ಸರಿಯಾಗಿ 12 ವರ್ಷಗಳ ಹಿಂದೆ ಇದೇ ದಿನ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಇತಿಹಾಸ ಸೃಷ್ಟಿಸಿತ್ತು. ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಭಾರತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಸಂಭ್ರಮಿಸಿತ್ತು. ಮಹೇಂದ್ರ ಸಿಂಗ್ ಧೋನಿ ಸಿಕ್ಸ್ ಸಿಡಿಸುವ ಮೂಲಕ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.
ಭಾರತದ ಏಕದಿನ ವಿಶ್ವಕಪ್ ಗೆಲುವಿಗೆ 12 ವರ್ಷಗಳ ತುಂಬಿದ ಸಂದರ್ಭದಲ್ಲಿ ಐಸಿಸಿ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅಲ್ಲದೆ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನ ಲೋಗೋ ಕೂಡ ಬಿಡುಗಡೆಯಾಗಿದೆ. ವಿಶ್ವಕಪ್ ಆರಂಭಕ್ಕೆ ಇನ್ನೂ ಆರು ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ 10 ತಂಡಗಳು 48 ದಿನಗಳ ಕಾಲ ಪ್ರತಿಷ್ಠಿತ ಟೂರ್ನಿಯಲ್ಲಿ ಸೆಣೆಸಲಿವೆ.

2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನವರಸದಲ್ಲಿನ ಒಂಬತ್ತು ಭಾವನೆಗಳು ಸಂತೋಷ, ಶಕ್ತಿ, ವೇದನೆ, ಗೌರವ, ಹೆಮ್ಮೆ, ಶೌರ್ಯ, ವೈಭವ, ಅದ್ಭುತ ಮತ್ತು ಭಾವೋದ್ರೇಕಗಳಾಗಿವೆ, ಇದು ಪುರುಷರ ಕ್ರಿಕೆಟ್ ವಿಶ್ವಕಪ್ ಪ್ರಚೋದಿಸುವ ಪ್ರತಿಕ್ರಿಯೆಗಳನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತದೆ ಎಂದು ಹೇಳಿಕೆ ತಿಳಿಸಿದೆ. ನವರಸವನ್ನು ಪ್ರದರ್ಶಿಸಲು, ಐಸಿಸಿಯು ಭಾರತೀಯ ಲೆಜೆಂಡರಿ ಕಾಮೆಂಟೇಟರ್ ಹರ್ಷಾ ಭೋಗ್ಲೆ ಅವರ ಧ್ವನಿಯಲ್ಲಿ ವಿಷೇಶ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಸಚಿನ್ ತೆಂಡೂಲ್ಕರ್ ಕನಸು ನನಸು
2011ರ ಏಕದಿನ ವಿಶ್ವಕಪ್ ಗೆಲ್ಲುವುದು ಭಾರತಕ್ಕೆ ಮುಖ್ಯವಾಗಿತ್ತು. ಸಚಿನ್ ತೆಂಡೂಲ್ಕರ್ 7ನೇ ವಿಶ್ವಕಪ್ನಲ್ಲಿ ಆಡುತ್ತಿದ್ದರೂ, ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅದು ಅವರ ಕೊನೆಯ ವಿಶ್ವಕಪ್ ಟೂರ್ನಿಯಾಗಿತ್ತು. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ ನೇತೃತ್ವದ ಭಾರತ ತಂಡಕ್ಕೆ ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದು ಉತ್ತಮ ಅವಕಾಶವಾಗಿತ್ತು. ಮೊದಲನೇ ಪಂದ್ಯದಲ್ಲೇ ಬಾಂಗ್ಲಾದೇಶದ ವಿರುದ್ಧ 87 ರನ್ಗಳ ಗೆಲುವಿನ ಮೂಲಕ ಅಭಿಯಾನ ಆರಂಭಿಸಿತು.

ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಮೂರನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೂಡ 5 ವಿಕೆಟ್ಗಳ ಜಯ ಗಳಿಸಿತು. ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು 3 ವಿಕೆಟ್ಗಳಿಂದ ಸೋಲನುಭವಿಸಿತು. ವೆಸ್ಟ್ ಇಂಡೀಸ್ ವಿರುದ್ಧ ಭಾರತ 80 ರನ್ಗಳಿಂದ ಭರ್ಜರಿ ಜಯ ಸಾಧಿಸಿತು.
ಯಶಸ್ವಿಯಾಗಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲಾಕಿತ್ತು. ಆಸ್ಟ್ರೇಲಿಯಾ ನೀಡಿದ 260 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಯುವರಾಜ್ ಸಿಂಗ್ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಸುರೇಶ್ ರೈನಾ ಕೂಡ ಅಜೇಯ 34 ರನ್ ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು.
ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 29 ರನ್ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿ 260 ರನ್ ಗಳಿಸಿದ ಭಾರತ ಪಾಕಿಸ್ತಾನವನ್ನು 231 ರನ್ಗಳಿಗೆ ಆಲೌಟ್ ಮಾಡಿತ್ತು. ಸಚಿನ್ ತೆಂಡೂಲ್ಕರ್ 85 ರನ್ ಗಳಿಸಿ ಮಿಂಚಿದ್ದರು.
ಫೈನಲ್ನಲ್ಲಿ ರೋಚಕ ಗೆಲುವು
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 274 ರನ್ ಗಳಿಸಿತು. ಮಹೇಲ ಜಯವರ್ಧನೆ 103 ರನ್ ಗಳಿಸಿ ಮಿಂಚಿದರು. ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ಗೌತಮ್ ಗಂಭೀರ್ ಮತ್ತು ಎಂಎಸ್ ಧೋನಿ ಆಸರೆಯಾದರು. ಗಂಭೀರ್ 122 ಎಸೆತಗಳಲ್ಲಿ 97 ರನ್ ಗಳಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ 79 ಎಸೆತಗಳಲ್ಲಿ 8 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 91 ರನ್ ಗಳಿಸಿದರು. ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಎರಡನೇ ಏಕದಿನ ವಿಶ್ವಕಪ್ ಗೆದ್ದು ಕೊಟ್ಟರು.