
ನವದೆಹಲಿ, ಮಾರ್ಚ್ 30: ಆರು ಬಾರಿಯ ವಿಶ್ವ ಚಾಂಪಿಯನ್, ಬಾಕ್ಸರ್ ಮೇರಿ ಕೋಮ್ ತನ್ನ ಒಂದು ತಿಂಗಳ ಸಂಬಳವನ್ನೇ ಪ್ರಧಾನಿ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ. ರಾಜ್ಯಸಭಾ ಎಂಪಿಯಾಗಿ ಒಂದು ತಿಂಗಳಲ್ಲಿ ಪಡೆಯಲಿದ್ದ ಸುಮಾರು 1 ಲಕ್ಷ ರೂ. ಸಂಬಳದ ಹಣವನ್ನು ಮೇರಿ, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ನೀಡಿದ್ದಾರೆ.
'ಕೊರೊನಾವೈರಸ್ ವಿರುದ್ಧದ ಹೋರಾಟಕ್ಕಾಗಿ ನಾನು ನನ್ನ ರಾಜ್ಯಸಭಾ ಎಂಪಿಯಾಗಿ ಪಡೆಯಲಿದ್ದ ಒಂದು ತಿಂಗಳ ಸಂಬಳವನ್ನು ನೀಡಲು ಬಯಸಿದ್ದೇನೆ. ದಯವಿಟ್ಟು ನನ್ನ ಖಾತೆಯಿಂದ 1 ಲಕ್ಷ ರೂ. ಹಣವನ್ನು ಡೆಬಿಟ್ ಮಾಡಿ,' ಎಂದು ಮೇರಿ ತನ್ನ ಸಂಬಳದ ಖಾತೆಯಿರುವ ಬ್ಯಾಂಕಿಗೆ ಬರೆದಿರುವ ಪತ್ರದಲ್ಲಿ ಬರೆದಿದ್ದಾರೆ.
ಕಾಮನ್ವೆಲ್ತ್ ಗೇಮ್ ಮತ್ತು ಏಷ್ಯನ್ ಗೇಮ್ಸ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ, ಮಣಿಪುರದವರಾದ ಮೇರಿ ಕೋಮ್ 2016ರಲ್ಲಿ ರಾಜ್ಯಸಭಾ ಎಂಪಿಯಾಗಿ ಆಯ್ಕೆಯಾಗಿದ್ದರು. ಮೇರಿ, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಲು ನನ್ನ ಮುಂದಿನ ಎಂಪಿಎಲ್ಎಡಿಎಸ್ ಕಂತಿನಿಂದ ಒಂದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಕೂಡ ಕೋರಿಕೊಂಡಿದ್ದಾರೆ.
ಕ್ರೀಡಾರಂಗದ ಅನೇಕ ತಾರೆಯರು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ನೆರವು ನೀಡಿದ್ದರು. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ನೆರವಿನ ಮೌಲ್ಯ ತಿಳಿಸಿಲ್ಲ. ಆದರೆ ಸುರೇಶ್ ರೈನಾ 52 ಲಕ್ಷ, ಅಜಿಂಕ್ಯ ರಹಾನೆ 10 ಲಕ್ಷ, ಬಿಸಿಸಿಐ 51 ಕೋಟಿ, ಸೌರವ್ ಗಂಗೂಲಿ ಅಕ್ಕಿ ದಾನ, ಸಚಿನ್ 25 ಲಕ್ಷ, ಪಿವಿ ಸಿಂಧು 10 ಲಕ್ಷ ರೂ ನೆರವು ನೀಡಿದ್ದರು.