್ಗೆ ಸೈನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಬಹಿರಂಗ ಪಡಿಸಿದ್ದಾರೆ.
ಸೈನಾ ನೆಹ್ವಾಲ್ ಶನಿವಾರ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಸೈನಾ ಹಾಗೂ ಕಶ್ಯಪ್ ಬೆಟ್ಟಗಳಲ್ಲಿ ಸುತ್ತಾಡುತ್ತಿರುವ ಫೋಟೋಗಳನ್ನು ಕಾಣಬಹುದಾಗಿದೆ. ಅಲ್ಲದೆ ಫೋಟೋದ ಕೆಳಗಡೆ ಸೈನಾ ಕೆಲವೊಮ್ಮೆ ದೂರವಾದಾಗಲೇ ಜನರ ಮಹತ್ವ ಅರಿವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ನಾವಿಬ್ಬರೂ ಮತ್ತೊಮ್ಮೆ ಪ್ರಯತ್ನಿಸುತ್ತಿದ್ದೇವೆ' ಎಂದು ಬರೆದಿದ್ದಾರೆ. ಈ ಪೋಸ್ಟ್ ಸಹ ವೈರಲ್ ಆಗುತ್ತಿದೆ.

ಸೈನಾ ನೆಹ್ವಾಲ್ ಜುಲೈ 13ರ ರಾತ್ರಿಯಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸ್ಟೋರಿ ಹಂಚಿಕೊಂಡಿದ್ದರು. ಈ ವೇಳೆ ಅವರು ಪತಿ ಪರುಪಳ್ಳಿ ಕಶ್ಯಪ್ ಅವರಿಂದ ಬೇರ್ಪಡುತ್ತಿರುವುದಾಗಿ ಘೋಷಿಸಿದ್ದರು. ಈ ವೇಳೆ ಸೈನಾ ಜೀವನವು ಒಮ್ಮೊಮ್ಮೆ ನಮ್ಮನ್ನು ಬೇರೆ ಬೇರೆ ಹಾದಿಗಳಲ್ಲಿ ಕರೆದೊಯ್ಯುತ್ತದೆ ಎಂದು ಬರೆದಿದ್ದರು. ನಾನು ಹಾಗೂ ಕಶ್ಯಪ್ ಯೋಚಿಸದ ಬಳಿಕವೇ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದರು. ಅಲ್ಲದೆ ನೆನಪುಗಳು ಮಾತ್ರ ಸಾಕು, ಬದಲಿಗೆ ಏನನ್ನೂ ಬಯಸುವುದಿಲ್ಲ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು.
ಭಾರತ ತಂಡದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಲಂಡನ್ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು. ಈ ಮೂಲಕ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪದಕ ಗೆದ್ದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೆ ವಿಶ್ವ ಬ್ಯಾಡ್ಮಿಂಟನ್ ಮಹಿಳಾ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆದ ಹಿರಿಮೆ ತಮ್ಮದಾಗಿಸಿಕೊಂಡಿದ್ದರು. ಇನ್ನು ಕಶ್ಯಪ್ ಸಹ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಬಂಗಾರದ ಸಾಧನೆಯನ್ನು ಮಾಡಿದ ಕೀರ್ತಿ ಹೊಂದಿದ್ದಾರೆ.