18ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳ ಮನಸ್ಸಿಗೆ ಖುಷಿ ನೀಡಿತ್ತು. ಆದರೆ ಸಂಭ್ರಮಾಚರಣೆಯ ವೇಳೆ ನಡೆದ ಘಟನೆ ಎಲ್ಲರು ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಹರಿಹಾಯುವಂತೆ ಮಾಡಿತ್ತು. ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯನ್ನು ಅಭಿಮಾನಿಗಳ ಜೊತೆಗೆ ಆಚರಿಸುವ ವೇಳೆ 11 ಜನರು ಕಾಲ್ತುಳಿತಕ್ಕೆ ಬಲಿಯಾದರು. ಇದರಿಂದ ಬಿಸಿಸಿಐ ಹಾಗೂ ಐಪಿಎಲ್ನತ್ತ ಎಲ್ಲರೂ ಬೊಟ್ಟು ತೋರಿಸಲು ಆರಂಭಿಸಿದರು.
ಈ ವೇಳೆ ಬಿಸಿಸಿಐ ಅಧಿಕಾರಿಗಳು ಕಾಲ್ತುಳಿತ ಪ್ರಕರಣ ಸಂಬಂವಿಸಿದ ಬಳಿಕ ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಕೈಗೊಳ್ಳುವುದಾಗಿ ತಿಳಿಸಿತ್ತು. ಇದಕ್ಕೆ ಪೂರಕವಾಗಿ ಬಿಸಿಸಿಐ 10 ಅಂಶಗಳ ಮಾರ್ಗಸೂಚಿಯನ್ನು ಹೊಂದಿದೆ ಎಂಬುದು ಈಗ ತಿಳಿದು ಬಂದಿದೆ. ಆದರೆ ಈ ಮಾರ್ಗಸೂಚಿಗಳಿಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡುವುದು ಬಾಕಿ ಇದೆ.

ಆರ್ಸಿಬಿ ಜೂನ್ 3ರಂದು ಅಹಮದಾಬಾದ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಆರ್ಸಿಬಿ 17 ವರ್ಷಗಳ ಪ್ರಶಸ್ತಿ ಎತ್ತದ ಆಸೆ 18ನೇ ಆವೃತ್ತಿಯಲ್ಲಿ ಈಡೇರಿದೆ. ಈ ಸಂಭ್ರಮಾಚರಣೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಮಂಗಳವಾರ ತಡ ರಾತ್ರಿಯ ವರೆಗೂ ಇತ್ತು. ಬುಧವಾರ ಅಭಿಮಾನಿಗಳ ಜೊತೆ ಸಂಭ್ರಮಾಚರಣೆಯನ್ನು ಮಾಡುವುದಾಗಿ ಆರ್ಸಿಬಿ ಮ್ಯಾನೇಜ್ಮೆಂಟ್ ಹೇಳ್ತಾ ಇದ್ದಂತೆ, ಚಿನ್ನಸ್ವಾಮಿ ಅಂಗಳದತ್ತ ಅಭಿಮಾನಿಗಳ ದಂಡೇ ಆಗಮಿಸಿತು. ಸುಮಾರು 3 ಲಕ್ಷ ಅಭಿಮಾನಿಗಳು ಮೈದಾನದ ಸುತ್ತ ನೆರೆದಿದ್ದರಿಂದ ನೂಕು ನುಗ್ಗಲು ಆಗಿ ಕಾಲ್ತುಳಿತ ಸಂಭವಿಸಿ, 11 ಜನರು ಸಾವನ್ನಪ್ಪಿದರು. ಈ ಪ್ರಕರಣದಿಂದ ಬಿಸಿಸಿಐ ಹಾಗೂ ಐಪಿಎಲ್ಗೆ ಸಾಲು ಸಾಲು ಪ್ರಶ್ನೆಗಳನ್ನು ಮಾಡಿದರು. ಬಿಸಿಸಿಐ ಈಗ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಸಿ ಸಿದ್ಧ ಪಡಿಸಿದೆ.
ಪ್ರಶಸ್ತಿ ಗೆದ್ದ 3-4 ದಿನಗಳ ಒಳಗೆ ಸಂಭ್ರಮಾಚರಣೆಗೆ ಯಾವುದೇ ಅವಕಾಶ ಇಲ್ಲ.
ಆತುರದ ಮತ್ತು ಕಳಪೆ ನಿರ್ವಹಣೆಯ ಕಾರ್ಯಕ್ರಮಗಳನ್ನು ತಪ್ಪಿಸಲು ತ್ವರಿತ ಬದಲಾವಣೆಗೆ ಅನುಮತಿಸುವುದಿಲ್ಲ.
ಸಂಭ್ರಮಾಚರಣೆಯನ್ನು ಆಯೋಜಿಸುವ ಮೊದಲ ತಂಡಗಳು ಬಿಸಿಸಿಐನಿಂದ ಅನುಮತಿ ಪಡೆಯಬೇಕು.
ಬಿಸಿಸಿಐ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ.
ಸುರಕ್ಷತೆಗಾಗಿ ಕಡ್ಡಾಯವಾಗಿ ಪ್ರೋಟೋಕಾಲ್ಗಳನ್ನು ಪಾಲಿಸಬೇಕು.
ಆಟಗಾರರು ಹಾಗೂ ತಂಡ ಹೋಗುವ ಸ್ಥಳಗಳಲ್ಲಿ ಮಲ್ಟಿ ಲೇಯರ್ ಭದ್ರತೆ ಅವಶ್ಯ.
ಭದ್ರತಾ ಕಾರ್ಯಗಳು ವಿಮಾನ ನಿಲ್ದಾಣದಿಂದ ಹಿಡಿದು ಸಂಭ್ರಮಾಚಣೆ ನಡೆಯುವವರೆಗೆ ಖಚಿತ ಪಡಿಸಿಕೊಳ್ಳಬೇಕು.
ಈ ವೇಳೆ ಆಟಗಾರರು ಹಾಗೂ ಸಿಬ್ಬಂದಿಯ ರಕ್ಷಣೆ ಖಚಿತ ಪಡಿಸಿಕೊಳ್ಳಬೇಕು.
ಸಂಭ್ರಮಾಚರಣೆಗೆ, ಸ್ಥಳೀಯ ಅಧಿಕಾರಿಗಳು, ಜಿಲ್ಲಾ, ರಾಜ್ಯ ಪೊಲೀಸರಿಂದ ಅನುಮತಿ ಕಡ್ಡಾಯ.
ಸಂಭ್ರಮಾಚರಣೆ ನಡೆಸಲು ಅಧಿಕಾರಿಗಳು ಹಸಿರು ನಿಶಾನೆ ನೀಡಬೇಕು.
ಹೀಗೆ ಬಿಸಿಸಿಐ 10 ಅಂಶಗಳ ಮಾರ್ಗಸೂಚಿಗಳನ್ನು ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಬಾಕಿ ಇದೆ.