
ನವದೆಹಲಿ, ಜುಲೈ 11: ಭಾರತದ ಖ್ಯಾತ ಬಾಕ್ಸರ್ಗಳಾದ ವಿಕಾಸ್ ಕ್ರಿಶನ್, ಸತೀಶ್ ಕುಮಾರ್ ಮತ್ತು ನೀರಜ್ ಗೋಯಟ್ ಸಮಸ್ಯೆಯಲ್ಲಿದ್ದಾರೆ. ಪಾಟಿಯಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಎನ್ಐಎಸ್)ನಲ್ಲಿನ ಸಹ ಕ್ರೀಡಾಪಟುಗಳ ಜೊತೆ ಬೆರೆಯುವುದರ ಮೂಲಕ ಮೂವರೂ ತಮ್ಮ ಐಸೊಲೇಶನ್ ನಿಯಮ ಮೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಬಂಗಾರದ ಪದಕ ವಿಜೇತ ಬಾಕ್ಸರ್ ವಿಕಾಸ್ ಕ್ರಿಶನ್ ಸೇರಿ ಸತೀಶ್ ಕುಮಾರ್, ನೀರಜ್ ಗೋಯಟ್ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್)ದಿಂದ ತನಿಖೆ ಎದುರಿಸಬೇಕಾಗಿ ಬಂದಿದೆ.
ಪುರುಷರ 69ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ವಿಕಾಸ್ ಕ್ರಿಶನ್ ಮತ್ತು +91 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಸತೀಶ್ ಕುಮಾರ್ ಈಗಾಗಲೇ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಆದರೆ ಟೋಕಿಯೋ ಒಲಿಂಪಿಕ್ಸ್ ಸಲುವಾಗಿ ಆಗಸ್ಟ್ 1ರಂದು ನಿಗದಿಯಾಗಿದ್ದ ರಾಷ್ಟ್ರೀಯ ಕ್ಯಾಂಪ್ಗಾಗಿ ಒಂದೇ ಜಾಗದಲ್ಲಿದ್ದ ಇತರ ಬಾಕ್ಸರ್ಗಳನ್ನು ಭೇಟಿ ಮಾಡಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪ ಖ್ಯಾತ ಬಾಕ್ಸರ್ಗಳ ಮೇಲಿದೆ.
'ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಶೀಘ್ರ ತನಿಖೆ ನಡೆಸಿ ಘಟನೆಗೆ ಸಂಬಂಧಿಸಿ ಕ್ರೀಡಾಪಟುಗಳ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ,' ಎಂದು ಸಾಯ್ ತನ್ನ ಹೇಳಿಕೆ ಮೂಲಕ ತಿಳಿಸಿದೆ. ಆರೋಪ ಕೇಳಿ ಬಂದಿರುವ ಬಾಕ್ಸರ್ಗಳಲ್ಲಿ ವಿಕಾಸ್, ಸತೀಶ್ ಮತ್ತು ನೀರಜ್ ಹೆಸರುಗಳು ಸೇರಿದೆ ಎಂದು ಸಾಯ್ ಹೇಳಿದೆ.